• ಪ್ರತಿಭನ್ ಡಿಸಿ
ಬೆಂಗಳೂರು: ರಾತ್ರಿ ಮನೆ ಕನ್ನ ಕಳವು ಮಾಡುತಿದ್ದ ಮೂವರು ಬಂಧನ. 180 ಗ್ರಾಂ ಚಿನ್ನಾಭರಣ, 4 ಕೆ.ಜಿ. 800 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ 1 ದ್ವಿ ಚಕ್ರ ವಾಹನ ವಶ. ಇದರ ಒಟ್ಟು ಮೌಲ್ಯ ರೂ.18 ಲಕ್ಷ ರೂ.ಗಳು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬಾಣಸವಾಡಿ ಪೊಲೀಸ್ ಠಾಣಾ ಸರಹದ್ದಿನ ಸಂಪನ್ನ ಲೇಔಟ್, ಕಮ್ಮನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಪಿರ್ಯಾದುದಾರರು ನವೆಂಬರ್ 3 ರಂದು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರ್ಯಾದುದಾರರು ಅಕ್ಟೋಬರ್ 30 ರಂದು ತಮ್ಮ ಸ್ವಂತ ಊರಾದ ವೆಲ್ಲೂರಿಗೆ ಹೋಗಿರುತ್ತಾರೆ. ನವೆಂಬರ್ 2 ರಂದು ರಾತ್ರಿ ಮನೆಯ ಮಾಲೀಕರು ಪಿರ್ಯಾದುದಾರರಿಗೆ ಕರೆಮಾಡಿ, ಮನೆಯ ಬಾಗಿಲು ಮುರಿದಿರುವುದಾಗಿ ತಿಳಿಸಿದ್ದು, ಪಿರ್ಯಾದುದಾರರು ದಿನಾಂಕ: ನವೆಂಬರ್ 3 ರಂದು ಬೆಳಗಿನ ಜಾವ ಮನೆಯ ಬಳಿ ಬಂದು ನೋಡಲಾಗಿ, ಯಾರೋ ಅಪರಿಚಿತ ಕಳ್ಳರು ಮನೆಯ ಬಾಗಿಲನ್ನು ಮುರಿದು, ಕೊಠಡಿಯಲ್ಲಿದ್ದ ಬೀರುವಿನ ಲಾಕರನ್ನು ಒಡೆದು, ಲಾಕರ್ನಲ್ಲಿಟ್ಟಿದ್ದ 108 ಗ್ರಾಂ ಚಿನ್ನಾಭರಣಗಳು, 300 ಗ್ರಾಂ ಬಿಳ್ಳಿಯ ವಸ್ತುಗಳು ಮತ್ತು ರೂ.15 ಸಾವಿರ ನಗದನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಮನೆ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡಿರುತ್ತಾರೆ. ನವೆಂಬರ್ 24 ರಂದು ಬಾಣಸವಾಡಿ ಪೊಲೀಸರು ಠಾಣಾ ಸರಹದ್ದಿನಲ್ಲಿ ಗಸ್ತಿನಲ್ಲಿದ್ದಾಗ, ನಂಬರ್ ಪ್ಲೇಟ್ ಇಲ್ಲದ 1 ದ್ವಿ ಚಕ್ರವಾಹನದಲ್ಲಿ ಮೂವರು ವ್ಯಕ್ತಿಗಳು ಬರುತ್ತಿದ್ದು, ಅನುಮಾನಾಸ್ಪದವಾಗಿ ಕಂಡುಬಂದಿದ್ದು, ಅವರುಗಳನ್ನು ತಡೆದು ವಿಚಾರಣೆ ಮಾಡಲಾಗಿ ದ್ವಿ ಚಕ್ರ ವಾಹನವನ್ನು ಕಳವು ಮಾಡಿರುವುದಾಗಿ ಹಾಗೂ ಬಾಣಸವಾಡಿಯ ಪೊಲೀಸ್ ಠಾಣಾ ಸರಹದ್ದಿನ ಹಲವಾರು ಕಡೆಗಳಲ್ಲಿ ಮನೆ ಕನ್ನ ಕಳವು ಹಾಗೂ ಈ ಪ್ರಕರಣದಲ್ಲಿ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾರೆ. ಮೂವರು ಆರೋಪಿಗಳನ್ನು 1 ದ್ವಿ ಚಕ್ರ ವಾಹನ ಸಮೇತ ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ.
ನವೆಂಬರ 25 ರಂದು ವಶಕ್ಕೆ ಪಡೆದ ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿರುತ್ತದೆ.
ಪೊಲೀಸ್ ಕಸ್ಟಡಿಗೆ ಪಡೆದ ಆರೋಪಿಗಳನ್ನು ಸುಧೀರ್ಘವಾಗಿ ವಿಚಾರಣೆ ಮಾಡಲಾಗಿ ಪ್ರಕರಣದಲ್ಲಿ ಕಳವು ಮಾಡಿದ್ದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ಚಿಕ್ಕಪೇಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ತಯಾರಿಸುವ ಮತ್ತು ಪಾಲೀಸ್ ಮಾಡುವ ಅಂಗಡಿಯೊಂದರಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ ಮೇರೆಗೆ ನವೆಂಬರ 25 ರಂದು ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ಸ್ವೀಕರಿಸಿದ್ದ ವ್ಯಕ್ತಿಗೆ ನೋಟೀಸ್ ಜಾರಿಮಾಡಿದ್ದು, ಆ ವ್ಯಕ್ತಿಯು ನವೆಂಬರ 26 ರಂದು 180 ಗ್ರಾಂ ಚಿನ್ನಾಭರಣ ಮತ್ತು 4 ಕೆಜಿ 800 ಗ್ರಾಂ ಬೆಳ್ಳಿಯ ವಸ್ತುಗಳನ್ನು ಠಾಣೆಗೆ ತಂದು ಹಾಜರು ಪಡಿಸಿದ್ದನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಒಟ್ಟಾರೆ ಈ ಪ್ರಕರಣದ ಆರೋಪಿಗಳ ವಶದಿಂದ 180 ಗ್ರಾಂ ಚಿನ್ನಾಭರಣ ಮತ್ತು 4 ಕೆಜಿ 800 ಗ್ರಾಂ ಬೆಳ್ಳಿಯ ವಸ್ತುಗಳು ಹಾಗೂ 1 ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇದರ ಒಟ್ಟು ಮೌಲ್ಯ 18 ಲಕ್ಷ ರೂಪಾಯಿಗಳು.
ಈ ಪ್ರಕರಣದ ಆರೋಪಿಗಳ ಬಂಧನದಿಂದ ಬಾಣಸವಾಡಿ ಪೊಲೀಸ್ ಠಾಣೆಯ 9 ಮನೆ ಕಳವು ಪ್ರಕರಣಗಳು, ರಾಮಮೂರ್ತಿ ನಗರ ಪೊಲೀಸ್ ಠಾಣೆಯ 1 ಮನೆ ಕಳವು ಪ್ರಕರಣ ಮತ್ತು 1 ದ್ವಿ-ಚಕ್ರವಾಹನ ಕಳವು ಪ್ರಕರಣ ಸೇರಿದಂತೆ ಒಟ್ಟು 11 ಪ್ರಕರಣ ಪತ್ತೆಯಾಗಿರುತ್ತವೆ.
ಈ ಪ್ರಕರಣದ ಮೂವರು ಆರೋಪಿಗಳ ಪೈಕಿ ಇಬ್ಬರು ಆರೋಪಿಗಳು ಬೆಂಗಳೂರು, ಕೋಲಾರ ಜಿಲ್ಲೆಯ ಕೆ.ಜಿ.ಎಫ್ ಮತ್ತು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಘೋರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿರುತ್ತದೆ. ಡಿಸೆಂಬರ್ 4 ರಂದು ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲವು ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಕಾರ್ಯಾಚರಣೆಯನ್ನು ಪೂರ್ವ ವಿಭಾಗದ ಉಪ-ಪೊಲೀಸ್ ಕಮೀಷನರ್ ಡಿ.ದೇವರಾಜ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಬಾಣಸವಾಡಿ ಉಪ ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಉಮಾಶಂಕರ್.ಎಂ.ಹೆಚ್. ರವರ ನೇತೃತ್ವದಲ್ಲಿ ಬಾಣಸವಾಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅರುಣ್ ಸಾಳುಂಕೆ ರವರ ಉಸ್ತುವಾರಿಯಲ್ಲಿ ಅಧಿಕಾರಿ / ಸಿಬ್ಬಂದಿಯವರುಗಳು ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.