ರಾಜಕೀಯ Archives » Dynamic Leader
October 17, 2024
Home Archive by category ರಾಜಕೀಯ

ರಾಜಕೀಯ

ರಾಜಕೀಯ

ನವದೆಹಲಿ,
ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರ ಆದೇಶದ ಮೇರೆಗೆ ಮುಖ್ಯಮಂತ್ರಿ ಅತಿಶಿ ಅವರ ಅಧಿಕೃತ ನಿವಾಸ 6, ಫ್ಲಾಗ್‌ಸ್ಟಾಫ್ ರಸ್ತೆಯಿಂದ ಲಗೇಜ್ ಮತ್ತು ಇತರ ವಸ್ತುಗಳನ್ನು ಹೊರಹಾಕಲಾಗಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು, “ಈ ಕ್ರಮವು ಮುಖ್ಯಮಂತ್ರಿಯವರ ಅಧಿಕೃತ ನಿವಾಸವನ್ನು ವಶಪಡಿಸಿಕೊಳ್ಳುವ ಬಿಜೆಪಿಯ ಯೋಜನೆಯ ಒಂದು ಭಾಗವಾಗಿದೆ” ಎಂದು ಹೇಳಿಕೊಂಡಿದೆ.

ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಕೇಸರಿ ಪಕ್ಷದ ನಾಯಕನಿಗೆ ಹಂಚಲು ಬಯಸಿದ್ದರಿಂದ ದೆಹಲಿಯ ಸಿವಿಲ್ ಲೈನ್ಸ್ 6, ಫ್ಲಾಗ್‌ಸ್ಟಾಫ್ ರಸ್ತೆಯಲ್ಲಿರುವ ದೆಹಲಿ ಮುಖ್ಯಮಂತ್ರಿ ನಿವಾಸವನ್ನು ಬಿಜೆಪಿಯ ಆಜ್ಞೆಯ ಮೇರೆಗೆ ಬಲವಂತವಾಗಿ ಖಾಲಿ ಮಾಡಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿಯ ಕಛೇರಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

“ಬಿಜೆಪಿ ದೆಹಲಿಯಲ್ಲಿ 27 ವರ್ಷಗಳಿಂದ ಅಧಿಕಾರದಿಂದ ಹೊರಗುಳಿದಿದೆ. ಸಾರ್ವಜನಿಕರಿಂದ ಚುನಾವಣಾ ಬೆಂಬಲವನ್ನು ಪಡೆಯಲು ಸಾಧ್ಯವಾಗದ ಕಾರಣ ಅವರು ಸಿಎಂ ನಿವಾಸದ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಎಎಪಿ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.

ಕೆಲವು ಪ್ರಮುಖ ಬಿಜೆಪಿ ನಾಯಕರಿಗೆ ಬಂಗಲೆ ಮಂಜೂರು ಮಾಡುವ ಯೋಜನೆ ಇತ್ತು ಎಂದು ಎಎಪಿ ಹೇಳಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸದರಿ ಮನೆಯನ್ನು ಖಾಲಿ ಮಾಡಿದ ಕೆಲವು ದಿನಗಳ ನಂತರ ಆ ಮನೆಗೆ ಮುಖ್ಯಮಂತ್ರಿ ಅತಿಶಿ ಸ್ಥಳಾಂತರಗೊಂಡಿದ್ದರು ಎಂಬುದು ಗಮನಾರ್ಹ.

ರಾಜಕೀಯ

ಬೆಂಗಳೂರು: ಕರ್ನಾಟಕದ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮಿತಿಯ ಬಹುನಿರೀಕ್ಷಿತ ಜಾತಿಗಣತಿ ವರದಿ ಅತಿ ಶೀಘ್ರದಲ್ಲಿ ಜಾರಿಗೆ ಬರಲಿ ಎಂದು ವಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಅಡ್ವಕೇಟ್ ತಾಹೇರ್ ಹುಸೇನ್ ರಾಜ್ಯ ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಅವರು, “ರಾಜ್ಯದಲ್ಲಿ ಕನಿಷ್ಟ ಪಕ್ಷ ಗ್ರಾಮ ಪಂಚಾಯತಿ ಸದಸ್ಯರೂ ಆಗದ ಸಮುದಾಯವಿದೆ. ಎಲ್ಲಾ ಸಮುದಾಯಗಳಿಗೆ ನ್ಯಾಯ ಬದ್ದವಾಗಿ ಆಡಳಿತ, ಶೈಕ್ಷಣಿಕ, ಸಾಮಾಜಿಕವಾಗಿ ಎಲ್ಲಾ ರಂಗಗಳಲ್ಲೂ ಸಮಾನ ಪ್ರಾತಿನಿಧ್ಯತೆ ಸಿಗಬೇಕಾಗಿದೆ. ಈ ನಿಟ್ಟಿನಲ್ಲಿ ಇಂತಹದ್ದೊಂದು ವರದಿ ಸಿದ್ದಪಡಿಸಿರುವುದು ಸ್ವಾಗತಾರ್ಹ. ಆದರೆ ಆ ವರದಿಗಳನ್ನು ಪೆಟ್ಟಿಗೆಯಲ್ಲಿಟ್ಟು ಕಾಲಹರಣ ಮಾಡುತ್ತಿರುವುದು ಆಕ್ಷೇಪಾರ್ಹ” ಎಂದು ಹೇಳಿದ್ದಾರೆ.

“ಈ ವರದಿಯ ಬಿಡುಗಡೆ ಕುರಿತು ಆತಂಕ ವ್ಯಕ್ತಪಡಿಸುವವರ ಸ್ವಾರ್ಥತೆ ಗಮನಿಸಬಹುದು. ಇದನ್ನು ಜನಹಿತಕ್ಕಿಂತ ರಾಜಕೀಯ ಲಾಭಕ್ಕಾಗಿ ಬಳಸಲು ಕೆಲವರು ಪ್ರಯತ್ನಿಸುತ್ತಿರುವುದು ಅಕ್ಷಮ್ಯ. ರಾಜ್ಯದ ಜನರ ಸಮಸ್ಯೆಗಳನ್ನು ನ್ಯಾಯಬದ್ದ ರೀತಿಯಲ್ಲಿ ನಿಭಾಯಿಸುವ ಮೂಲಕ ಜನಪ್ರತಿನಿಧಿಗಳು ತಮ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು” ಎಂದಿದ್ದಾರೆ.

“ಕಳೆದ ಬಾರಿಯ ಸಿದ್ದರಾಮಯ್ಯರ ಸರ್ಕಾರ ಈ ವರದಿ ತಯಾರಿಸಲು ಆಗಿನ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜುರವರನ್ನು ನೇಮಿಸಿತ್ತು. ನಂತರ ಅದರ ಹೊಣೆಗಾರಿಕೆ ಜಯಪ್ರಕಾಶ್ ಹೆಗ್ಡೆಯವರ ಪಾಲಿಗೆ ದೊರೆತಿತ್ತು. ಅವರು ಈಗಾಗಲೇ ಸರ್ಕಾರಕ್ಕೆ ವರದಿ ಸಮರ್ಪಸಿದ್ದಾರೆ. ಅದು 48 ಸಂಪುಟ ಹೊಂದಿದ್ದು 200 ಪುಟಗಳಷ್ಟು ವರದಿಯಿದೆ. 1351 ವಿವಿಧ ಜಾತಿಗಳ ಸಮೀಕ್ಷೆ ನಡೆಸಲಾಗಿದೆ” ಎಂದು ವಿವರಿದಿದ್ದಾರೆ.

“5.98 ಕೋಟಿ ಜನರನ್ನು ಸಮೀಕ್ಷೆಯಲ್ಲಿ ಸೇರಿಸಲಾಗಿದೆ. 3.98 ಕೋಟಿಗೂ ಹೆಚ್ಚು ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ವರ್ಗಗಳಿದ್ದು 1.87 ಕೋಟಿ ಲಿಂಗಾಯುತರು, ಒಕ್ಕಲಿಗರು, ಬ್ರಾಹ್ಮಣ ಮತ್ತಿತರ ಜಾತಿಗಳಿವೆ. ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ಕೋಟಾ ಶಿಫಾರಸು ಮಾಡಿದೆ. ವೀರೇಶೈವ ಮತ್ತು ಲಿಂಗಾಯತರು ಒಂದೇ ಎಂದು ಸಮಿತಿ ಒತ್ತುಕೊಟ್ಟು ಹೇಳಿದೆ.

ಆರು ಕೋಟಿ ಜನರಲ್ಲಿ ಯಾವ ಯಾವ ಜಾತಿಯ ಜನರು ಎಷ್ಟೆಷ್ಟು ಮಂದಿಯಿದ್ದಾರೆಂದು ವರದಿಯಲ್ಲಿ ಹೇಳಲಾಗಿದ್ದು, ಈ ಎಲ್ಲಾ ಜಾತಿಯ ಜನರಿಗೆ ಅವರವರ ಅನುಪಾತಕ್ಕೆ ಅನುವಾಗಿ ಪ್ರಾತಿನಿಧ್ಯ ದೊರೆಯಬೇಕಾಗಿದೆ” ಎಂದು ಹೇಳಿರುವ ಅಡ್ವಕೇಟ್ ತಾಹೇರ್ ಹುಸೇನ್ ಅವರು, “ಕಾಂಗ್ರೆಸ್ ಪಕ್ಷ ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ಜಾತಿಗಣತಿ ವರದಿ ಜಾರಿ ಮಾಡುತ್ತೇವೆಂದಾಗ ಸುಮ್ಮನಿದ್ದವರು ಇದೀಗ ತಗಾದೆ ತೆಗೆಯುತ್ತಿರುವುದು ಸರಿಯಲ್ಲ” ಎಂದು ವಿರೋಧಪಕ್ಷಗಳನ್ನು ಟೀಕಿಸಿದ್ದಾರೆ.

ರಾಜಕೀಯ

ಹೈದರಾಬಾದ್‌ನ ಪಂಜಗುಟ್ಟಾ ಪೊಲೀಸ್ ಠಾಣೆಯಲ್ಲಿ ಪವನ್ ಕಲ್ಯಾಣ್ ವಿರುದ್ಧ ದೂರು ದಾಖಲಾಗಿದೆ!

ಅಮರಾವತಿ,
‘ತಿರುಪತಿ ದೇವಸ್ಥಾನದ ಲಡ್ಡುಗಳಲ್ಲಿ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಲಾಗಿದ್ದು, ಈ ಲಡ್ಡುಗಳನ್ನು ಅಯೋಧ್ಯೆಗೂ ಕಳುಹಿಸಿಕೊಡಲಾಗಿತ್ತು’ ಎಂದು ಆಂಧ್ರ ಉಪ ಮುಖ್ಯಮಂತ್ರಿ ಹಾಗೂ ತೆಲುಗು ನಟ ಪವನ್ ಕಲ್ಯಾಣ್ ಆರೋಪಿಸಿ ವಿವಾದ ಸೃಷ್ಟಿಸಿದ್ದರು.

ಇದರ ಬೆನ್ನಲ್ಲೇ, ಪ್ರಜಾ ಶಾಂತಿ ಪಕ್ಷದ ನಾಯಕ ಕೆ.ಎ.ಪಾಲ್ (K.A.Paul) ಹೈದರಾಬಾದ್‌ನ ಪಂಜಗುಟ್ಟಾ ಪೊಲೀಸ್ ಠಾಣೆಯಲ್ಲಿ ಪವನ್ ಕಲ್ಯಾಣ್ ವಿರುದ್ಧ ದೂರು ದಾಖಲಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎ.ಪಾಲ್,

“ಪವನ್ ಕಲ್ಯಾಣ್ ಅವರ ಹೇಳಿಕೆ ಹುಚ್ಚುತನದಿಂದ ಕೂಡಿದೆ. ಪ್ರಾಣಿಗಳ ಕೊಬ್ಬನ್ನು ಬೆರೆಸಿದ ಒಂದು ಲಕ್ಷ ಲಡ್ಡನ್ನು ಅಯೋಧ್ಯೆಯ ರಾಮಮಂದಿರಕ್ಕೆ ಸಿದ್ಧಪಡಿಸಿ ಕಳುಹಿಸಿಕೊಡಲಾಗಿದೆ ಎಂದು ಆರೋಪಿಸಿದ್ದಾರೆ. ಅಯೋಧ್ಯೆ ರಾಮಮಂದಿರ ಕಾರ್ಯಕ್ರಮ ಜನವರಿಯಲ್ಲಿ ನಡೆದಿತ್ತು. ಆದರೆ ಜುಲೈನಲ್ಲೇ ಚಂದ್ರಬಾಬು ನಾಯ್ಡು ಲಡ್ಡುವಿನಲ್ಲಿ ಕಲಬೆರಕೆ ಮಾಡಿರುವ ವಿಷಯವನ್ನು ಬಹಿರಂಗಪಡಿಸಿದ್ದರು. ಹೀಗಿರುವಾಗ, ಜನವರಿಯಲ್ಲಿ ತಿರುಪತಿ ಲಡ್ಡುವಿನಲ್ಲಿ ಕಲಬೆರಕೆ ನಡೆದಿರುವುದು ಇವರಿಗೆ ಹೇಗೆ ಗೊತ್ತು? ಹಾಗಾಗಿ ಕಾನೂನು ಸುವ್ಯವಸ್ಥೆಗೆ ಭಂಗ ತರುತ್ತಿರುವ ಪವನ್ ಕಲ್ಯಾಣ್ ವಿರುದ್ಧ ಕ್ರಮ ಕೈಗೊಂಡು ಬಂಧಿಸಬೇಕು. ಇದನ್ನು ಒತ್ತಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೂ ಮನವಿ ಪತ್ರ ಕಳುಹಿಸಿದ್ದೇನೆ” ಎಂದು ಹೇಳಿದ್ದಾರೆ.  

ರಾಜಕೀಯ

ಲಕ್ನೋ: ಉತ್ತರ ಪ್ರದೇಶದ ಜಾಟ್ ಸಮುದಾಯದ ಜಾತೀಯತೆಯಿಂದಾಗಿ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸೋಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಆರೋಪಿಸಿದ್ದಾರೆ.

ಹರಿಯಾಣದಲ್ಲಿ ಚುನಾವಣೋತ್ತರ ಸಮೀಕ್ಷೆಗಳನ್ನು ಸುಳ್ಳಾಗಿಸಿ, ಬಿಜೆಪಿ ಭರ್ಜರಿ ಗೆಲುವು ಸಾಧಿಸಿ 3ನೇ ಬಾರಿಗೆ ಸರ್ಕಾರ ರಚಿಸಲಿದೆ. ಸೋಲಿಗೆ ಚುನಾವಣಾ ಆಯೋಗದ ಚಟುವಟಿಕೆಗಳೇ ಕಾರಣ ಎಂದು ಕಾಂಗ್ರೆಸ್ ದೂರಿದೆ. ಮಾಯಾವತಿಯವರ ಬಹುಜನ ಸಮಾಜ ಪಕ್ಷವು ಭಾರತೀಯ ರಾಷ್ಟ್ರೀಯ ಲೋಕದಳದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತು.

ಚುನಾವಣೆಯ ಅಂತ್ಯಕ್ಕೆ ಬಹುಜನ ಸಮಾಜ ಪಕ್ಷ ಶೇ.1.82 ಮತಗಳನ್ನು ಪಡೆದಿದ್ದು, ಭಾರತೀಯ ರಾಷ್ಟ್ರೀಯ ಲೋಕದಳ ಪಕ್ಷ ಶೇ.4.14 ಮತಗಳನ್ನು ಪಡೆದಿವೆ. ಈ ಹಿನ್ನೆಲೆಯಲ್ಲಿ, ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಹರಿಯಾಣ ಚುನಾವಣೆಯ ಸೋಲಿಗೆ ಜಾಟ್ ಸಮುದಾಯದ ಜಾತೀಯತೆ ಕಾರಣ ಎಂದು ಆರೋಪಿಸಿದ್ದಾರೆ.

ಈ ಕುರಿತು, ತಮ್ಮ ‘ಎಕ್ಸ್’ ಸೈಟ್ ನಲ್ಲಿ ಪ್ರತಿಕ್ರಿಯಿಸಿರುವ ಅವರು, “ನಾವು ಭಾರತೀಯ ರಾಷ್ಟ್ರೀಯ ಲೋಕದಳ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದೆವು. ಆದರೆ ಚುನಾವಣಾ ಫಲಿತಾಂಶ ನಮಗೆ ವಿರುದ್ಧವಾಗಿ ಬಂದಿದೆ. ಜಾಟ್ ಸಮುದಾಯದ ಜಾತಿ ಮನಸ್ಥಿತಿಯೇ ನಮ್ಮ ಸೋಲಿಗೆ ಕಾರಣ. ಕೆಲವು ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಅಲ್ಪ ಮತಗಳ ಅಂತರದಿಂದ ಗೆಲುವನ್ನು ಕಳೆದುಕೊಂಡಿದ್ದಾರೆ.

ಉತ್ತರ ಪ್ರದೇಶದ ಜಾಟ್ ಸಮುದಾಯದವರು ತಮ್ಮ ಜಾತಿ ತಾರತಮ್ಯವನ್ನು ಬದಲಾಯಿಸಿಕೊಂಡಿದ್ದಾರೆ. ಅವರಲ್ಲಿ ಹಲವರು ನಮ್ಮ ಪಕ್ಷದಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹರಿಯಾಣದ ಜಾಟ್ ಸಮುದಾಯದವರೂ ತಮ್ಮ ಮನೋಭಾವವನ್ನು ಬದಲಾಯಿಸಿಕೊಳ್ಳಬೇಕೆಂದು ನಾನು ಸಲಹೆ ನೀಡುತ್ತೇನೆ” ಎಂದು ಹೇಳಿದ್ದಾರೆ.

ರಾಜಕೀಯ

ಹರಿಯಾಣ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ; ಇದು ಒಳಸಂಚಿಗೆ ಸಂದ ಜಯ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ನವದೆಹಲಿ: ಹರಿಯಾಣದಲ್ಲಿ ಒಂದೇ ಹಂತದಲ್ಲಿ ಕಳೆದ 5 ರಂದು ನಡೆದ ಚುನಾವಣೆಯ ಮತಗಳನ್ನು ಇಂದು ಎಣಿಕೆ ಮಾಡಲಾಗುತ್ತಿದೆ. ಅಲ್ಲಿನ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್‌ಗೆ ಸರ್ಕಾರ ರಚಿಸಲು ಹೆಚ್ಚಿನ ಅವಕಾಶವಿದೆ ಎಂದು ಹೇಳಿತ್ತು. ಆದರೆ, ಈಗ ಅಲ್ಲಿನ ದೃಶ್ಯಗಳು ಬದಲಾಗಿವೆ.

90 ಕ್ಷೇತ್ರಗಳನ್ನು ಹೊಂದಿರುವ ಹರಿಯಾಣದಲ್ಲಿ ಸರ್ಕಾರ ರಚಿಸಲು 46 ಕ್ಷೇತ್ರಗಳ ಅಗತ್ಯವಿದೆ. ಪ್ರಸ್ತುತ ಅಲ್ಲಿ ಬಿಜೆಪಿ 48 ಕ್ಷೇತ್ರಗಳಲ್ಲಿ, 37 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಬಹುತೇಕ ಬಿಜೆಪಿ ಹರಿಯಾಣದಲ್ಲಿ ಸರ್ಕಾರ ರಚನೆ ಖಚಿತ ಎಂದು ಆ ಪಕ್ಷದವರು ಹೇಳುತ್ತಿದ್ದಾರೆ.

ಈ ಬಾರಿ ಬಿಜೆಪಿ ಹರಿಯಾಣದಲ್ಲಿ ಸರ್ಕಾರ ರಚಿಸಿದರೆ ಅದು ಐತಿಹಾಸಿಕ ಸಾಧನೆಯಾಗಲಿದೆ. ಇದರ ಪ್ರಕಾರ ಬಿಜೆಪಿ ಸತತ ಮೂರನೇ ಬಾರಿಗೆ ಸರ್ಕಾರ ರಚಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ, “ಹರಿಯಾಣ ಚುನಾವಣಾ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ; ಇದು ಒಳಸಂಚಿಗೆ ಸಂದ ಜಯ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಹರಿಯಾಣ ಚುನಾವಣಾ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಒಳಸಂಚಿಗೆ ಸಂದ ಜಯ. ಇದು ಮೂಲಭೂತ ವಾಸ್ತವಕ್ಕೆ ವಿರುದ್ಧವಾಗಿದೆ. ಚುನಾವಣಾ ಫಲಿತಾಂಶ ರಾಜ್ಯದ ಜನತೆಯ ಇಚ್ಛೆಗೆ ವಿರುದ್ಧವಾಗಿದೆ. ಹರಿಯಾಣದ 3 ಜಿಲ್ಲೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ದೂರುಗಳು ಬಂದಿವೆ. ಇದು ಪಾರದರ್ಶಕ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳ ವೈಫಲ್ಯ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ರಾಜಕೀಯ

ಹರಿಯಾಣ: ಜುಲಾನಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕುಸ್ತಿಪಟು ವಿನೇಶ್ ಫೋಗಟ್ 6000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಲಾಗಿದೆ. ಜಮ್ಮು-ಕಾಶ್ಮೀರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ಬೆಳಗ್ಗೆ ಆರಂಭವಾಗಿದ್ದು, ಸದ್ಯಕ್ಕೆ ಬಿರುಸಿನಿಂದ ನಡೆಯುತ್ತಿದೆ.

ಇದರಲ್ಲಿ ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆಯಿತು. ಬೆಳಗ್ಗೆಯಿಂದಲೇ ಈ ಮತ ಎಣಿಕೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಅದರಲ್ಲಿ ಜುಲಾನಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ ಸ್ಪರ್ಧಿಸಿದ್ದ ಸ್ಟಾರ್ ಅಭ್ಯರ್ಥಿ ಹಾಗೂ ಒಲಿಂಪಿಯನ್ ವಿನೇಶ್ ಫೋಗಟ್ ಬೆಳಗ್ಗೆಯಿಂದ ಮುನ್ನಡೆಯಲ್ಲಿದ್ದರು.

ಅದರ ನಂತರ, ಕೆಲಕಾಲ ಹಿನ್ನಡೆ ಅನುಭವಿಸಿದ ಅವರು ಮತ್ತೆ ಮುನ್ನಡೆ ಸಾಧಿಸಿದರು. ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪರವಾಗಿ ಸ್ಪರ್ಧಿಸಿದ್ದ ಕುಸ್ತಿಪಟು ವಿನೇಶ್ ಫೋಗಟ್ ಅವರು ಬಿಜೆಪಿ ಅಭ್ಯರ್ಥಿ ಯೋಗೇಶ್ ಕುಮಾರ್ ಅವರನ್ನು 6 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ.

ಅವರ ಗೆಲುವನ್ನು ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ. ಅಲ್ಲದೆ, ನಡೆಯುತ್ತಿರುವ ಮತ ಎಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ ಎಂದು ವರದಿಗಳಾಗುತ್ತಿವೆ.

ರಾಜಕೀಯ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಜಸ್ರೊಟಾ (Jasrota) ಪ್ರದೇಶದಲ್ಲಿ ನೆನ್ನೆ ಕಾಂಗ್ರೆಸ್ ನಿಂದ ಚುನಾವಣಾ ಪ್ರಚಾರ ಸಭೆ ನಡೆಯಿತು. ಇದರಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದರು. ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ಏಕಾಏಕಿ ಪ್ರಜ್ಞೆ ತಪ್ಪಿದರು. ಸ್ವಲ್ಪಮಟ್ಟಿಗೆ ಕುಸಿದು ಬಿದ್ದ ಅವರನ್ನು ವೇದಿಕೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಓಡಿ ಬಂದು ಎತ್ತಿ ಹಿಡಿದರು. ನಂತರ ಅವರನ್ನು ಆಸನಕ್ಕೆ ಕರೆದೊಯ್ದು ಕುಳಿತುಕೊಳ್ಳುವಂತೆ ಮಾಡಿದರು. ಸ್ವಲ್ಪ ವಿರಾಮದ ನಂತರ ಮತ್ತೆ ಮಾತನಾಡಿದ ಖರ್ಗೆಯವರು ‘ಅಷ್ಟು ಬೇಗ ನಾನು ಸಾಯುವುದಿಲ್ಲ. ಮೋದಿ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುವವರೆಗೂ ನಾನು ಬದುಕಿರುತ್ತೇನೆ; ನಾನು ನಿಮಗಾಗಿ ಹೋರಾಡುತ್ತೇನೆ” ಎಂದು ಆವೇಶದಿಂದ ಹೇಳಿದರು.

ಖರ್ಗೆಯವರ ಭಾಷಣವನ್ನು ಅಮಿತ್ ಶಾ ಖಂಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ಖರ್ಗೆಯವರ ಹೇಳಿಕೆ ಅವಮಾನಕರ ಮತ್ತು ನಾಚಿಕೆಗೇಡು. ಖರ್ಗೆಯವರ ಮಾತು ಅವರ ಅಸಹ್ಯ ಮತ್ತು ಭಯವನ್ನು ತೋರಿಸುತ್ತದೆ. ಖರ್ಗೆಯವರ ಆರೋಗ್ಯದ ವಿಚಾರವಾಗಿ, ಅವರು ದೀರ್ಘಾಯುಷ್ಯ ಮತ್ತು ಆರೋಗ್ಯವಾಗಿರಲಿ ಎಂದು ಪ್ರಾರ್ಥಿಸುತ್ತೇವೆ. ಅವರು ದೀರ್ಘಕಾಲ ಬದುಕಲಿ, 2047ರಲ್ಲಿ ಅಭಿವೃದ್ಧಿ ಹೊಂದಿದ ಭಾರತ ರೂಪುಗೊಳ್ಳುವವರೆಗೆ ಬದುಕಲಿ’ ಎಂದು ಹೇಳಿದರು. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಅವರು ತಮ್ಮ ಎಕ್ಸ್ ಸೈಟ್‌ನಲ್ಲಿ, ‘ಗೃಹ ಸಚಿವ ಅಮಿತ್ ಶಾ ಅವರು ಮಣಿಪುರ, ಜನಗಣತಿ, ಜಾತಿವಾರು ಜನಗಣತಿ ಮುಂತಾದ ಗಂಭೀರ ವಿಷಯಗಳತ್ತ ಗಮನಹರಿಸಬೇಕು. ನಿಮ್ಮ ಸರ್ಕಾರದ ಅಂಕಿಅಂಶಗಳೇ ನಗರದ ಚರಂಡಿ ಮತ್ತು ಒಳಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಮಿಕರಲ್ಲಿ ಶೇಕಡಾ 92ರಷ್ಟು ದಲಿತರು, ಆದಿವಾಸಿಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದವರು ಎಂದು ತೋರಿಸುತ್ತದೆ.

ದಲಿತರು, ಆದಿವಾಸಿಗಳು, ಹಿಂದುಳಿದವರು, ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರು ಸೇರಿದಂತೆ ಎಲ್ಲ ವರ್ಗದವರು ಯಾವ ಕೆಲಸದ ಮೂಲಕ ತಮ್ಮ ಜೀವನೋಪಾಯವನ್ನು ಗಳಿಸುತ್ತಾರೆ ಎಂಬುದು ಬಹಿರಂಗವಾಗುತ್ತದೆ ಎಂಬುದಕ್ಕಾಗಿಯೇ ಬಿಜೆಪಿ ಜಾತಿವಾರು ಜನಗಣತಿಯನ್ನು ವಿರೋಧಿಸುತ್ತಿದೆ. ಜಾತಿವಾರು ಜನಗಣತಿಗೆ ಕಾಂಗ್ರೆಸ್ ಬದ್ಧವಾಗಿದೆ; ಅದನ್ನು ಮಾಡಿ ಮುಗಿಸೋಣ’ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ರಾಜಕೀಯ

ಕೇರಳದ ರಾಜಕೀಯ ಕ್ಷೇತ್ರವು ಹಲವು ಹೋರಾಟಗಳ ಮೇಲೆ ನಿರ್ಮಾಣವಾದದ್ದು. ಯುದ್ಧಭೂಮಿಯಲ್ಲೂ, ರಾಜಕೀಯ ಸೇಡಿನ ದಾಳಿಯಲ್ಲೂ ರಕ್ತಸಾಕ್ಷಿಗಳಾದ ಅನೇಕ ಒಡನಾಡಿಗಳು ಅಲ್ಲಿದ್ದಾರೆ. ಅಂತವರಲ್ಲಿ ಪುಷ್ಪನ್ ಕೂಡ ಒಬ್ಬರು!

ಪುಷ್ಪನ್ ಕೇರಳದ ಕಣ್ಣೂರು ಜಿಲ್ಲೆಯ ಸೋಕ್ಲಿಯಲ್ಲಿ ಕೃಷಿ ಕಾರ್ಮಿಕರ ಕುಟುಂಬದಲ್ಲಿ ಜನಿಸಿದರು. ಅವರು ಓದಿದ್ದು 8ನೇ ತರಗತಿವರೆಗೆ ಮಾತ್ರ. ಸಿಪಿಎಂನ ಯುವ ಘಟಕವಾದ ಡಿವೈಎಫ್‌ಐನಲ್ಲಿ ಸಕ್ರಿಯರಾಗಿದ್ದರು. ಕೌಟುಂಬಿಕ ಬಡತನದಿಂದ ಬೆಂಗಳೂರಿಗೆ ಬಂದು ದಿನಸಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು.

1994ರಲ್ಲಿ, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ, ಸಿಪಿಎಂ ಪಕ್ಷ ಮತ್ತು ಅದರ ಯುವ ಸಂಘಟನೆ ಡಿವೈಎಫ್‌ಐ ಕೇರಳ ರಾಜ್ಯದಲ್ಲಿ ಅನುದಾನ ರಹಿತ ಕಾಲೇಜುಗಳ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿತ್ತು. ರಜೆಗೆಂದು ಊರಿಗೆ ಬಂದಿದ್ದ ಪುಷ್ಪನ್ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದರು.

ಪುಷ್ಪನ್

ನವೆಂಬರ್ 25, 1994 ರಂದು, ಆಗಿನ ಮಂತ್ರಿಗಳಾದ ರಾಧಾಕೃಷ್ಣನ್ ಮತ್ತು ಎಂ.ವಿ.ರಾಘವನ್ ಅವರು ಕೂತ್ತುಪ್ಪರಂಬು ಪ್ರದೇಶದಲ್ಲಿ ಅರ್ಬನ್ ಬ್ಯಾಂಕ್ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಘೋಷಿಸಲಾಯಿತು. ಅವರನ್ನು ತಡೆಯಲು ಸಿಪಿಎಂ ಪ್ರತಿಭಟನೆ ನಡೆಸುವುದಾಗಿ ಘೋಷಿಸಿತ್ತು.

ನವೆಂಬರ್ 25 ರಂದು ಕೂತ್ತುಪ್ಪರಂಬಿನಲ್ಲಿ ಸುಮಾರು 2000 ಸಿಪಿಎಂ ಕಾರ್ಯಕರ್ತರು ಪ್ರತಿಭಟನೆಗೆ ಜಮಾಯಿಸಿದ್ದರು. ಪೊಲೀಸರೂ ಜಮಾಯಿಸಿದ್ದರು. ಸಚಿವರು ಬಂದರೆ ತೊಂದರೆಯಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದರು. ಹಾಗಾಗಿ ಸಚಿವ ರಾಧಾಕೃಷ್ಣನ್ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.

ಅಂದಿನ ಸಹಕಾರಿ ಸಚಿವರಾಗಿದ್ದ ಎಂ.ವಿ.ರಾಘವನ್ ಮಾತ್ರ ಕಾರ್ಯಕ್ರಮಕ್ಕೆ ಹೋಗುವುದಾಗಿ ಹೇಳಿ ಅಲ್ಲಿಗೆ ಬಂದಿದ್ದರು. ಆಗ ಸಿಪಿಎಂ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಸಚಿವರತ್ತ ತೆರಳಿದರು. ಪೊಲೀಸರು ತಡೆದು ಲಾಠಿ ಚಾರ್ಜ್ ಮಾಡಿದರು. ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು. ಪೊಲೀಸರು ಗುಂಡು ಹಾರಿಸಿದರು. ಇದರಲ್ಲಿ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಕೆ.ಕೆ.ರಾಜೀವನ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ.ವಿ.ರೋಷನ್, ಪದಾಧಿಕಾರಿಗಳಾದ ಶಿಬುಲಾಲ್, ಮಧು, ಬಾಬು ಅವರು ಗುಂಡು ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದರು.

ಅದರಲ್ಲಿ ಒಂದು ಗುಂಡು ಪುಷ್ಪನ್ ಕುತ್ತಿಗೆಯ ಮೂಲಕ ಬೆನ್ನುಹುರಿಯೊಳಗೆ ಹರಿಯಿತು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬೆನ್ನುಹುರಿಗೆ ಹಾನಿಯಾಗಿ ಕತ್ತಿನ ಕೆಳಗಿನ ಭಾಗ ನಿಷ್ಕ್ರಿಯಗೊಂಕೊಂಡು ಪುಷ್ಪನ್ ಹಾಸಿಗೆ ಹಿಡಿದರು. ಪುಷ್ಪನ್ ಗೆ  ಗುಂಡು ತಗುಲಿ ಹಾಸಿಗೆ ಹೀಡಿದಾಗ ಅವರ ವಯಸ್ಸು 24. ಅವರು 30 ವರ್ಷಗಳನ್ನು ಹಾಸಿಗೆಯಲ್ಲಿ ಕಳೆದರು. ಸಿಪಿಎಂ ಪಕ್ಷದವರು ಅವರನ್ನು ನೋಡಿಕೊಂಡರು.

ನಂತರ ರಾಜಕೀಯದಲ್ಲಿ ಹಲವು ಬದಲಾವಣೆಗಳಾದವು. ಗುಂಡಿನ ದಾಳಿಗೆ ಕಾರಣರಾದ ಸಚಿವ ಎಂ.ವಿ.ರಾಘವನ್ ಮತ್ತೆ ಸಿಪಿಎಂ ಪಕ್ಷಕ್ಕೆ ಸೇರ್ಪಡೆಯಾದರು. ಈ ಹಿಂದೆ ಸಿಪಿಎಂನಲ್ಲಿದ್ದ ಎಂ.ವಿ.ರಾಘವನ್, ಅದರಿಂದ ಬೇರ್ಪಟ್ಟು ಸಿಎಂಪಿ (ಕಮ್ಯುನಿಸ್ಟ್ ಮಾರ್ಕ್ಸ್‌ವಾದಿ ಪಕ್ಷ) ಎಂಬ ಪಕ್ಷವನ್ನು ಆರಂಭಿಸಿ, ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸಹಕಾರಿ ಸಚಿವರಾಗಿದ್ದಾಗಲೇ ಈ ಗುಂಡಿನ ದಾಳಿ ನಡೆದಿತ್ತು ಎಂಬುದು ಗಮನಾರ್ಹ.

ಎಂ.ವಿ.ರಾಘವನ್ ಅವರು ಸಿಪಿಎಂಗೆ ಮರುಸೇರ್ಪಡೆಯಾಗುವುದನ್ನು ಪುಷ್ಪನ್ ವಿರೋಧಿಸಲಿಲ್ಲ. ಅಂತೆಯೇ, ಸಿಪಿಎಂ ಕೂಡ ತನ್ನ ಅನುದಾನ ರಹಿತ ಕಾಲೇಜುಗಳಿಗೆ ಸಂಬಂಧಿಸಿದ ತಮ್ಮ ನೀತಿಯನ್ನು ಪರಿಷ್ಕರಿಸಿತು. ಆಗಲೂ ಪುಷ್ಪನ್ ಪಕ್ಷದ ಬೆಂಬಲಕ್ಕೆ ನಿಂತಿದ್ದರು. ಆಗಿನ ಸಚಿವ ಎಂ.ವಿ.ರಾಘವನ್ ಪುತ್ರನಿಗೆ ಸಿಪಿಎಂ ಪಕ್ಷದಲ್ಲಿ ಸ್ಥಾನ ಮತ್ತು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೂಡ ನೀಡಲಾಗಿತ್ತು. ಆದರೂ, ಪುಷ್ಪನ್ ಅವರು ಭಿನ್ನಾಭಿಪ್ರಾಯದ ಧ್ವನಿ ಎತ್ತದೆ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿದ್ದರು.

ಕಳೆದ ಎರಡು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ನೆನ್ನೆ ಮಧ್ಯಾಹ್ನ 3.30ರ ಸುಮಾರಿಗೆ ಬೇಬಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ವರದಿಗಳ ಪ್ರಕಾರ, ಅವರನ್ನು ಆಗಸ್ಟ್ 2 ರಂದು ಗಂಭೀರ ಸ್ಥಿತಿಯಲ್ಲಿ ಬೇಬಿ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಹೃದಯಾಘಾತದ ನಂತರ ವೆಂಟಿಲೇಟರ್‌ಗೆ ಸ್ಥಳಾಂತರಿಸಲಾಗಿತ್ತು.

ಇಂದು ಬೆಳಗ್ಗೆ ಅವರ ದೇಹವನ್ನು ಕೋಳಿಕ್ಕೋಡ್ ಆಸ್ಪತ್ರೆಯಿಂದ ಕಣ್ಣೂರಿನ ತಲಸ್ಸೆರಿಗೆ ಕೊಂಡೊಯ್ಯಲಾಗಿದೆ. ಸಾರ್ವಜನಿಕ ಗೌರವಾರ್ಥವಾಗಿ ಅಲ್ಲಿ ಇರಿಸಲಾಗಿದೆ. ಇಂದು ಸಂಜೆ ಪುಷ್ಪನ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ. ಒಡನಾಡಿ ಪುಷ್ಪನ್ ಅವರ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಚಿವರು ಹಾಗೂ ಸಿಪಿಎಂ ಸಂತಾಪ ಸೂಚಿಸಿದೆ.

ರಾಜಕೀಯ

ಜಮ್ಮು: ಮೂರನೇ ಹಂತದ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಪ್ರಿಯಾಂಕಾ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗಲು ವಿಫಲವಾಗಿದೆ. ಇದಕ್ಕೆ ಬಿಜೆಪಿ ಪಕ್ಷವೇ ಕಾರಣ ಎಂದು ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಪಕ್ಷ ಆರೋಪಿಸಿದೆ.

ಕಾಶ್ಮೀರದ ಕಥುವಾ (Kathua) ಜಿಲ್ಲೆಯ ಬಿಲ್ಲಾವರ್ (Billawar) ಮತ್ತು ಬಿಷ್ಣಃ (Bishnah) ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಮನೋಹರ್ ಲಾಲ್ ಅವರಿಗೆ ಬೆಂಬಲ ಸಂಗ್ರಹಿಸಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಗಾಗಿ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ಪ್ರಿಯಾಂಕಾ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗಲು ಸಾಧ್ಯವಾಗದ ಕಾರಣ ಕಾರ್ಯಕ್ರಮಗಳಿಗೆ ಅಡ್ಡಿಯಾಗಿದೆ.

ಈ ಬಗ್ಗೆ ಮಾತನಾಡಿದ ಕಾಶ್ಮೀರ ಕಾಂಗ್ರೆಸ್ ಸಮಿತಿಯ ಮುಖ್ಯ ವಕ್ತಾರ, “ಬಿಜೆಪಿಯ ವಿಧ್ವಂಸಕ ಕೃತ್ಯದಿಂದಾಗಿ ಪ್ರಿಯಾಂಕಾ ಅವರ ಕಾರ್ಯಕ್ರಮ ರದ್ದಾಗಿದೆ. ಈ ಕುರಿತು ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿ ತನಿಖೆಗೆ ಒತ್ತಾಯಿಸುತ್ತೇವೆ” ಎಂದು ಹೇಳಿದರು.

ರಾಜಕೀಯ

ವಿರುದುನಗರ: ತಮಿಳುನಾಡು ವಿರುದುನಗರ ಜಿಲ್ಲಾ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಕಛೇರಿ ವತಿಯಿಂದ ಜಿಲ್ಲಾಧಿಕಾರಿಗಳ ಸಭೆಯಲ್ಲಿ, ಮುಸ್ಲಿಂ ಮಹಿಳಾ ಸಹಾಯ ಸಂಘದಿಂದ ಆಯೋಜಿಸಿದ್ದ ಕ್ಷೇಮಾಭಿವೃದ್ಧಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಜಯಶೀಲನ್ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿರುದುನಗರ ಸಂಸದ ಮಾಣಿಕಂ ಟ್ಯಾಗೋರ್ (Manickam Tagore) ಅವರು 108 ಫಲಾನುಭವಿಗಳಿಗೆ 10.24 ಲಕ್ಷ ರೂ.ಗಳ ಕಲ್ಯಾಣ ನೆರವನ್ನು ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಮಾಣಿಕಂ ಟ್ಯಾಗೋರ್, “ನೈತಿಕ ಹಕ್ಕು ಬಗ್ಗೆ ಮಾತನಾಡುವ ಬಿಜೆಪಿಯವರಿಗೆ ಅದೇ ನೈತಿಕ ಹಕ್ಕು ನಿರ್ಮಲಾ ಸೀತಾರಾಮನ್ (Nirmala Sitharaman) ಅವರಿಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ನೈತಿಕ ಹಕ್ಕಿನೊಂದಿಗೆ ನಿರ್ಮಲಾ ಸೀತಾರಾಮನ್ ಕೂಡಲೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಹಾಗೆಯೇ ನಿರ್ಮಲಾ ಸೀತಾರಾಮನ್ ಕೆಳಗಿಳಿದು ಎಲ್ಲರಿಗೂ ಮಾದರಿಯಾಗಲಿದ್ದಾರೆಯೇ? ಅಥವಾ, ನೈತಿಕ ಹಕ್ಕು ಎಂಬುದಲ್ಲೆವೂ ಇತರರಿಗೆ ಮಾತ್ರ. ಇತರರಿಗೆ ಬಂದರೆ ರಕ್ತ.. ತನಗೆ ಬಂದರೆ ಅದು ಟೊಮೆಟೊ ಚಟ್ನಿ ಎಂದು ಹೇಳುತ್ತಾರೆಯೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಮುಂದುವರಿದು ಮಾತನಾಡಿದ ಸಂಸದ ಮಾಣಿಕಂ ಟ್ಯಾಗೋರ್, ನಿರ್ಮಲಾ ಸೀತಾರಾಮನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.