ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
January 2024 » Dynamic Leader
October 22, 2024
Home 2024 January
ಬೆಂಗಳೂರು

ಬೆಂಗಳೂರು: ವಸತಿ ಸಚಿವರಾದ ಬಿ.ಝಡ್.ಜಮೀರ್ ಅಹಮದ್ ಖಾನ್ ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ (Slum Board) ನೂತನ ಅಧ್ಯಕ್ಷರಾದ ಪ್ರಸಾದ್ ಅಬ್ಬಯ್ಯ ಅವರು ಇಂದು ಬೆಂಗಳೂರು ಸರ್ವಜ್ಞ ನಗರ ಕ್ಷೇತ್ರದ ಮಾರುತಿ ಸೇವಾ ನಗರ ಮತ್ತು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ನಗರೇಶ್ವರ ನಾಗೇನಹಳ್ಳಿ ಸರ್ವೆ ನಂ.13ರಲ್ಲಿ ಸ್ಲಮ್ ಬೋರ್ಡ್ ವತಿಯಿಂದ ನಿರ್ಮಿಸಲಾಗುತ್ತಿರುವ 768 ಮನೆಗಳ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಣೆ ಮಾಡಲು ಬಂದಿದ್ದಾರೆ.

ನೆನ್ನೆ ನಮ್ಮ ಡೈನಾಮಿಕ್ ಲೀಡರ್, “ಕೊಳಗೇರಿ ಮಂಡಳಿಯ ಕರ್ಮಕಾಂಡ-1” ಶೀರ್ಷಿಕೆಯಡಿ, ‘ಕೊಳಗೇರಿ ಜನರ ಮನೆಗಳನ್ನು ಶಾಸಕ ಬೈರತಿ ಬಸವರಾಜ್ ಹಿಂಬಾಲಕರಿಗೆ ಹಂಚಿಕೆ ಮಾಡುತ್ತಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು! ಕಂಡುಕೊಳ್ಳದ ವಸತಿ ಸಚಿವ’ ಎಂಬ ತನಿಖಾ ಸುದ್ಧಿಯನ್ನು ಪ್ರಕಟಿಸಿತ್ತು.

ಇದನ್ನೂ ಓದಿ: ಕೊಳಗೇರಿ ಜನರ ಮನೆಗಳನ್ನು ಶಾಸಕ ಬೈರತಿ ಬಸವರಾಜ್ ಹಿಂಬಾಲಕರಿಗೆ ಹಂಚಿಕೆ ಮಾಡುತ್ತಿರುವ ಕೊಳಗೇರಿ ಮಂಡಳಿಯ ಭ್ರಷ್ಟ ಅಧಿಕಾರಿಗಳು.! ಕಂಡುಕೊಳ್ಳದ ವಸತಿ ಸಚಿವರು.!!

ಡೈನಾಮಿಕ್ ಲೀಡರ್‌ ನಲ್ಲಿ ಪ್ರಕಟವಾದ ಸುದ್ಧಿಯಲ್ಲಿ, “ಶಾಸಕರಾದ ಬೈರತಿ ಬಸವರಾಜ್ ನೀಡಿದ ಫಲಾನುಭವಿಗಳ ಪಟ್ಟಿಗೆ ಅಕ್ರಮವಾಗಿ ಅನುಮೋದನೆ ನೀಡಿ, ಕೊಳಗೇರಿ ಜನರ ಮನೆಗಳನ್ನು ಶಾಸಕರ ಹಿಂಬಾಲಕರಿಗೆ, ಕಾರ್ಯಕರ್ತರಿಗೆ ಹಾಗೂ ಅವರ ಚೇಲಾ ಬಾಲಗಳಿಗೆ ಹಂಚಿಕೆ ಮಾಡಲು ಶ್ರಮಿಸುತ್ತಿರುವ ಮಂಡಳಿಯ ಆಯುಕ್ತರಾದ ವೆಂಕಟೇಶ್, ಮುಖ್ಯ ಇಂಜಿನೀಯರ್ ಬಾಲರಾಜ್, ತಾಂತ್ರಿಕ ನಿರ್ದೇಶಕರಾದ ಸುಧೀರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚರನ್ ರಾಜ್, ಸಹಾಯಕ ಇಂಜಿನಿಯರ್ ನಂದಕಿರಣ್ ಹಾಗೂ ಮ್ಯಾನೇಜರ್ ಫ್ರಾನ್ಸಿಸ್ ಇವರುಗಳ ವಿರುದ್ಧ ಸರ್ಕಾರ ಕೂಡಲೇ ಕ್ರಮ ವಹಿಸಬೇಕೆಂದು ಕೊಳಗೇರಿ ಬಡಜನರ ಪರವಾಗಿ ಕೋರುತ್ತೇವೆ” ಎಂದು ವರದಿ ಮಾಡಿತ್ತು.

ಜೊತೆಯಲ್ಲೇ, “ಶಾಸಕರಾದ ಬೈರತಿ ಬಸವರಾಜ್ ಮತ್ತು ಮಂಡಳಿಯ ಭ್ರಷ್ಟ ಅಧಿಕಾರಿಗಳು ಜಂಟಿಯಾಗಿ ತಯಾರಿಸಿರುವ 768 ಫಲಾನುಭವಿಗಳ ಪಟ್ಟಿಯನ್ನು ಈ ಕೂಡಲೇ ರದ್ಧುಗೊಳಿಸಿ, ನಿಜವಾದ ಕೊಳಗೇರಿ ಬಡಜನರಿಗೆ ಸದರಿ ಮನೆಗಳನ್ನು ಹಂಚಿಕೆ ಮಾಡಲು ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು” ಎಂದೂ ಮನವಿ ಮಾಡಿತ್ತು.

ಈ ಹಿನ್ನಲೆಯಲ್ಲಿ, ಕೆ.ಆರ್.ಪುರಂ ವಿಧಾನಸಭಾ ಮತಕ್ಷೇತ್ರದ ನಗರೇಶ್ವರ ನಾಗೇನಹಳ್ಳಿ ಸರ್ವೆ ನಂ.13ರಲ್ಲಿ, ಸ್ಲಮ್ ಬೋರ್ಡ್ ವತಿಯಿಂದ ನಿರ್ಮಸಲಾಗುತ್ತಿರುವ 768 ಮನೆಗಳ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಣೆ ಮಾಡಲು ಮಂಡಳಿಯ ಅಧಿಕಾರಿಗಳೊಂದಿಗೆ ಬಂದಿರುವುದು ಸ್ವಾಗತಾರ್ಹ. ಅದೇ ವೇಳೆಯಲ್ಲಿ ಮಂಡಳಿಯ ಅಧಿಕಾರಿಗಳು ನಿಮ್ಮಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಾರೆ; ಎಚ್ಚರದಿಂದ ಇರಲು ನಮ್ಮ ಮನವಿ. ಆದಷ್ಟು ಬೇಗೆ ನಮ್ಮ ಕೋರಿಕೆಯ ಮೇಲೆ ಕ್ರಮ ಕೈಗೊಂಡು ಕೊಳಗೇರಿ ಬಡಜನರಿಗೆ ನೆರವಾಗುತ್ತೀರಿ ಎಂದು ನಂಬಿದ್ದೇವೆ.

ರಾಜ್ಯ

ಬೆಂಗಳೂರು: ನಮ್ಮ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಸ್ವತಂತ್ರ ಭಾರತದ ಯಾವುದೇ ಸರ್ಕಾರ ಮಾಡಿರದ ಅತ್ಯಂತ ಕ್ರಾಂತಿಕಾರಕ ಯೋಜನೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಹೇಳಿದ್ದಾರೆ.

ಮಹಿಳಾ ಸಬಲೀಕರಣ ಹಾಗೂ ಬಡವರಿಗೆ ಆರ್ಥಿಕ ಸ್ವಾವಲಂಬನೆ ಕಲ್ಪಿಸುವ ಈ ಯೋಜನೆಗಳು ಬಡವರ ಪಾಲಿಗೆ ಆಶಾಕಿರಣವಾಗಿದೆ. ಈ ಯೋಜನೆಗಳನ್ನು ನಮ್ಮ ಸರ್ಕಾರ ನಿಲ್ಲಿಸುವ ಮಾತೇ ಇಲ್ಲ. ಮಾಗಡಿ ಶಾಸಕ ಬಾಲಕೃಷ್ಣ ಹೇಳಿಕೆ ಅವರ ವೈಯಕ್ತಿಕ. ಈಗಾಗಲೇ ಮುಖ್ಯಮಂತ್ರಿಗಳು ಯೋಜನೆ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ನಿಲುವು ಕೂಡ ಇದೇ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಜನರ ಸಾರ್ವತ್ರಿಕ ಕಲ್ಯಾಣದ ದೃಷ್ಟಿಯಿಂದ ಪ್ರಾರಂಭವಾದ ಗ್ಯಾರಂಟಿ ಯೋಜನೆಗಳು, ಈ ನಾಡಿನ ಜನರ ಬದುಕನ್ನು ಬದಲಾಯಿಸಿವೆ. ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಇನ್ನಷ್ಟೂ ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ ತರಲು ಪ್ರಯತ್ನಿಸುತ್ತದೆಯೇ ಹೊರತು ಯೋಜನೆ ಸ್ಥಗಿತಗೊಳಿಸುವ ಯಾವ ಉದ್ದೇಶವೂ ಇಲ್ಲ ಎಂದು ಆಶ್ವಾಸನೆ ನೀಡಿದ್ದಾರೆ.

ನಾವು ನುಡಿದಂತೆ ನಡೆಯುವವರು ಎಂಬುದನ್ನು ಈಗಾಗಲೇ ಯೋಜನೆಯ ಅನುಷ್ಟಾನದ ಮೂಲಕ ತೋರಿಸಿದ್ದೇವೆ. ಅದೇ ರೀತಿ ಈ ಗ್ಯಾರಂಟಿ ಯೋಜನೆಗಳು ಯಾವುದೇ ವಿಘ್ನವಿಲ್ಲದಂತೆ ಮುಂದುವರೆಯುತ್ತವೆ ಎಂಬ ವಾಗ್ದಾನ ನೀಡುತ್ತೇವೆ ಎಂದು ಹೇಳಿದ್ದಾರೆ.

ದೇಶ

ದೆಹಲಿ: ಕಳೆದ ವರ್ಷ ಡಿಸಂಬರ್ 13 ರಂದು ಸಂಸತ್ತಿನ ಲೋಕಸಭೆಯ ಸಭಾಂಗಣದಲ್ಲಿ ಇಬ್ಬರು ವ್ಯಕ್ತಿಗಳು ಇದ್ದಕ್ಕಿದ್ದಂತೆ ಸಂಸದರು ಕುಳಿತುಕೊಳ್ಳುವ ಸ್ಥಳಕ್ಕೆ ಜಿಗಿದು ಬಣ್ಣದ ಹೊಗೆ ಬಾಂಬ್ ಸಿಡಿಸಿದ್ದು ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಇದರಿಂದಾಗಿ ಇಡೀ ಲೋಕಸಭೆಯ ಸಭಾಂಗಣ ಹೊಗೆ ವಲಯದಂತಿತ್ತು. ಆಗ ಸಂಸದರು ಲೋಕಸಭೆಯ ಭದ್ರತಾ ಸಿಬ್ಬಂದಿಯೊಂದಿಗೆ ಸೇರಿ ಅವರನ್ನು ಅಡ್ಡಗಟ್ಟಿ ಹಿಡಿದರು. ಇದೇ ವೇಳೆ ಮತ್ತಿಬ್ಬರು ಕೂಡ ಇದೇ ರೀತಿಯಲ್ಲಿ ಸಂಸತ್ ಆವರಣದ ಮೇಲೆ ದಾಳಿ ನಡೆಸಿದ್ದರು.

ಈ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಸದರಿ ಪ್ರಕರಣದಲ್ಲಿ ಇನ್ನಿಬ್ಬರನ್ನೂ ಬಂಧಿಸಲಾಗಿತ್ತು. ದೆಹಲಿ ಪೊಲೀಸರು ಉಪಾ (ಯುಪಿಎ) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಬಂಧಿತರೆಲ್ಲರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಅವರನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹಾರ್ದಿಕ್ ಕೌರ್ ಮುಂದೆ ಇಂದು ಹಾಜರುಪಡಿಸಲಾಯಿತು. ಬಂಧಿತರಲ್ಲಿ ಐವರು (6ನೇ ಆರೋಪಿ ನೀಲಂ ಆಜಾದ್ ಹೊರತುಪಡಿಸಿ) ಮನೋರಂಜನ್, ಸಾಗರ್ ಶರ್ಮಾ, ಲಲಿತ್ ಝಾ, ಅಮೋಲ್ ಶಿಂಧೆ, ಮಹೇಶ್ ಕ್ವಾಟ್ ಮುಂತಾದವರು “ನಮ್ಮಿಂದ 70 ಖಾಲಿ ಪೇಪರ್‌ಗಳಿಗೆ ಬಲವಂತವಾಗಿ ಸಹಿ ಪಡೆಯಲಾಗಿದ್ದು, ವಿರೋಧ ಪಕ್ಷಗಳೊಂದಿಗೆ ಸಂಪರ್ಕವಿದೆ ಎಂದು ಒಪ್ಪಿಕೊಳ್ಳುವಂತೆ ಪೊಲೀಸರು ತಮಗೆ ಚಿತ್ರಹಿಂಸೆ ನೀಡಿದ್ದಾರೆ” ಎಂದು ಹೇಳಿದ್ದಾರೆ.

ಈ ಬಗ್ಗೆ ಪೊಲೀಸರು ಉತ್ತರ ನೀಡುವಂತೆ ಕೋರಿದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 17ಕ್ಕೆ ಮುಂದೂಡಿದ್ದಾರೆ.

ಬೆಂಗಳೂರು

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ರವರು ನಿನ್ನೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಮುಂಬರುವ ಬಜೆಟ್‌ನಲ್ಲಿ ಕ್ಷೇತ್ರಕ್ಕೆ ಅನುದಾನ ಮೀಸಲಿರಿಸುವಂತೆ ಮನವಿ ಮಾಡಿದ್ದಾರೆ.

ಮುಖ್ಯವಾಗಿ ಆನೇಕಲ್ ತಾಲ್ಲೂಕಿನಲ್ಲಿ ಹಸಿರುಮನೆ ಹೂ ಬೆಳೆಗಾರರಿಗೆ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿರುವುದು ಗಮನಾರ್ಹ ವಿಷಯವಾಗಿದೆ.

ಸಂಸದರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಸತಿ ರಹಿತರಿಗೆ ಅನುಕೂಲ ಆಗುವಂತೆ ರಾಜೀವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ ವಸತಿ ಕಲ್ಪಿಸುವಂತೆ ಬಜೆಟ್‌ನಲ್ಲಿ ಅನುವು ಮಾಡಿಕೊಡಲು ಮನವಿ ಮಾಡಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ವಸತಿ ರಹಿತ ಬಡವರಿಗೆ ಮುಂದಿನ ದಿನಗಳಲ್ಲಿ ಮನೆಗಳು ಸಿಗುವ ಲಕ್ಷಣಗಳು ಕಂಡುಬರುತ್ತಿವೆ.

ಒಟ್ಟಾರೆಯಾಗಿ ಇವರ ಕ್ಷೇತ್ರದ ಅಡಿಯಲ್ಲಿ ಬರುವ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದ್ದಾರೆ. ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾಜಕೀಯ

ಬೆಂಗಳೂರು: ಮಂಡ್ಯದ ಕೆರೆಗೋಡು ಗ್ರಾಮದಲ್ಲಿ ಹಾರಿಸಲಾಗಿದ್ದ ಹನುಮ ಧ್ವಜವನ್ನು ಕೆಳಗಿಳಿಸಿ, ರಾಷ್ಟ್ರ ಧ್ವಜ ಹಾರಿಸಿದ್ದನ್ನು ರಾಜಕೀಯ ಗೊಳಿಸಿ, ಜನರನ್ನು ದಾರಿತಪ್ಪಿಸುವ ಬಿಜೆಪಿ ಮತ್ತು ಜೆಡಿಎಸ್ ನಾಯಕರ ವರ್ತನೆ ಖಂಡನೀಯ ಎಂದು ವೆಲ್‌ಫೇರ್ ಪಾರ್ಟಿಯ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.

ರಾಷ್ಟ್ರ ಧ್ವಜ ಅಥವಾ ಕನ್ನಡ ಧ್ವಜ ಹಾರಿಸಲು ಅನುಮತಿ ಪಡೆದು, ಕೇಸರಿ ಧ್ವಜ ಹಾರಿಸಲು ಪ್ರಯತ್ನಿಸುವುದು ಎಷ್ಟು ಸರಿ. ಮಾತ್ರವಲ್ಲ, 60 ಅಡಿ ಎತ್ತರದ ಸ್ಥಂಭಕ್ಕೆ ಅನುಮತಿ ಪಡೆದು 108 ಅಡಿ ಎತ್ತರದ ಸ್ಥಂಭ ಸ್ಥಾಪಿಸಲಾಗಿದೆ ಎಂದು ತಿಳಿದು ಬಂದಿದೆ. ಇದು ಸ್ಪಷ್ಟವಾದ ನಿಯಮ ಉಲ್ಲಂಘನೆಯಲ್ಲವೇ? ಸರ್ಕಾರದ ವಿರುದ್ಧ ಜನರನ್ನು ಈ ರೀತಿ ಎತ್ತಿ ಕಟ್ಟುವುದನ್ನು ಸಮರ್ಥಿಸಲಾಗದು.

ಈ ಮೂಲಕ ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ರಾಜಕೀಯಕ್ಕೆ ಬಿಜೆಪಿ ಮತ್ತು ಜೆಡಿಎಸ್ ಮುಂದಾಗಿದೆಯೇ? ಎಂದು ಪ್ರಶ್ನಿಸಿರುವ ತಾಹೇರ್ ಹುಸೇನ್, ಸರಕಾರ ನಾಡಿನ ಜನತೆಗೆ ವಾಸ್ತವಾಂಶಗಳನ್ನು ತಿಳಿಸಿಕೊಡುವ ಪ್ರಯತ್ನ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.

ಜನರು ನಿಜಾಂಶಗಳನ್ನು ಅರಿತು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ  ಕಾಪಾಡಲು ಶ್ರಮಿಸಬೇಕು. ದ್ವೇಷದ ರಾಜಕೀಯಕ್ಕೆ ಯಾರೂ ಬಲಿಯಾಗಬಾರದು ಎಂದು ಅವರು ನಾಡಿನ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ರಾಜ್ಯ

ಡಿ.ಸಿ.ಪ್ರಕಾಶ್ ಸಂಪಾದಕರು
dynamicleaderdesk@gmail.com

“ಕೊಳಗೇರಿ ಮಂಡಳಿ ಸರ್ಕಾರಿ ಸಂಸ್ಥಯೋ? ಅಥವಾ ಶಾಸಕರ ಭವನವೋ? ಮಂಡಳಿಯ ಅಧಿಕಾರಿಗಳು ಸಂಬಳ ಪಡೆಯುವುದು ಕೊಳಗೇರಿ ಜನರ ಹೆಸರಿನಲ್ಲೋ? ಅಥವಾ ಶಾಸಕರ ಬಳಿಯೋ? ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಉತ್ತರ ಕೊಡಬೇಕಿದೆ”

ಬೆಂಗಳೂರು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ, ನಗರೇಶ್ವರ ನಾಗೇನಹಳ್ಳಿ ಸರ್ವೆ ನಂ.13ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ PAMY (HFA)-Phase-3 ಯೋಜನೆಯಡಿ ನಿರ್ಮಿಸಿರುವ 768 (ಜಿ+3) ಮನೆಗಳನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನಾ) (ತಿದ್ದುಪಡಿ) ನಿಯಮಗಳು, 2004. ನಿಯಮ 8(i), (ii) ಮತ್ತು (iii)ಕ್ಕೆ ಮತ್ತು ಸರ್ಕಾರದ ಆದೇಶ ಸಂಖ್ಯೆ: ವಇ 115 ಕೊಮಂಇ 2013 (1) ಹಾಗೂ ವಇ 115 ಕೊಮಂಇ 2013 (2)ರ ಪ್ರಕಾರ ಕೊಳಗೇರಿ ನಿವಾಸಿಗಳಿಗೆ ಹಂಚಿಕೆ ಮಾಡಬೇಕು. ಕೊಳಗೇರಿ ಮಂಡಳಿ ಸ್ಥಾಪಿತವಾಗಿರುವುದೇ ಕೊಳಗೇರಿ ಜನರಿಗೆ ಪುನರ್ವಸತಿ ಕಲ್ಪಿಸಿಕೊಡುವುದಕ್ಕಾಗಿ. ಯೋಜನೆ ಯಾವುದೇ ಇದ್ದರೂ ಫಲಾನುಭವಿ ಕೊಳಗೇರಿ ಜನರಾಗಿರಬೇಕು; ಇದು ಮಂಡಳಿಯ ನಿಯಮ.

ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ರಾಜೀವ್‌ಗಾಂಧಿ ನಗರಕ್ಕೆ (ದೇವಸಂದ್ರ) 107 ಮನೆಗಳು, ಸಂಜಯ್‌ಗಾಂಧಿ ನಗರಕ್ಕೆ (ದೇವಸಂದ್ರ) 245 ಮನೆಗಳು, ರಾಮಮೂರ್ತಿನಗರ ಸರ್ವೆ ನಂ.85ರಲ್ಲಿನ ಕೊಳಗೇರಿ ಪ್ರದೇಶಕ್ಕೆ 337 ಮನೆಗಳು ಹಾಗೂ ಭಟ್ಟರಹಳ್ಳಿ ಜನತಾ ಕಾಲೋನಿಗೆ 79 ಮನೆಗಳು ಒಟ್ಟು 768 ಮನೆಗಳನ್ನು ಸ್ಥಳಾಂತರ ಮಾಡುವ ಉದ್ದೇಶದಿಂದ ಕೊಳಗೇರಿ ಮಂಡಳಿ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಸಿದ್ದಪಡಿಸಿ, ಮನೆಗಳನ್ನು ನಿರ್ಮಾಣ ಮಾಡಿತ್ತು.

ಆದರೆ, ಕೊಳಗೇರಿ ಮಂಡಳಿಗೆ ಸದರಿ ಮನೆಗಳನ್ನು ಮೇಲ್ಕಂಡವರಿಗೆ ಹಂಚಿಕೆ ಮಾಡುವ ಅಥವಾ ಸ್ಥಳಾಂತರ ಮಾಡುವ ಯಾವ ಉದ್ದೇಶವೂ ಇಲ್ಲ. ಸದರಿ ಮನೆಗಳನ್ನು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಬೈರತಿ ಬಸವರಾಜ್ ಸೂಚಿಸುವ ಕಾರ್ಯಕರ್ತರಿಗೆ ಹಾಗೂ ಅವರ ಹಿಂಬಾಲಕರಿಗೆ ಹಂಚಿಕೆ ಮಾಡಬೇಕೆಂಬದು ಮಂಡಳಿಯ ಇರಾದೆಯಾಗಿದೆ.

ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ, ಶಾಸಕ ಬೈರತಿ ಬಸವರಾಜ್ ಅವರು ತಮ್ಮ ಕಾರ್ಯಕರ್ತರಿಂದ ಹಾಗೂ ಹಿಂಬಾಲಕರಿಂದ ಅರ್ಜಿಗಳನ್ನು ಪಡೆದು, ಪಟ್ಟಿಮಾಡಿ, 768 ಫಲಾನುಭವಿಗಳಿಗೆ ಮಂಡಳಿಯಿಂದ ಅಕ್ರಮವಾಗಿ ಅನುಮೋದನೆ ಪಡೆದುಕೊಂಡಿದ್ದರು. ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರಕ್ಕೆ ಯಾವುದೇ ಆಶ್ರಯ ಸಮಿತಿ ಇಲ್ಲ್ಲ. ಸರ್ಕಾರ (ವಸತಿ ಇಲಾಖೆ) ಅಥವಾ ಕೊಳಗೇರಿ ಮಂಡಳಿ ಯಾವುದೇ ಆಶ್ರಯ ಸಮಿತಿಗಳನ್ನು ರಚನೆ ಮಾಡಿರುವುದಿಲ್ಲ. ಆದರೂ ಇವರು 768 ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮನ್ನು ಆಶ್ರಯ ಸಮಿತಿ ಅಧ್ಯಕ್ಷರು ಎಂದು ಬರೆಸಿಕೊಂಡಿದ್ದಾರೆ. ಇದನ್ನು ಅನುಮೋದಿಸಿ ಅವರೊಂದಿಗೆ ಮಂಡಳಿಯ ಆಯುಕ್ತರಾದ ವೆಂಕಟೇಶ್ ಸಹಾ ಸಹಿ ಮಾಡಿದ್ದಾರೆ. ಇದು ಮಂಡಳಿಯ ನಿಯಮಗಳಿಗೆ ವಿರುದ್ಧವಾದದ್ದು ಮತ್ತು ದೊಡ್ಡ ಅಪರಾಧವಾಗಿದೆ.

ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸಿರುವ ವಸತಿ ಮನೆಗಳನ್ನು, ಫಲಾನುಭವಿಗಳಿಗೆ ಹಂಚಿಕೆ ಮಾಡಲು ಸರ್ಕಾರದ (ವಸತಿ ಇಲಾಖೆ) ವತಿಯಿಂದ ಆಶ್ರಯ ಸಮಿತಿಯನ್ನು ರಚಿಸಲಾಗಿರುವ ಬಗ್ಗೆ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸುವಂತೆ ದಿನಾಂಕ: 04.03.2023 ರಂದು ವಸತಿ ಇಲಾಖೆಗೆ ಅರ್ಜಿ ಬರೆಯಲಾಗಿತ್ತು. ಪತ್ರಕ್ಕೆ ಉತ್ತರ ನೀಡಿದ ವಸತಿ ಇಲಾಖೆಯ ಅಧೀನ ಕಾರ್ಯದರ್ಶಿ-2 ರವರು “ಕೋರಿರುವ ಮಾಹಿತಿಯು ಇಲಾಖೆಯಲ್ಲಿ ಲಭ್ಯವಿರುವುದಿಲ್ಲ” ಎಂದು ಹೇಳಿ, ಮಾಹಿತಿಯನ್ನು ನೇರವಾಗಿ ಒದಗಿಸಲು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತರಿಗೆ ಸೆಕ್ಷನ್ 6(3) ರಡಿಯಲ್ಲಿ ಅರ್ಜಿಯನ್ನು ವರ್ಗಾವಣೆ ಮಾಡಿದರು.

ವಸತಿ ಇಲಾಖೆ, ಸೆಕ್ಷನ್ 6(3)ರ ಅಡಿಯಲ್ಲಿ ವರ್ಗಾಯಿಸಿದ ಪತ್ರಕ್ಕೆ ಮಾಹಿತಿ ಒದಗಿಸಿದ ಮಂಡಳಿಯ ನಂ.1ನೇ ವಿಭಾಗದ ಕಾರ್ಯಪಾಲಕ ಅಭಿಯಂತರರು “ತಾವು ಕೋರಿರುವ ಮಾಹಿತಿಯನ್ನು ಪರಿಶೀಲಿಸಲಾಗಿದ್ದು ಸದರಿ ಆದೇಶವು ಈ ಕಛೇರಿಯಲ್ಲಿ ಲಭ್ಯವಿರುವುದಿಲ್ಲ. ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ನಂ.2ನೇ ಉಪ ವಿಭಾಗ ಬೆಂಗಳೂರು ರವರ ಬಳಿಯೂ ಲಭ್ಯವಿರುವುದಿಲ್ಲ” ಎಂದು ಮಾಹಿತಿ ನೀಡಿದ್ದಾರೆ” ಹಾಗಾಗಿ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಆಶ್ರಯ ಸಮಿತಿಯೇ ರಚನೆಯಾಗಿಲ್ಲ ಎಂಬುದು ಸಾಬೀತಾಗಿದೆ.

ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರ ಆಶ್ರಯ ಸಮಿತಿಯನ್ನು ಪುನರ್ ರಚಿಸುವ ಬಗ್ಗೆ ಸರ್ಕಾರದ ಆದೇಶ ಸಂಖ್ಯೆ: ವಇ ಹೆಚ್‌ಎಎಸ್ 2013, ಬೆಂಗಳೂರು, ದಿನಾಂಕ: 31ನೇ ಅಕ್ಟೋಬರ್ 2013 ರಂದು ನಗರ ಆಶ್ರಯ ಸಮಿತಿಗಳನ್ನು ಪುನರ್ ರಚಿಸಲಾಗಿದೆ. ಅದರಂತೆ, ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ವಿಧಾನಸಭಾ ಸದಸ್ಯರು ಅಧ್ಯಕ್ಷರಾಗಿರುತ್ತಾರೆ. ಸಂಬಂಧಿಸಿದ ವಿಧಾನಸಭಾ ಕ್ಷೇತ್ರದಲ್ಲಿ ವಾಸವಾಗಿರುವ ವಿಧಾನ ಪರಿಷತ್ತಿನ ಸದಸ್ಯರು, ಪಾಲಿಕೆಯ ಮಹಾಪೌರರು ಅಥವಾ ಮಹಾನಗರ ಪಾಲಿಕೆಯ ಪ್ರತಿನಿಧಿ, ಸಂಬಂಧಪಟ್ಟ ಕಂದಾಯ ಉಪವಿಭಾಗಾಧಿಕಾರಿ, ತಾಲ್ಲೂಕಿನ ತಹಶೀಲ್ದಾರರು ಸದಸ್ಯರಾಗಿರುತ್ತಾರೆ. ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಆಯುಕ್ತರು ನಾಮ ನಿರ್ದೇಶನ ಮಾಡುವ ಜಂಟಿ/ಉಪ ಆಯುಕ್ತರು ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ.

ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಹಾಗೂ ಸಾಮಾನ್ಯ ವರ್ಗದ ತಲಾ ಒಬ್ಬ ಪ್ರತಿನಿಧಿ ನಾಮನಿರ್ದೇಶಿತ ಸದಸ್ಯರಾಗಿರುತ್ತಾರೆ. ಮೇಲಿನ ಸದಸ್ಯರ ಪೈಕಿ ಒಬ್ಬರು ಮಹಿಳೆಯಾಗಿರಬೇಕು. ಇದುವೇ ಆಶ್ರಯ ಸಮಿತಿ ರಚನೆಯ ವಿಧಾನ. ಮನೆ ಕೋರಿ ಬರುವ ಅರ್ಜಿಗಳನ್ನು ಇವರೆಲ್ಲರೂ ಸೇರಿ ಪರಿಶೀಲಿಸಿ, ಅಂತಿಮಗೊಳಿಸಿ, ಪಟ್ಟಿ ಮಾಡಿದ ಮೇಲೆ ಅಧ್ಯಕ್ಷರು (ಶಾಸಕರು) ಪಟ್ಟಿಗೆ ಸಹಿ ಮಾಡುತ್ತಾರೆ. ಆ ಪಟ್ಟಿಯಲ್ಲಿರುವವರೇ ಅಧಿಕೃತ ಫಲಾನುಭವಿಗಳು. ಅಂತಹವರಿಗೆ ಸಂಬಂಧಪಟ್ಟ ಸರ್ಕಾರಿ ಸಂಸ್ಥೆಗಳು ಮನೆಗಳನ್ನು ಹಂಚಿಕೆ ಮಾಡುತ್ತದೆ. ಇದ್ಯಾವುದೂ ಇಲ್ಲದೇ ತನಗೆ ಇಷ್ಟ ಬಂದವರನ್ನೆಲ್ಲ ಸೇರಿಸಿಕೊಂಡು ಅಕ್ರಮವಾಗಿ ಪಟ್ಟಿ ಮಾಡಿ, ಅದಕ್ಕೆ ಅಶ್ರಯ ಸಮಿತಿ ಅಧ್ಯಕ್ಷರೆಂದು ಸಹಿ ಮಾಡಿಸಿ, ಮನೆಗಳನ್ನು ಹಂಚಿಕೆ ಮಾಡುತ್ತಿರುವುದು ಕಾನೂನು ಬಾಹಿರವಾದ ಕೆಲಸವಲ್ಲದೇ ಮತ್ತೇನು? ಇದು ಅಕ್ಷಮ್ಯ ಅಪರಾಧವೂ ಆಗಿದೆ.

912 (ಜಿ+3) ಮನೆಗಳ ಪೈಕಿ (ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಮನೆಗಳನ್ನೂ ಸೇರಿ) 912 ಮನೆಗಳು ಮೇಲ್ಛಾವಣಿ ಮಟ್ಟ ಮತ್ತು 96 ಮನೆಗಳು ಪೂರ್ಣತಾ ಹಂತದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಂಡಳಿ ತಿಳಿಸಿದೆ. ಮನೆಗಳ ಕಾಮಗಾರಿ ಪೂರ್ಣವಾಗಲು ಕನಿಷ್ಟ ಇನ್ನೂ ಒಂದೂವರೆ ವರ್ಷವಾದರೂ ಬೇಕು ಎಂದು ಹೇಳಲಾಗುತ್ತಿದೆ. ಕಾಮಗಾರಿ ಮುಗಿಸಲು ಮಂಡಳಿಯಲ್ಲಿ ಹಣವೂ ಇಲ್ಲ. ಈ ಹಿನ್ನಲೆಯಲ್ಲಿ ಮನೆಗಳನ್ನು ಹಂಚಿಕೆ ಮಾಡುವ ತರಾತುರಿ ಯಾಕೆ?

ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ 768 ಫಲಾನುಭವಿಗಳ ಪಟ್ಟಿಗೆ ಅನುಮೋದನೆ ಕೊಡುವ ಮೂಲಕ ಶಾಸಕರು ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ಪಡೆಯಲು ಮಂಡಳಿ ಅನುವು ಮಾಡಿಕೊಟ್ಟಿತು. ಮುಂಬರುವ ಸಂಸತ್ ಚುನಾವಣೆಯಲ್ಲಿ ಮುಂದಿನಂತೆಯೇ ಮತ ಗಳಿಸಲು ಇದೀಗ ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಶಾಸಕರಾದ ಬೈರತಿ ಬಸವರಾಜ್ ಅವರಿಗೆ ಚುನಾವಣೆಯಲ್ಲಿ ಅನುಕೂಲವಾಗಬೇಕು ಎಂಬುದಕ್ಕಾಗಿ, ಕೊಳಗೇರಿ ಜನರ ಮನೆಗಳನ್ನು ಶಾಸಕರು ಕೈತೋರಿಸುವ ಫಲಾನುಭವಿಗಳಿಗೆ ಮಂಡಳಿ ಹಂಚಿಕೆ ಮಾಡುತ್ತಿರುವುದು ಕಾನೂನು ಬಾಹಿರವಲ್ಲವೇ? ಕೊಳಗೇರಿ ಮಂಡಳಿ ಸರ್ಕಾರಿ ಸಂಸ್ಥಯೋ? ಅಥವಾ ಶಾಸಕರ ಭವನವೋ? ಮಂಡಳಿಯ ಅಧಿಕಾರಿಗಳು ಸಂಬಳ ಪಡೆಯುವುದು ಕೊಳಗೇರಿ ಜನರ ಹೆಸರಿನಲ್ಲೋ? ಅಥವಾ ಶಾಸಕರ ಬಳಿಯೋ? ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಉತ್ತರ ಕೊಡಬೇಕಿದೆ.

ಕಳೆದ ವರ್ಷ ಜನವರಿ 20 ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮತ್ತು ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಜನಶಕ್ತಿ ವೇದಿಕೆಯಿಂದ ಪತ್ರ ಬರೆದು, “ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ, ನಗರೇಶ್ವರ ನಾಗೇನಹಳ್ಳಿ ಸರ್ವೆ ನಂ.13ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸುತ್ತಿರುವ ಮನೆಗಳನ್ನು, ಅನುಕೂಲಸ್ಥ ವರ್ಗದವರಿಗೆ ಹಂಚಿಕೆ ಮಾಡುವುದನ್ನು ತಡೆಗಟ್ಟಬೇಕೆಂದು ಕೋರಲಾಯಿತು. ನಮ್ಮ ಮನವಿಯನ್ನು ಮಾನ್ಯ ಮಾಡಿದ ವಸತಿ ಇಲಾಖೆ, ದೂರಿನಲ್ಲಿರುವ ಅಂಶಗಳನ್ನು ನಿಯಮಾನುಸಾರ ಕೂಲಂಕಷವಾಗಿ ಪರಿಶೀಲಿಸಿ, ವಾಸ್ತವಾಂಶದ ಅಭಿಪ್ರಾಯದ ವರದಿಯೊಂದನ್ನು ಅತ್ಯಂತ ಜರೂರಾಗಿ ಸರ್ಕಾರಕ್ಕೆ ಕಳುಹಿಸಿಕೋಡುವಂತೆ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತರನ್ನು ಕೋರಿತು. ಆದರೆ ವರ್ಷವಾದರೂ ಇನ್ನು ವರದಿಯನ್ನು ಕಳುಹಿಸಿಕೊಡಲಿಲ್ಲ. ಇದು ಶಾಸಕರ ಮೇಲೆ ಮಂಡಳಿಯ ಅಧಿಕಾರಿಗಳು ಇಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ.

ಚುನಾವಣೆ ರಾಜಕಾರಣಕ್ಕಾಗಿ ಕೊಳಗೇರಿ ಜನರ ಮನೆಗಳನ್ನು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಬೈರತಿ ಬಸವರಾಜ್ ಅವರು ಮಂಡಳಿ ನಿಯಮಗಳನ್ನು ಗಾಳಿಗೆದೂರಿ ಮತ್ತು ತಮ್ಮನ್ನು ಆಶ್ರಯ ಸಮಿತಿ ಅಧ್ಯಕ್ಷರೆಂದು ಹೇಳಿಕೊಂಡು ತಮ್ಮ ಕಾರ್ಯಕರ್ತರಿಗೆ, ಹಿಂಬಾಲಕರಿಗೆ ಹಾಗೂ ಸ್ಥಿತಿವಂತರಿಗೆ ಸದರಿ ಮನೆಗಳನ್ನು ಅಕ್ರಮವಾಗಿ ಹಂಚಿಕೆ ಮಾಡುತ್ತಿದ್ದಾರೆ. ಇದು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನಾ) (ತಿದ್ದುಪಡಿ) ನಿಯಮಗಳು, 2004. ನಿಯಮ 8(i), (ii) ಮತ್ತು (iii)ಕ್ಕೆ ಹಾಗೂ ಸರ್ಕಾರದ ಆದೇಶ ಸಂಖ್ಯೆ: ವಇ 115 ಕೊಮಂಇ 2013 (1) ಮತ್ತು ವಇ 115 ಕೊಮಂಇ 2013 (2)ಕ್ಕೆ ವಿರೋಧವಾಗಿದೆ.

ಶಾಸಕರಾದ ಬೈರತಿ ಬಸವರಾಜ್ ನೀಡಿದ ಫಲಾನುಭವಿಗಳ ಪಟ್ಟಿಗೆ ಅಕ್ರಮವಾಗಿ ಅನುಮೋದನೆ ನೀಡಿ, ಕೊಳಗೇರಿ ಜನರ ಮನೆಗಳನ್ನು ಶಾಸಕರ ಹಿಂಬಾಲಕರಿಗೆ, ಕಾರ್ಯಕರ್ತರಿಗೆ ಹಾಗೂ ಅವರ ಚೇಲಾ ಬಾಲಗಳಿಗೆ ಹಂಚಿಕೆ ಮಾಡಲು ಶ್ರಮಿಸುತ್ತಿರುವ ಮಂಡಳಿಯ ಆಯುಕ್ತರಾದ ವೆಂಕಟೇಶ್, ಮುಖ್ಯ ಇಂಜಿನೀಯರ್ ಬಾಲರಾಜ್, ತಾಂತ್ರಿಕ ನಿರ್ದೇಶಕರಾದ ಸುಧೀರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚರನ್ ರಾಜ್, ಸಹಾಯಕ ಇಂಜಿನಿಯರ್ ನಂದಕಿರಣ್ ಹಾಗೂ ಮ್ಯಾನೇಜರ್ ಫ್ರಾನ್ಸಿಸ್ ಇವರುಗಳ ವಿರುದ್ಧ ಸರ್ಕಾರ ಕೂಡಲೇ ಕ್ರಮ ವಹಿಸಬೇಕೆಂದು ಕೊಳಗೇರಿ ಬಡಜನರ ಪರವಾಗಿ ಕೋರುತ್ತೇವೆ.

ಶಾಸಕರಾದ ಬೈರತಿ ಬಸವರಾಜ್ ಮತ್ತು ಮಂಡಳಿಯ ಭ್ರಷ್ಟ ಅಧಿಕಾರಿಗಳು ಜಂಟಿಯಾಗಿ ತಯಾರಿಸಿರುವ 768 ಫಲಾನುಭವಿಗಳ ಪಟ್ಟಿಯನ್ನು ಈ ಕೂಡಲೇ ರದ್ಧುಗೊಳಿಸಿ, ನಿಜವಾದ ಕೊಳಗೇರಿ ಬಡಜನರಿಗೆ ಸದರಿ ಮನೆಗಳನ್ನು ಹಂಚಿಕೆ ಮಾಡಲು ಸರ್ಕಾರ ಈ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂಬುದು ನಮ್ಮೆಲ್ಲರ ಮನವಿಯಾಗಿದೆ.    

ಸಿನಿಮಾ

ಗಿರೀಶ್ ಕುಮಾರ ಯಾದಗಿರಿ

ಯಾದಗಿರಿ: ಇಂದು ಯಾದಗಿರಿಯಲ್ಲಿ “ಕಾಣದ ಶಕ್ತಿ” ಚಿತ್ರ ತಂಡಕ್ಕೆ ಡಾ. ಬಿ.ಆರ್.ಅಂಬೇಡ್ಕರ್ ನಗರದ ಎಲ್ಲಾ ಹಿರಿಯರು ಹಾಗೂ ಅಭಿಮಾನಿಗಳು ಚಿತ್ರ ತಂಡಕ್ಕೆ ಶುಭ ಆರೈಸಿ ಸನ್ಮಾನಿಸಿದರು.

ನಿವೃತ್ತ ವೈದ್ಯಾಧಿಕಾರಿಗಳಾದ ಡಾ.ಭಗವಂತ ಅನವಾರ ಅವರು ಮಾತನಾಡಿ, “ಕಾಣದ ಶಕ್ತಿ” ಚಿತ್ರತಂಡದ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಚಿತ್ರವು ಯಶಸ್ಸು ಕಾಣಲೆಂದು ಶುಭ ಆರೈಸಿದರು. ಅದೇ ರೀತಿ ಕಲಾವಿದರ ತಂಡಕ್ಕೆ ಶುಭ ಆರೈಸಿ ಮಾತನಾಡಿದ ಶರಣು ನಾಟೇಕರ್ ರವರು, ಚಿತ್ರ ತಂಡದಲ್ಲಿ ಎಲ್ಲಾ ಉದಯೋನ್ಮುಖ ನಟರಿದ್ದಾರೆ ಅವರೆಲ್ಲರಿಗೂ ಭವಿಷ್ಯದಲ್ಲಿ ಒಳ್ಳೆಯ ಅವಕಾಶ ದೊರೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಹೊಸ ಪ್ರತಿಭೆಯ ನಿರ್ಮಾಪಕರಾದ ಶೃತಿ ಎಂ ಹಾಗೂ ಎಸ್.ಆರ್.ಸತೀಶ್ ಬಾಬು, ಯುವ ನಟರಾದ ಮಲ್ಲಿಕಾರ್ಜುನ, ಅವಿನಾಶ್ ಅನ್ವರ್, ರೆಡ್ಡಿ ಮುಂತಾದವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಸುರೇಶ್ ಬೊಮ್ಮನ, ಕೈಲಾಸ ಅನವಾರ, ಗುರುಲಿಂಗಪ್ಪ ಕಟ್ಟಿಮನಿ, ರಮೇಶ್ ಸುಂಗಲಕರ್, ನರೇಂದ್ರ ಅನವಾರ, ಚಂದ್ರಕಾಂತ ಚಲುವಾದಿ, ಮಲ್ಲಿಕಾರ್ಜುನ ಬೊಮ್ಮನ, ಮಲ್ಲಿಕಾರ್ಜುನ ಈಟೆ, ಆನಂದ್ ಚಟ್ಟೇರಕರ್, ಶಿವುಕುಮಾರ ಬೆಳಗುಂದಿ, ಗೀರಿಶಕುಮಾರ ಚಟ್ಟೇರಕರ್, ಮಲ್ಲಪ್ಪ ಹುಲಕಲ್ ಇನ್ನಿತರರು ಭಾಗವಹಿಸಿ ಚಿತ್ರತಂಡಕ್ಕೆ ಶುಭಾ ಹಾರೈಸಿದರು.

ರಾಜ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಲ್ಲೇಶ್ವರಂನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ನೂತನ ಉಚಿತ ಡಯಾಲಿಸಿಸ್ ಸೇವೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಆಸ್ಪತ್ರೆಗಳಲ್ಲಿ ಬಡವರಿಗೆ ಹೆಚ್ಚು ಆಸಕ್ತಿಯಿಂದ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ನೀಡಬೇಕು. ನಮ್ಮ ಸಮಾಜದಲ್ಲಿ ಬಡವರೇ ಹೆಚ್ಚಿದ್ದಾರೆ ಹಾಗಾಗಿ ಸಮಾಜದ ದೃಷ್ಟಿಯಿಂದ ಇದು ಒಳ್ಳೆಯದು ಎಂದು ಹೇಳಿದರು.

ಬಡವರಿಗೆ ಡಯಾಲಿಸಿಸ್ ಮಾಡಿಸಿಕೊಳ್ಳುವುದು ದೊಡ್ಡ ಹೊರೆ. ವಾರಕ್ಕೆ ಮೂರು ಬಾರಿ ಮಾಡಿಸಿಕೊಳ್ಳಬೇಕಾಗುತ್ತದೆ. ಒಮ್ಮೆ ಮಾಡಿಸಿದರೆ 2,000 ರೂ.ಗಳಿಗಿಂತ ಹೆಚ್ಚಿದೆ. ಬಡವರಿಗೆ ಇಷ್ಟು ಮೊತ್ತ ನೀಡಿ ಡಯಾಲಿಸಿಸ್ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕಿಡ್ನಿ ವೈಫಲ್ಯವಾದಾಗ ಡಯಾಲಿಸಿಸ್ ಒಂದೇ ಮಾರ್ಗ. ಅದಕ್ಕಾಗಿ ಸರ್ಕಾರ ಬಡವರಿಗೆ ಸಹಾಯಮಾಡಬೇಕೆಂಬ ಉದ್ದೇಶದಿಂದ ಡಯಾಲಿಸಿಸ್ ಸೇವೆಗಳನ್ನು ಉಚಿತವಾಗಿ ನೀಡುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ 219 ಡಯಾಲಿಸಿಸ್ ಕೇಂದ್ರಗಳಿವೆ. 800 ಯಂತ್ರಗಳನ್ನು ಈ ಕೇಂದ್ರಗಳಲ್ಲಿ ಅಳವಡಿಸುವ ಕೆಲಸವಾಗುತ್ತಿದೆ. ಹಿಂದೆ ನಮ್ಮ ಸರ್ಕಾರವಿದ್ದಾಗ ಹಾಗೂ ಈಗಲೂ ಕೂಡ ಸಾಧ್ಯವಾದ ಮಟ್ಟಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಿಕೊಡಬೇಕೆಂಬ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದರು.

ಸಣ್ಣ ವಯಸ್ಸಿನವರಿಗೂ ಕಿಡ್ನಿ ಸಮಸ್ಯೆ ಬರುತ್ತದೆ. ಅದಕ್ಕಾಗಿ ಸರ್ಕಾರ ಎಷ್ಟು ಸಾಧ್ಯವೋ ಅಷ್ಟು ಜನರಿಗೆ ಡಯಾಲಿಸಿಸ್ ಮಾಡಿಸುವ ಕೆಲಸ ಮಾಡುತ್ತಿದೆ. ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಈ ಸೇವೆ ದೊರಕಬೇಕು. ಜನರಿಗೆ ಹತ್ತಿರದಲ್ಲಿಯೇ ಈ ಸೇವೆ ಪಡೆಯಬಹುದು ಎಂದು ಹೇಳಿದರು.

ಏಕಬಳಕೆ ಮಾಡುವ ಡಯಾಲೈಸರ್ ಗಳನ್ನು ಪರಿಚಯಿಸಲಾಗಿದೆ. ಇದರಿಂದ ಸೋಂಕು ಕಡಿಮೆ ಮಾಡಬಹುದಾಗಿದೆ. ಡಯಾಲಿಸಿಸ್ ಕೇಂದ್ರಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಅನುದಾನ ಒದಗಿಸಿಕೊಟ್ಟಿದೆ. ರಾಜ್ಯ ಸರ್ಕಾರ ಶೇ.60 ಹಾಗೂ ಕೇಂದ್ರ ಸರ್ಕಾರ ಶೇ.40 ರಷ್ಟು ಅನುದಾನ ನೀಡಲಿದೆ. ಆದರೆ ಹೆಸರು ಮಾತ್ರ ಪ್ರಧಾನಮಂತ್ರಿ ಡಯಾಲಿಸಿಸ್ ಎಂದಿದೆ. ಹೆಚ್ಚಾಗಿ ಅನುದಾನ ಒದಗಿಸುವುದು ರಾಜ್ಯ ಸರ್ಕಾರ ಎಂದು ಕಿಡಿಕಾರಿದರು.

ಸಮಾಜದಲ್ಲಿ ಅಸಮಾನತೆ ಇದ್ದು ಬಹಳ ಜನ ಕಷ್ಟದಲ್ಲಿ ಕೈತೊಳೆಯುವ ಪರಿಸ್ಥಿತಿ ಇದೆ. ಅಸಮಾನತೆ ಹೋಗಲಾಡಿಸಲು ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಅಸಮಾನತೆ ಹೋಗಲಾಡಿಸಲು 5 ಗ್ಯಾರಂಟಿ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸಲಿವೆ. ಶಕ್ತಿ ಯೋಜನೆಯಡಿ ಮಹಿಳೆಯರು 141 ಕೋಟಿ ಬಾರಿ ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ ಎಂದು ಶಕ್ತಿ ಯೋಜನೆಯನ್ನು ಸಮರ್ಥಿಸಿಕೊಂಡರು.

1.18 ಕೋಟಿ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂಪಾಯಿ, 5 ಕೆಜಿ ಅಕ್ಕಿಗೆ 170 ರೂಪಾಯಿ, ಪ್ರತಿ ತಿಂಗಳು 200 ಯೂನಿಟ್ ವರೆಗೆ ಉಚಿತ ವಿದ್ಯುತ್, ಯುವನಿಧಿ ಕಾರ್ಯಕ್ರಮ ನಿರುದ್ಯೋಗಿ ಯುವಕರಿಗೆ ಜಾರಿಯಾಗಿದೆ. ಜನರ ಕೊಳ್ಳುವ ಶಕ್ತಿ ಹೆಚ್ಚು ಮಾಡಲು ಈ ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ ಎಂದು ಹೇಳಿದರು.

ಡಯಾಲಿಸಿಸ್ ಸೇವೆಯನ್ನು ಹೆಚ್ಚು ಮಾಡುವ ಕೆಲಸ ಮಾಡುತ್ತೇವೆ. ಆರೋಗ್ಯ ಇಲಾಖೆಯನ್ನು ಸಚಿವ ದಿನೇಶ್ ಗುಂಡೂರಾವ್ ಸುಧಾರಣೆ ಮಾಡುತ್ತಾರೆ ಎಂಬ ನಂಬಿಕೆ ಇದೆ. ಕೆ.ಸಿ.ಜನರಲ್ ಆಸ್ಪತ್ರೆ ತಾಯಿ ಮಕ್ಕಳ ಆಸ್ಪತ್ರೆ ಆಗಬೇಕು. ಶವಾಗಾರ, ಅಡುಗೆ ಮನೆ, ಜೈವಿಕ ತ್ಯಾಜ್ಯ ಕೊಠಡಿ, ಮೂಲಭೂತ ಸೌಕರ್ಯಗಳನ್ನು 150 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಇದನ್ನು ಸಚಿವ ಸಂಪುದಲ್ಲಿಟ್ಟು ಒಪ್ಪಿಗೆ ಪಡೆಯಲಾಗುವುದು ಎಂದು ಭರವಸೆ ನೀಡಿದರು.

ದೇಶ

ತಿರುವನಂತಪುರಂ: ಕೇರಳದಲ್ಲಿ ಮಾರ್ಕ್ಸಿಸ್ಟ್ ಕಮ್ಯುನಿಸ್ಟ್ ಮತ್ತು  ಇಂಡಿಯಾ ಕಮ್ಯುನಿಸ್ಟ್ ನೇತೃತ್ವದ ಎಡಪಂಥೀಯ ಸಮ್ಮಿಶ್ರ ಸರ್ಕಾರ ನಡೆಯುತ್ತಿದೆ. ಪಿಣರಾಯಿ ವಿಜಯನ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ.

ಏತನ್ಮಧ್ಯೆ, ಕೇರಳ ಸರ್ಕಾರ ಮತ್ತು ರಾಜ್ಯ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ವಿವಿಧ ವಿಷಯಗಳಲ್ಲಿ ದೀರ್ಘಕಾಲದಿಂದ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಕೇರಳ ವಿಧಾನಸಭೆಯ ಇತ್ತೀಚಿನ ಅಧಿವೇಶನದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ರಾಜ್ಯ ಸರ್ಕಾರದ ನೀತಿಗಳನ್ನು ಓದುವ ಬದಲು ಭಾಷಣದ ಕೊನೆಯ ಪ್ಯಾರಾವನ್ನು ಮಾತ್ರ ಓದಿ ವಿಧಾನಸಭೆಯಿಂದ ಹೊರನಡೆದರು. ಈ ಘಟನೆ ರಾಜ್ಯ ರಾಜಕಾರಣದಲ್ಲಿ ಭಾರೀ ಆಘಾತವನ್ನುಂಟು ಮಾಡಿತ್ತು.

ಈ ವೇಳೆ, ಕೊಲ್ಲಂ ಜಿಲ್ಲೆಯ ಕೊಟ್ಟಾರಕ್ಕರ ಪ್ರದೇಶದಲ್ಲಿ ನಡೆಯಲಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಇಂದು ಮಧ್ಯಾಹ್ನ ಕಾರಿನಲ್ಲಿ ತೆರಳುತ್ತಿದ್ದರು. ಆದರೆ, ಕೊಟ್ಟಾರಕ್ಕರದಲ್ಲಿ ನಡೆಯಲಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗವಹಿಸುವುದನ್ನು ವಿರೋಧಿಸಿ ಆಡಳಿತಾರೂಢ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್‌ ಪಕ್ಷದ ವಿದ್ಯಾರ್ಥಿ ಘಟಕವಾದ ಭಾರತೀಯ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಐಎಫ್‌) ಪ್ರತಿಭಟನೆ ನಡೆಸಿತು.

ನಿಲಮ್ಮಲ್ ಪ್ರದೇಶದಲ್ಲಿ ರಾಜ್ಯಪಾಲರ ಕಾರು ಸಾಗುತ್ತಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ ಎಸ್ಐಎಫ್ ಕಾರ್ಯಕರ್ತರು ರಾಜ್ಯಪಾಲರ ಆಗಮನದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದ ಕೆರಳಿದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ತಮ್ಮ ಕಾರಿನಿಂದ ಇಳಿದು ರಸ್ತೆಯಲ್ಲಿ ನಡೆದರು.

ಜನನಿಬಿಡ ಎಂಸಿ ರಸ್ತೆಯಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಕಾರಿನಿಂದ ಇಳಿದು ಪ್ರತಿಭಟನಾಕಾರರ ಕಡೆಗೆ ಹೋದರು. ಈ ವೇಳೆ ರಸ್ತೆ ಬದಿ ಜಮಾಯಿಸಿದ್ದ ಪ್ರತಿಭಟನಾಕಾರರು ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದ ಕೆರಳಿದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ರಸ್ತೆ ಬದಿಯ ಟೀ ಅಂಗಡಿಗೆ ತೆರಳಿ ಆಸನದಲ್ಲಿ ಕುಳಿತು ಧರಣಿ ನಡೆಸಿದರು. ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸರ ವಿರದ್ದವೂ ವಾಗ್ದಾಳಿ ನಡೆಸಿದರು.

ಅಲ್ಲದೆ, ಪ್ರತಿಭಟನೆಯಲ್ಲಿ ತೊಡಗಿದ್ದವರಿಗೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ ಎಂದು ರಾಜ್ಯಪಾಲರು ಆರೋಪಿಸಿದರು. ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಿ ಸಾಕ್ಷ್ಯ ಒದಗಿಸದ ಹೊರತು ಇಲ್ಲಿಂದ ಕದಲುವುದಿಲ್ಲ ಎಂದು ಎಚ್ಚರಿಸಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿದ ರಾಜ್ಯಪಾಲರು, ಉನ್ನತ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿ ಅಥವಾ ಪ್ರಧಾನ ಮಂತ್ರಿ ಕಚೇರಿಗೆ ಕರೆ ಮಾಡಿ ಎಂದು ಸಹಾಯಕರಿಗೆ ಸೂಚಿಸಿದರು.

ತರುವಾಯ, ರಾಜ್ಯಪಾಲರು ಧರಣಿ ಕುಳಿತ ಪ್ರದೇಶಕ್ಕೆ ದೌಡಾಯಿಸಿದ ಉನ್ನತ ಪೊಲೀಸ್ ಅಧಿಕಾರಿಗಳು, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 17 ಎಸ್ಐಎಫ್ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿದ ದಾಖಲೆಗಳನ್ನು ಅವರಿಗೆ ನೀಡಿದರು. ಇದರ ನಂತರ, ಟೀ ಅಂಗಡಿಯಲ್ಲಿ 2 ಗಂಟೆಗಳ ಕಾಲ ಧರಣಿ ಕುಳಿತ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಧರಣಿ ಮುಗಿಸಿ ಕೊಟ್ಟಾರಕ್ಕರೆಗೆ ತೆರಳಿದರು.

ಈ ಘಟನೆ ಕೇರಳದಲ್ಲಿ ಸಂಚಲನ ಮೂಡಿಸಿರುವ ಹಿನ್ನೆಲೆಯಲ್ಲಿ, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿಯೊಂದಿಗೆ ಝಡ್ ಪ್ಲಸ್ ಭದ್ರತೆ ನೀಡುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.

ರಾಜಕೀಯ

ಲಖನೌ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗೆ 11 ಕ್ಷೇತ್ರಗಳನ್ನು ನೀಡಲಾಗುವುದು ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.

ಬಿಜೆಪಿಯನ್ನು ಮೂರನೇ ಬಾರಿಗೆ ಅಧಿಕಾರಕ್ಕೆ ಬರದಂತೆ ತಡೆಯುವ ಉದ್ದೇಶದಿಂದ “ಇಂಡಿಯಾ” ಹೆಸರಿನಲ್ಲಿ 28 ವಿರೋಧ ಪಕ್ಷಗಳು ರಚಿಸಿರುವ ಒಕ್ಕೂಟವು ಕ್ಷೇತ್ರಗಳ ಹಂಚಿಕೆಯ ಬಗ್ಗೆ ಮಾತನಾಡಲು ಪ್ರಾರಂಭಿಸಿದಾಗಿನಿಂದ ಸಮಸ್ಯೆ ತಲೆ ಎತ್ತಲು ಪ್ರಾರಂಭಿಸಿತು.

ಪಶ್ಚಿಮ ಬಂಗಾಳದ ಎಲ್ಲಾ 42 ಕ್ಷೇತ್ರಗಳಲ್ಲಿ ತೃಣಮೂಲ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮುಖ್ಯಮಂತ್ರಿ ಮಮತಾ ಘೋಷಿಸಿದ್ದಾರೆ. ಅದೇ ರೀತಿ ಪಂಜಾಬ್‌ನ ಎಲ್ಲಾ 13 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಘೋಷಿಸಿದ್ದಾರೆ.

ಇದಾದ ನಂತರ ಸಮಾಜವಾದಿ ಪಕ್ಷ “ಇಂಡಿಯಾ” ಮೈತ್ರಿಕೂಟದಿಂದ ಹಿಂದೆ ಸರಿದು, ಪ್ರತ್ಯೇಕವಾಗಿ ಸ್ಪರ್ಧಿಸಲಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆದಿತ್ತು.

ಈ ಹಿನ್ನಲೆಯಲ್ಲಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ತಮ್ಮ ‘ಎಕ್ಸ್’ ಜಾಲತಾಣದಲ್ಲಿ ಹಂಚಿಕೊಂಡಿರುವ ಹೇಳಿಕೆಯಲ್ಲಿ, “ಉತ್ತರ ಪ್ರದೇಶದಲ್ಲಿ ತೀವ್ರ ಪೈಪೋಟಿ ಇರುತ್ತದೆ ಎಂದು ನಿರೀಕ್ಷಿಸಿದ್ದ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜೊತೆ ಸುಗಮ ಒಪ್ಪಂದವಾಗಿದೆ” ಎಂದು ಹೇಳಿದ್ದಾರೆ.

ಒಟ್ಟು 80 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳು ಕಾಂಗ್ರೆಸ್‌ಗೆ ನೀಡಲಾಗಿದೆ. “ಉತ್ತರಪ್ರದೇಶದಲ್ಲಿ “ಇಂಡಿಯಾ” ಮೈತ್ರಿಕೂಟ ಗೆಲ್ಲುತ್ತದೆ” ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಮೈತ್ರಿಕೂಟದ ಅಂಗಪಕ್ಷವಾಗಿರುವ ರಾಷ್ಟ್ರಿಯ ಲೋಕದಳಕ್ಕೆ (ಆರ್‌ಎಲ್‌ಡಿ) ಈ ಹಿಂದೆ 7 ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿತ್ತು ಎಂಬುದು ಗಮನಾರ್ಹ