ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
November 2023 » Dynamic Leader
October 19, 2024
Home 2023 November
ವಿದೇಶ

ಪಶ್ಚಿಮ ನೇಪಾಳದ ದೋರ್ತಿ ಪುರಸಭೆಯು ಪಿಂಕಿ ಮತ್ತು ಸುರೇಂದ್ರ ಪಾಂಡೆಯ ಸಲಿಂಗ ವಿವಾಹವನ್ನು ಕಾನೂನುಬದ್ಧವಾಗಿ ನೋಂದಾಯಿಸಿದೆ.

ನೇಪಾಳದ ತೃತೀಯ ಲಿಂಗಿಯಾಗಿರುವ ಪಿಂಕಿ ಅವರು ಸುರೇಂದ್ರ ಪಾಂಡೆ ಅವರನ್ನು ವಿವಾಹವಾಗಿದ್ದಾರೆ. ಆದರೆ ಸರ್ಕಾರ ಆರಂಭದಲ್ಲಿ ಅವರ ವಿವಾಹವನ್ನು ನೋಂದಾಯಿಸಲು ನಿರಾಕರಿಸಿತು. ಪರಿಣಾಮವಾಗಿ, ಪಿಂಕಿ ಮತ್ತು ಸುರೇಂದ್ರ ಪಾಂಡೆ ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿ ಪ್ರಕರಣವನ್ನು ದಾಖಲಿಸಿದರು.

ಆದರೆ ಈ ಬಗ್ಗೆ ತನಿಖೆ ನಡೆಸಿದ ಕಠ್ಮಂಡು ಜಿಲ್ಲಾ ನ್ಯಾಯಾಲಯ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಲು ನಿರಾಕರಿಸಿತು. ಇದರಿಂದ ಪಿಂಕಿ-ಸುರೇಂದ್ರ ಪಾಂಡೆ ಮದುವೆಗೆ ಮನ್ನಣೆ ಸಿಗಲಿಲ್ಲ. ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಯಿತು. ಪ್ರಕರಣವನ್ನು ವಿಚಾರಿಸಿದ ನೇಪಾಳದ ಸುಪ್ರೀಂ ಕೋರ್ಟ್ ಇದೀಗ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿ ಆದೇಶ ಹೊರಡಿಸಿದೆ.

ಇದರ ನಂತರ, ಪಶ್ಚಿಮ ನೇಪಾಳದ ದೋರ್ತಿ ಪುರಸಭೆಯು ಪಿಂಕಿ ಮತ್ತು ಸುರೇಂದ್ರ ಪಾಂಡೆಯ ಸಲಿಂಗ ವಿವಾಹವನ್ನು ಕಾನೂನುಬದ್ಧವಾಗಿ ನೋಂದಾಯಿಸಿದೆ. ಸಲಿಂಗ ದಂಪತಿಗಳು ತಮ್ಮ ಮದುವೆಯನ್ನು ನೋಂದಾಯಿಸಿದ್ದಕ್ಕಾಗಿ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ವಿದೇಶ

ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಎಲಾನ್ ಮಸ್ಕ್ ಅವರನ್ನು ಗಾಜಾ ಗಡಿಗೆ ಬಂದು ಇಸ್ರೇಲ್ ಮಾಡಿರುವ ವಿನಾಶವನ್ನು ನೋಡುವಂತೆ ಹಮಾಸ್‌ನ ಹಿರಿಯ ನಾಯಕರೊಬ್ಬರು ಆಹ್ವಾನಿಸಿದ್ದಾರೆ.

“ಗಾಜಾ ಗಡಿಗೆ ಬಂದು, ಗಾಜಾದ ಜನರ ವಿರುದ್ಧ ನಡೆದ ವಿಧ್ವಂಸಕ ಕೃತ್ಯಗಳನ್ನು ಪ್ರತ್ಯಕ್ಷವಾಗಿ ನೋಡಿ ತಿಳಿದುಕೊಳ್ಳುವಂತೆ ನಾವು ಅವರಿಗೆ ಕರೆ ನೀಡುತ್ತೇವೆ. 50 ದಿನಗಳಲ್ಲಿ, ಗಾಜಾದ ರಕ್ಷಣೆಯಿಲ್ಲದ ಮನೆಗಳ ಮೇಲೆ ಇಸ್ರೇಲ್ 40,000 ಟನ್ ಸ್ಫೋಟಕಗಳನ್ನು ಬೀಳಿಸಿದೆ. ಮತ್ತು ಅಮೆರಿಕ, ಇಸ್ರೇಲ್ ನೊಂದಿಗೆ ಸಂಬಂಧಗಳನ್ನು ವಿಸ್ತರಿಸಲು ಮತ್ತು ಅವರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದು ಕುರಿತು ಮರುಪರಿಶೀಲನೆ ಮಾಡಬೇಕು” ಎಂದು ಹಮಾಸ್‌ನ ಹಿರಿಯ ನಾಯಕ ಒಸಾಮಾ ಹಮ್ದಾನ್ ಹೇಳಿದ್ದಾರೆ.

ಈ ಹಿಂದೆ ಇಸ್ರೇಲ್‌ಗೆ ಭೇಟಿ ನೀಡಿದ್ದ ಎಲಾನ್ ಮಸ್ಕ್, ಹಮಾಸ್ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ್ದರು. ಮತ್ತು ಎಲಾನ್ ಮಸ್ಕ್ ಅವರು ದ್ವೇಷ ಹರಡುವುದನ್ನು ತಡೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದರು.

ವಿದೇಶ

ಬ್ಯಾಂಕಾಕ್: ಜಗತ್ತಿನಾದ್ಯಂತ ಇರುವ ಹಿಂದೂ ಸಂಘಟನೆಗಳನ್ನು ಒಗ್ಗೂಡಿಸಿ ಬಲಪಡಿಸಲು ಹಾಗೂ ಸನಾತನ ಧರ್ಮ ವಿರೋಧಿ ಹೋರಾಟಕ್ಕೆ ತಕ್ಕ ಉತ್ತರ ನೀಡುವುದು ಸೇರಿದಂತೆ ಮಹತ್ವದ ನಿರ್ಣಯಗಳನ್ನು ವಿಶ್ವ ಹಿಂದೂ ಸಮ್ಮೇಳನದಲ್ಲಿ ಅಂಗೀಕರಿಸಲಾಯಿತು.

ಆಗ್ನೇಯ ಏಷ್ಯಾದ ದೇಶವಾದ ಥೈಲ್ಯಾಂಡ್‌ನ ರಾಜಧಾನಿ ಬ್ಯಾಂಕಾಕ್‌ನಲ್ಲಿ, ‘ವಿಶ್ವ ಹಿಂದೂ ಕಾಂಗ್ರೆಸ್ 2023’ ಸಮ್ಮೇಳನವು ಇದೇ 24 ರಂದು ಪ್ರಾರಂಭವಾಗಿ ನಿನ್ನೆ ಕೊನೆಗೊಂಡಿತು. ಥೈಲ್ಯಾಂಡ್‌ ಪ್ರಧಾನಿ ಶ್ರೇತಾ ಥಾವಿಸಿನ್ ಅವರು ಉದ್ಘಾಟಿಸಿದ ಈ ಸಮ್ಮೇಳನದಲ್ಲಿ 61 ದೇಶಗಳ 2,100 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಇದರಲ್ಲಿ ಆರ್‌ಎಸ್‌ಎಸ್ ಅಧ್ಯಕ್ಷ ಮೋಹನ್ ಭಾಗವತ್, ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಸೇರಿದಂತೆ ಹಲವರು ಭಾಗವಹಿಸಿದ್ದರು. ಅಂತಿಮ ದಿನವಾದ ನಿನ್ನೆ ಸಮ್ಮೇಳನದಲ್ಲಿ ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಇದರಲ್ಲಿ ಜಗತ್ತಿನಾದ್ಯಂತ ಇರುವ ಹಿಂದೂ ಸಂಘಟನೆಗಳನ್ನು ಕ್ರೋಢೀಕರಿಸಿ ಬಲಪಡಿಸಬೇಕು, ಸನಾತನ ಧರ್ಮದ ವಿರುದ್ಧದ ಅಭಿಪ್ರಾಯಗಳಿಗೆ ತಕ್ಕ ಉತ್ತರ ನೀಡಬೇಕು ಸೇರಿದಂತೆ ನಾನಾ ನಿರ್ಣಯಗಳನ್ನು ಅಂಗೀಕರಿಸಲಾಯಿತು.ಕಾರ್ಯಕ್ರಮದ ಕೊನೆಯಲ್ಲಿ ವಿಶ್ವ ಹಿಂದೂ ಸಮ್ಮೇಳನದ ಸಂಸ್ಥಾಪಕ ಸ್ವಾಮಿ ವಿಜ್ಞಾನಾನಂದ ಅವರು ಮಾತನಾಡಿದರು.

“ಕರೋನಾ ಅವಧಿಯಲ್ಲಿ ಹಿಂದೂಗಳನ್ನು ಸಂಘಟಿಸುವುದರಲ್ಲಿ ಕುಸಿತ ಕಂಡುಬಂದಿತು; ಈಗ ಈ ಚಟುವಟಿಕೆ ಪುನಶ್ಚೇತನಗೊಂಡಿದೆ. ಕ್ರೈಸ್ತ ಸಂಘಟನೆಗಳ ವಶದಲ್ಲಿರುವ ಹಿಂದೂ ದೇವಾಲಯದ ಭೂಮಿಯನ್ನು ವಾಪಸ್ ಪಡೆಯಬೇಕು. ಅದಕ್ಕಾಗಿ ಕಾನೂನು ಕ್ರಮವನ್ನೂ ಕೈಗೊಳ್ಳಬೇಕು” ಎಂದು ಹೇಳಿದರು.

ದೇಶ

ಚೆನ್ನೈ: ಭಾರತದ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರ ಗೌರವಾರ್ಥ ಚೆನ್ನೈನಲ್ಲಿ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕಳೆದ ಏಪ್ರಿಲ್‌ನಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ 110ನೇ ವಿಧಿಯ ಅಡಿಯಲ್ಲಿ ಘೋಷಿಸಿದರು. ಇದನ್ನು ಅನುಸರಿಸಿ ತಮಿಳುನಾಡು ಸರ್ಕಾರದ ವತಿಯಿಂದ ಚೆನ್ನೈನ ಕಾಮರಾಜ ರಸ್ತೆಯಲ್ಲಿರುವ ರಾಜ್ಯ ಕಾಲೇಜು ಕ್ಯಾಂಪಸ್ ನಲ್ಲಿ 52 ಲಕ್ಷ ರೂ.ವೆಚ್ಚದಲ್ಲಿ ನೂತನ ವಿ.ಪಿ.ಸಿಂಗ್ ಪ್ರತಿಮೆ ನಿರ್ಮಿಸಲಾಗಿದೆ.

ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಹಿಂದುಳಿದ ವರ್ಗಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಲು ರಚಿಸಲಾಗಿದ್ದ ಬಿ.ಪಿ.ಮಂಡಲ್ ನೇತೃತ್ವದ ಎರಡನೇ ಹಿಂದುಳಿದ ವರ್ಗಗಳ ಆಯೋಗ ಶಿಫಾರಸನ್ನು ಹಲವು ರಾಜಕೀಯ ವಿರೋಧಗಳ ನಡುವೆ ಜಾರಿಗೊಳಿಸಿದವರು ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರು. ಇದರಿಂದ ಹಿಂದುಳಿದ ವರ್ಗಗಳಿಗೆ ಶೇ.27 ರಷ್ಟು ಮೀಸಲಾತಿ ದೊರೆಯಿತು ಎಂಬುದು ಗಮನಾರ್ಹ.   

ಈ ಹಿನ್ನಲೆಯಲ್ಲಿ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರ ಪ್ರತಿಮೆಯನ್ನು ಇಂದು ಚೆನ್ನೈನಲ್ಲಿ ಉದ್ಘಾಟಿಸಿದರು. ಸಮಾರಂಭದಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಲ್ಲದೆ, ವಿ.ಪಿ.ಸಿಂಗ್ ಅವರ ಪತ್ನಿ ಸೀತಾ ಕುಮಾರಿ, ಮಕ್ಕಳಾದ ಅಜಯ್ ಸಿಂಗ್, ಅಭಯ್ ಸಿಂಗ್, ಸಚಿವರು, ಸಂಸದರು, ಶಾಸಕರು ಮತ್ತು ಸರ್ಕಾರಿ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

ದೇಶ

ನವದೆಹಲಿ: ಭಾರತೀಯ ಪ್ರಜಾಪ್ರಭುತ್ವಕ್ಕೆ ಮಾರ್ಗದರ್ಶನ ನೀಡುವ ಸಂವಿಧಾನವನ್ನು, ಭಾರತೀಯ ಸಂವಿಧಾನ ಸಭೆಯಿಂದ ರಚಿಸಿ 1949, ನವೆಂಬರ್ 26 ರಂದು ಭಾರತದ ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಈ ನಿಟ್ಟಿನಲ್ಲಿ 2015 ರಿಂದ ಪ್ರತಿ ವರ್ಷ ನವೆಂಬರ್ 26 ಅನ್ನು ದೇಶದಾದ್ಯಂತ ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತದೆ.

ಇಂದು ದೇಶಾದ್ಯಂತ, ಸಂವಿಧಾನವನ್ನು ರಚಿಸಿದ ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಉನ್ನತ ವಿಚಾರಧಾರೆ ಮತ್ತು ತತ್ವಗಳನ್ನು ಸ್ಮರಿಸುವ ಹಲವು ಕಾರ್ಯಕ್ರಮಗಳು ನಡೆಸಲಾಗುತ್ತದೆ. ಈ ಹಿನ್ನಲೆಯಲ್ಲಿ, ಇಂದು ಭಾರತೀಯ ನ್ಯಾಯಾಂಗದ ಪ್ರಧಾನ ಕಛೇರಿಯಾಗಿರುವ ಸುಪ್ರೀಂ ಕೋರ್ಟ್ ಸಂಕೀರ್ಣದಲ್ಲಿ, ಡಾ.ಬಿ.ಆರ್.ಅಂಬೇಡ್ಕರ್ ಅವರ 7 ಅಡಿ ಎತ್ತರದ ಪ್ರತಿಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಿದರು.

ರಾಷ್ಟ್ರಪತಿಯವರೊಂದಿಗೆ ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಅಂಬೇಡ್ಕರ್ ಅವರು ವಕೀಲರ ಉಡುಪು ಧರಿಸಿ ಕೈಯಲ್ಲಿ ಭಾರತದ ಸಂವಿಧಾನವನ್ನು ಹಿಡಿದಿರುವಂತೆ ಪ್ರತಿಮೆಯನ್ನು ನಿರ್ಮಿಸಲಾಗಿದೆ.

ಕಳೆದ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ನ ಹಲವು ವಕೀಲರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿಯಾಗಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ನ್ಯಾಯಾಲಯದ ಆವರಣದಲ್ಲಿ ಸ್ಥಾಪಿಸುವಂತೆ ಮನವಿ ಸಲ್ಲಿಸಿದ್ದರು ಎಂಬುದು ಗಮನಾರ್ಹ.

ಸಿನಿಮಾ

ಖತೀಜಾ ರೆಹಮಾನ್ ಪ್ರಸಿದ್ಧ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಅವರ ಪುತ್ರಿ. 2010ರಲ್ಲಿ ಶಂಕರ್ ನಿರ್ದೇಶನದ ‘ಎಂಧಿರನ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ‘ಪುದಿಯ ಮನಿದ’ ಹಾಡಿನಲ್ಲಿ ಒಂದು ಸಣ್ಣ ಭಾಗವನ್ನು ಹಾಡಿದ್ದರು. ಇದಲ್ಲದೆ, ಇತ್ತೀಚೆಗೆ ಬಿಡುಗಡೆಯಾದ ‘ಪೊನ್ನಿಯಿನ್ ಸೆಲ್ವನ್ 2’ ಚಿತ್ರದಲ್ಲಿ ಕಾಣಿಸಿಕೊಂಡಿರುವ ‘ಚಿನ್ನಂಜಿರು ನಿಲವೇ’ ಹಾಡನ್ನು ಸಹ ಖತೀಜಾ ಹಾಡಿದ್ದಾರೆ.

ತರುವಾಯ ಹಲಿತಾ ಶಮೀಮ್ ನಿರ್ದೇಶನದ ‘ಮಿನ್ಮಿನಿ’ ಚಿತ್ರದಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಅವರು ಸಂಗೀತ ಸಂಯೋಜಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಕಳೆದ ತಿಂಗಳು ಚಿತ್ರದ ಮೊದಲ ಹಾಡು ಬಿಡುಗಡೆಯಾಗಿ ಹಲವರ ಗಮನ ಸೆಳೆದಿತ್ತು.

ಈ ಹಿನ್ನಲೆಯಲ್ಲಿ, ಬ್ರಿಟನ್ ಮತ್ತು ಭಾರತ ಜಂಟಿಯಾಗಿ ನಿರ್ಮಿಸಲಿರುವ ಲಯನೆಸ್ಸ್(ಸಿಂಹಿಣಿ) ಚಿತ್ರಕ್ಕೆ ಖತೀಜಾ ಅವರನ್ನು ಸಂಗೀತ ನಿರ್ದೇಶಕರಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಬ್ರಿಟಿಷ್ ನಟಿ ಪೈಗೆ ಸಂಧು ಮತ್ತು ಅದಿತಿ ರಾವ್ ನಟಿಸಿರುವ ಈ ಚಿತ್ರವನ್ನು ಮಹಿಳಾ ನಿರ್ದೇಶಕಿ ಕಜ್ರಿ ಬಬ್ಬರ್ ನಿರ್ದೇಶಿಸಲಿದ್ದಾರೆ.

ಈ ಚಿತ್ರವನ್ನು ಭಾರತದ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಮತ್ತು ಬ್ರಿಟನ್‌ನ ಬ್ರಿಟಿಷ್ ಫಿಲ್ಮ್ ಕಾರ್ಪೊರೇಷನ್ ಜಂಟಿಯಾಗಿ ನಿರ್ಮಿಸಲಿವೆ. ಈ ಹಿನ್ನಲೆಯಲ್ಲಿ ಗೋವಾದಲ್ಲಿ ನಡೆಯುತ್ತಿರುವ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಖತೀಜಾ ರೆಹಮಾನ್ ಈ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಗೀತ ಸಂಯೋಜಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ದೇಶ ರಾಜಕೀಯ

ಪಾಲಿ: ರಾಜಸ್ಥಾನದಲ್ಲಿ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದ್ದರೆ, ಬಿಜೆಪಿ ಸರ್ಕಾರ ರಚನೆಯಾದರೆ 450 ರೂ.ಗೆ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ನವೆಂಬರ್ 25 ರಂದು ರಾಜಸ್ಥಾನದ ಎಲ್ಲಾ 200 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದರಿಂದಾಗಿ ಅಲ್ಲಿ ಪ್ರಚಾರದ ಬಿಸಿ ತಟ್ಟಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು:

“ಚಂದ್ರಯಾನದ ಮೂಲಕ ನಮ್ಮ ಭಾರತದ ರಾಷ್ಟ್ರಧ್ವಜವನ್ನು ಚಂದ್ರನಿಗೆ ತಲುಪಿಸಿದವರು ಪ್ರಧಾನಿ ಮೋದಿ. ಹೊಸ ಸಂಸತ್ತಿನ ಕಟ್ಟಡವನ್ನು ನಿರ್ಮಿಸಿದರು; ಅವರು ಆರ್ಥಿಕತೆಯನ್ನು 11ನೇ ಸ್ಥಾನದಿಂದ 5 ನೇ ಸ್ಥಾನಕ್ಕೆ ಏರಿಸಿದರು.

ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ ಪ್ರಧಾನಮಂತ್ರಿ ಕಿಸಾನ್ ಸಮ್ಮನ್ ನಿಧಿಯನ್ನು ರೂ.6 ಸಾವಿರದಿಂದ ರೂ.12 ಸಾವಿರಕ್ಕೆ ಹೆಚ್ಚಿಸಲು ನಿರ್ಧರಿಸಿದ್ದೇವೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಕನಿಷ್ಠ ಬೆಂಬಲ ಬೆಲೆಗೆ ಕಿರುಧಾನ್ಯಗಳನ್ನು ಖರೀದಿಸುತ್ತೇವೆ. ರೂ.450ಕ್ಕೆ ಗ್ಯಾಸ್ ಸಿಲಿಂಡರ್ ನೀಡುತ್ತೇವೆ. ಪ್ರಧಾನಿ ಮೋದಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಸಾಧಿಸಿದ್ದಾರೆ” ಎಂದು ಹೇಳಿದರು.

ಕ್ರೀಡೆ

ನವದೆಹಲಿ: ಮಹಿಳೆಯರ ಸುರಕ್ಷತೆಗೆ ಒತ್ತು ನೀಡುವ ಸಲುವಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಹಿಳಾ ಕ್ರಿಕೆಟ್‌ನಲ್ಲಿ ತೃತೀಯಲಿಂಗಿಗಳನ್ನು ನಿಷೇಧಿಸಿ ಕ್ರಮ ಕೈಗೊಂಡಿದೆ.

ಪುರುಷರಂತೆ ಮಹಿಳೆಯರೂ ಕ್ರಿಕೆಟ್ ಆಡುತ್ತಿದ್ದಾರೆ. ಪುರುಷರಿಗೆ ಸರಿಸಮನಾಗಿ ಪದಕಗಳನ್ನೂ ಗೆಲ್ಲುತ್ತಿದ್ದಾರೆ. ಈ ಹಿನ್ನಲೆಯಲ್ಲಿ, ತೃತೀಯಲಿಂಗಿಗಳು ಮಹಿಳಾ ಕ್ರಿಕೆಟ್‌ನಲ್ಲಿ ಆಡದಂತೆ ಐಸಿಸಿ ನಿಷೇಧ ಹೇರಿದೆ. ಐಸಿಸಿ ಕಳೆದ 9 ತಿಂಗಳಿಂದ ಈ ಬಗ್ಗೆ ವಿವಿಧ ತಜ್ಞರೊಂದಿಗೆ ಸಮಾಲೋಚನೆ ನಡೆಸಿದೆ.

ಇದರ ಬಗ್ಗೆ ಮಾತನಾಡಿದ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಜೆಫ್ ಅಲ್ಲಾರ್ಡಿಸ್ (Geoff Allardice), “ಲಿಂಗ ಅರ್ಹತಾ ಮಾನದಂಡಗಳಲ್ಲಿನ ಬದಲಾವಣೆಯು ವ್ಯಾಪಕವಾದ ಸಮಾಲೋಚನೆಯ ನಂತರ ತೆಗೆದುಕೊಂಡ ನಿರ್ಧಾರವಾಗಿದೆ. ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನ ಸಮಗ್ರತೆಯನ್ನು ಕಾಪಾಡಲು ಮತ್ತು ಆಟಗಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಾಳಜಿ ವಹಿಸಲಾಗಿದೆ” ಎಂದು ಹೇಳಿದರು.

ಐಸಿಸಿ ಕೈಗೊಂಡಿರುವ ಈ ಕ್ರಮದಿಂದಾಗಿ ಮೊದಲ ಟ್ರಾನ್ಸ್‌ಜೆಂಡರ್ ಕ್ರಿಕೆಟಿಗರಾಗಿ ಇತಿಹಾಸ ನಿರ್ಮಿಸಿದ ಡೇನಿಯಲ್ ಮೆಕ್‌ಗಾಹೆ (Danielle McGahey) ಇನ್ನು ಮುಂದೆ ಮಹಿಳಾ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಆಸ್ಟ್ರೇಲಿಯಾದಲ್ಲಿ ಹುಟ್ಟಿ ಬೆಳೆದ ಮೆಕ್‌ಗಾಹೆ ಕೆನಡಾದ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಆಡಿದ್ದಾರೆ.

ದೇಶ

ನವದೆಹಲಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP) ಯನ್ನು ವಿರೋಧಿಸಿ ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ವಿದ್ಯಾರ್ಥಿ ಸಂಘಟನೆಗಳು ಜನವರಿ 12 ರಂದು ಸಂಸತ್ತಿಗೆ ಮುತ್ತಿಗೆ ಹಾಕಲು ನಿರ್ಧರಿಸಿದೆ.

ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಸೋಲಿಸಲು ‘ಇಂಡಿಯಾ’ ಎಂಬ ಮೈತ್ರಿಕೂಟವನ್ನು ವಿರೋಧಪಕ್ಷಗಳ ನಾಯಕರು ರಚಿಸಿದ್ದಾರೆ. ಈ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಸೇರಿದಂತೆ 28 ಪಕ್ಷಗಳು ಸೇರಿವೆ. ಈ ಮೈತ್ರಿಕೂಟದ ವಿದ್ಯಾರ್ಥಿ ಸಂಘಟನೆಗಳ ಸಮಾಲೋಚನಾ ಸಭೆ ನಿನ್ನೆ ನವದೆಹಲಿಯಲ್ಲಿ ನಡೆಯಿತು.

ಈ ಸಭೆಯಲ್ಲಿ, ‘ರಾಷ್ಟ್ರೀಯ ಶಿಕ್ಷಣ ನೀತಿ 2020’ ವಿರೋಧಿಸಿ ಜನವರಿ 12 ರಂದು ಸಂಸತ್ತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಅಖಿಲ ಭಾರತ ವಿದ್ಯಾರ್ಥಿ ಸಂಘ ಮತ್ತು ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ ಸೇರಿದಂತೆ 16 ವಿದ್ಯಾರ್ಥಿ ಸಂಘಟನೆಗಳ ಪರವಾಗಿ ಈ ನಿರ್ಧಾರಕ್ಕೆ ಬರಲಾಗಿದೆ.

ಈ ಕುರಿತು ವಿದ್ಯಾರ್ಥಿ ಸಂಘಟನೆಯ ಮುಖಂಡರೊಬ್ಬರು ಮಾತನಾಡುತ್ತಾ, ‘ಕೇಂದ್ರ ಸರ್ಕಾರ, ಶಾಲಾ ಶಿಕ್ಷಣದಿಂದ ಪದವಿವರೆಗೆ ಉಚಿತ ಶಿಕ್ಷಣವನ್ನು ಖಾತರಿಪಡಿಸಬೇಕು. ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ರಾಷ್ಟ್ರವ್ಯಾಪಿ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. ಜನವರಿ 12 ರಂದು ನವದೆಹಲಿಯಲ್ಲಿ. ಮತ್ತು ಫೆಬ್ರವರಿ 1 ರಂದು ಚೆನ್ನೈನಲ್ಲಿ ಮೆರವಣಿಗೆ ಮತ್ತು ಪ್ರತಿಭಟನೆ ನಡೆಸಲಾಗುವುದು’ ಎಂದು ಹೇಳಿದರು.

ದೇಶ

ಧನ್ಬಾದ್: ಜವಾಹರಲಾಲ್ ನೆಹರು ಪ್ರಧಾನಿಯಾಗಿದ್ದಾಗ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ನಡುವೆ ಧನ್ಬಾದ್‌ನಲ್ಲಿ ಡಿಸೆಂಬರ್ 1959 ರಲ್ಲಿ ಪಂಚೆಟ್ ಅಣೆಕಟ್ಟನ್ನು ತೆರೆಯಲಾಯಿತು. ಅದನ್ನು ಬುಡಕಟ್ಟು ಜನಾಂಗದವರೊಬ್ಬರಿಂದ ತೆರೆಯಬೇಕು ಎಂದು ಭಾವಿಸಿದ್ದ ಪ್ರಧಾನಿ ನೆಹರು, ಅಣೆಕಟ್ಟು ನಿರ್ಮಾಣದಲ್ಲಿ ತೊಡಗಿದ್ದ 16 ವರ್ಷದ ಸಂತಾಲ್ ಬುಡಕಟ್ಟು ಬಾಲಕಿ ಬಧ್ನಿ ಮಂಜಿಯಾನ್ ಅವರಿಂದ ಅಣೆಕಟ್ಟನ್ನು ಉದ್ಘಾಟಿಸಿದ್ದಾರೆ. ನಂತರ ಅವರನ್ನು ಮೆಚ್ಚಿಸಲಿಕ್ಕಾಗಿ ನೆಹರು ಅವರು ಬಧ್ನಿಗೆ  ಹೂವಿನ ಹಾರವನ್ನು ಹಾಕಿದ್ದಾರೆ.

ಹೂವಿನ ಮಾಲೆಯ ಕಾರಣದಿಂದ, ಸಂತಾಲ್ ಬುಡಕಟ್ಟು ಜನಾಂಗದ ಸಂಪ್ರದಾಯದಂತೆ ನೆಹರು ಅವರು ಬಧ್ನಿ ಮಂಜಿಯಾನ್ ಅವರನ್ನು ವಿವಾಹವಾದರು ಎಂದು ಸಂತಾಲ್ ಬುಡಕಟ್ಟು ಜನಾಂಗದವರು ನಂಬಿದ್ದಾರೆ. ಮತ್ತು ಬುಡಕಟ್ಟು ಅಲ್ಲದವರನ್ನು ಮದುವೆಯಾದ ಕಾರಣಕ್ಕಾಗಿ ಸಂತಾಲ್ ಬುಡಕಟ್ಟು ಜನಾಂಗದವರು ಬಧ್ನಿಯನ್ನು ಬಹಿಷ್ಕರಿಸಿ, ಗ್ರಾಮಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿದ್ದಾರೆ.

ಇದರಿಂದ ಬದ್ನಿಯ ಜೀವನವೇ ಬದಲಾಯಿತು. ನಂತರ ಅಲ್ಲಿಂದ ಹೊರಟು ಪಂಚೆಟ್ ಪ್ರದೇಶದಲ್ಲಿ ನೆಲೆಸಿದ್ದ ಬಧ್ನಿ, ಅಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಿ ಮಕ್ಕಳನ್ನು ಪಡೆದರು.

ದೇಶದ ಮೊದಲ ಪ್ರಧಾನಿ ನೆಹರು ಅವರ ಮೊದಲ ಬುಡಕಟ್ಟು ಪತ್ನಿ ಎಂದು ಸ್ಥಳೀಯರಿಂದ ಕರೆಸಿಕೊಳ್ಳುತ್ತಿದ್ದ ಬಧ್ನಿ ಬಗ್ಗೆ ತಿಳಿದುಕೊಂಡ ರಾಜೀವ್ ಗಾಂಧಿ, 1985ರಲ್ಲಿ ಅವರು ಪ್ರಧಾನಿಯಾಗಿದ್ದಾಗ ಪಶ್ಚಿಮ ಬಂಗಾಳದ ಅಸನ್ಸೋಲ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಅಲ್ಲಿನ ಕಾಂಗ್ರೆಸ್ ನಾಯಕರ ಮೂಲಕ ಬಧ್ನಿ ಮಂಜಿಯಾನ್ ಅವರನ್ನು ಭೇಟಿಯಾದರು.

ಹಿಂದಿನ ದುರಂತವನ್ನು ಮೆಲುಕು ಹಾಕಿದ ಬಧ್ನಿಗೆ, ಪ್ರಧಾನಿ ರಾಜೀವ್ ಗಾಂಧಿ ‘ದಾಮೋದರ್ ಕಣಿವೆ ಕಾರ್ಪೊರೇಷನ್’ (ಡಿವಿಸಿ) ನಲ್ಲಿ ಉದ್ಯೋಗ ನೀಡಲು ಆದೇಶಿಸಿದರು. ಅಲ್ಲಿ ಕೆಲಸ ಮಾಡುತ್ತಿದ್ದ ಬಧ್ನಿ 2005ರಲ್ಲಿ ನಿವೃತ್ತರಾದರು. ಅವರು ನವೆಂಬರ್ 17 ರಂದು ತಮ್ಮ 80ನೇ ವಯಸ್ಸಿನಲ್ಲಿ ತಮ್ಮ ಮಗಳು ರತ್ನ ಅವರ ಮನೆಯಲ್ಲಿ ನಿಧನರಾಗಿದ್ದಾರೆ.