ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
June 2023 » Dynamic Leader
October 22, 2024
Home 2023 June
ಬೆಂಗಳೂರು ರಾಜಕೀಯ

ಬೆಂಗಳೂರು: ಜುಲೈ 3 ರಿಂದ 14 ರವರೆಗೆ ವಿಧಾನಸೌಧದಲ್ಲಿ ಜಂಟಿ ಮತ್ತು ಬಜೆಟ್ ಅಧಿವೇಶನ ನಡೆಯಲಿದೆ. ಈ ಸಮಯದಲ್ಲಿ ವಿವಿಧ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳು ತಮ್ಮ ಬೇಡಿಕೆಗಳಿಗೆ ಒತ್ತಾಯಿಸಿ ಮೆರವಣಿಗೆ, ಪ್ರತಿಭಟನೆ, ಧರಣಿ, ಸತ್ಯಾಗ್ರಹ, ವಿಧಾನಸೌಧ ಮುತ್ತಿಗೆ ಇತ್ಯಾದಿ ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಾಧ್ಯತೆ ಇರುತ್ತವೆ.

ಇದರಿಂದ ಅಧಿವೇಶನದ ಕಾರ್ಯ-ಕಲಾಪಗಳಿಗೆ ಅಡಚಣೆ ಉಂಟಾಗುವುದಲ್ಲದೆ, ಸಾರ್ವಜನಿಕ ನೆಮ್ಮದಿಗೆ ಭಂಗ ಹಾಗೂ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆಗಳು ಇರುವುದರಿಂದ ಮತ್ತು ವಿಶೇಷ ಅಧಿವೇಶನದ ಕಲಾಪಗಳು ಸುಗುಮವಾಗಿ ನಡೆಯುವ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ, ಐಪಿಎಸ್ ಅವರು ಈ ಕೆಳಕಂಡಂತೆ ಆದೇಶವನ್ನು ಹೊರಡಿಸಿದ್ದಾರೆ.

ದಂಡ ಪ್ರಕ್ರಿಯಾ ಸಂಹಿತೆ ಕಲಂ 144ನೇ ಪ್ರಕರಣದ ಅನ್ವಯ ದಿನಾಂಕ: 03.07.2023 ರಿಂದ ದಿನಾಂಕ: 14.07.2023 ರವರೆಗೆ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಬೆಂಗಳೂರು ನಗರದ ವಿಧಾನಸೌಧ ಕಟ್ಟಡದ ಸುತ್ತಲೂ ಎರಡು ಕಿ.ಮೀ ವ್ಯಾಪ್ತಿಯಲ್ಲಿ (ಅನುಮತಿ ಪಡೆದು ಫ್ರೀಡಂ ಪಾರ್ಕ್ ನಲ್ಲಿ ನಡೆಸುವ ಪ್ರತಿಭಟನೆಗಳನ್ನು ಹೊರತುಪಡಿಸಿ) ಈ ಕೆಳಕಂಡ ನಿಬಂಧನೆಗಳಿಗೆ ಒಳಪಡುವಂತೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.

  1. ಕಾನೂನುಭಂಗ ಉಂಟು ಮಾಡುವ ಉದ್ದೇಶದಿಂದ 5 ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪು ಸೇರುವುದನ್ನು ನಿಷೇಧಿಸಿದೆ.
  2. ಮೆರವಣಿಗೆ ಮತ್ತು ಸಭೆಗಳನ್ನು ನಡೆಸುವುದನ್ನು ನಿಷೇಧಿಸಿದೆ.
  3. ಶಸ್ತ್ರಗಳನ್ನು, ದೊಣ್ಣೆಗಳನ್ನು, ಕತ್ತಿಗಳು, ಈಟಿಗಳು, ಗದೆಗಳು, ಕಲ್ಲು, ಇಟ್ಟಿಗೆ, ಚಾಕು ಇನ್ನೂ ಮುಂತಾದ ಮಾರಕಾಸ್ತ್ರಗಳನ್ನು ಅಥವಾ ದೈಹಿಕ ಹಿಂಸೆಯನ್ನು ಉಂಟುಮಾಡುವ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸಿದೆ.
  4. ಯಾವುದೇ ಸ್ಪೋಟಕ ವಸ್ತುಗಳನ್ನು ಸಿಡಿಸುವುದು, ಕಲ್ಲುಗಳನ್ನು, ಕ್ಷಿಪಣಿಗಳನ್ನು ಎಸೆಯುವ ಸಾಧನಗಳ ಅಥವಾ ಉಪಕರಣಗಳ ಸಾಗಾಟ ಮತ್ತು ಶೇಖರಿಸುವುದನ್ನು ನಿಷೇಧಿಸಿದೆ.
  5. ವ್ಯಕ್ತಿಗಳ ಅಥವಾ ಅವರ ಶವಗಳ ಪ್ರತಿಕೃತಿಗಳ ಪ್ರದರ್ಶನ ಮಾಡುವುದನ್ನು, ಪ್ರಚೋದಿಸಬಹುದಾದ ಬಹಿರಂಗ ಘೋಷನೆಗಳನ್ನು ಕೂಗುವುದು, ಸಂಜ್ಞೆ ಮಾಡುವುದು, ಹಾಡುವುದು, ಸಂಗೀತ ನುಡಿಸುವುದು, ಚಿತ್ರಗಳನ್ನು, ಸಂಕೇತಗಳನ್ನು, ಭಿತ್ತಿ ಪತ್ರ ಅಥವಾ ಇತರೆ ಯಾವುದೇ ವಸ್ತುಗಳನ್ನು ಅಥವಾ ಪದಾರ್ಥಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.       
ದೇಶ

ಜಗನ್ನಾಥ ದೇಗುಲದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗರ್ಭಗುಡಿ ಪ್ರವೇಶಿಸಲು ಅವಕಾಶ ನೀಡದ ಘಟನೆ ನಾನಾ ವಿವಾದಗಳಿಗೆ ಎಡೆಮಾಡಿಕೊಟ್ಟಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಳೆದ 20 ರಂದು ದೆಹಲಿಯ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು. ಆಗ ಅವರು ಗರ್ಭಗುಡಿಯ ಹೊರಗೆ ಎರಡೂ ಕೈಗಳನ್ನು ಮೇಲೆತ್ತಿ ಪೂಜೆ ಮಾಡುತ್ತಿರುವ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಅದು ಕಳೆದ ಕೆಲವು ದಿನಗಳಿಂದ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ.

ಭಾರತದ ಪ್ರಥಮ ದ್ರೌಪದಿ ಮುರ್ಮು ಅವರಿಗೆ ಪೂಜೆ ಮಾಡಲು ಗರ್ಭಗುಡಿ ಪ್ರವೇಶಿಸಲು ಏಕೆ ಅವಕಾಶ ನೀಡಲಿಲ್ಲ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ. ಈ ಹಿಂದೆ ಇದೇ ದೇವಸ್ಥಾನದಲ್ಲಿ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಧರ್ಮೇಂದ್ರ ಪ್ರಧಾನ್ ಮತ್ತಿತರರು ಗರ್ಭಗುಡಿಗೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಆದರೆ ಗಣರಾಜ್ಯದ ಅಧ್ಯಕ್ಷರಾದ ನಂತರವೂ ದ್ರೌಪದಿ ಮುರ್ಮು ಅವರಿಗೆ ಅವಕಾಶ ನೀಡಲಿಲ್ಲ ಏಕೆ ಎಂಬ ವಿವಾದ ತೀವ್ರವಾಗುತ್ತಿದೆ.

ಆದರೆ, ‘ಸಾಮಾನ್ಯವಾಗಿ ವಿಶೇಷ ಆಹ್ವಾನಿತರಾಗಿ ಬರುವವರಿಗೆ ಮಾತ್ರ ಗರ್ಭಗುಡಿಯೊಳಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಗನ್ನಾಥ ಯಾತ್ರೆಯ ಪ್ರಾರಂಭದ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದರು.  ಹಾಗಾಗಿ ಗರ್ಭಗುಡಿಯೊಳಗೆ ಹೋಗಿ ಪೂಜೆ ಮಾಡುವ ಬದಲು ಹೊರಗೆ ನಿಂತು ಪೂಜೆ ಸಲ್ಲಿಸಿ ಹೋದರು.

ಈ ಹಿಂದೆ ಕೆಲವು ಸಚಿವರನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಹಾಗಾಗಿ ಗರ್ಭಗುಡಿ ಪ್ರವೇಶಿಸಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ದ್ರೌಪದಿ ಮುರ್ಮು ವಿಶೇಷ ಆಹ್ವಾನಿತರಾಗಿ ಬಂದಿಲ್ಲ’ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಆದರೆ, ಅನೇಕರು ಇದನ್ನು ಒಪ್ಪಿಕೊಳ್ಳಲು ನಿರಾಕರಿಸಿ, ಇದು ಜಾತಿ ಅಸ್ಪೃಶ್ಯತೆ ಎಂದು ಟೀಕಿಸಿದ್ದಾರೆ.

ಈ ಕುರಿತು ಅಖಿಲ ಭಾರತ ಸಾಮಾಜಿಕ ನ್ಯಾಯ ಒಕ್ಕೂಟ ಹೊರಡಿಸಿರುವ ಪ್ರಕಟಣೆಯಲ್ಲಿ, “ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಶ್ರೀ ಜಗನ್ನಾಥ ದೇವಸ್ಥಾನದ ಗರ್ಭಗುಡಿಯೊಳಗೆ ಬಿಡಲಿಲ್ಲ ಎಂಬ ಸುದ್ದಿ ಆಘಾತಕಾರಿಯಾಗಿದೆ. ಈ ಸುದ್ದಿ ನಿಜವಾಗಿದ್ದರೆ, ಭಾರತ ಸಂವಿಧಾನದ 14-17ನೇ ವಿಧಿಯ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಮಂತ್ರಿಗಳು ಗರ್ಭಗುಡಿ ಪ್ರವೇಶಿಸಿ ವಿಗ್ರಹಗಳನ್ನು ಪೂಜಿಸುವಾಗ ರಾಷ್ಟ್ರಪತಿಗಳು ಪ್ರವೇಶಿಸಬಾರದೇ?

ಅದೇ ರೀತಿ 2018ರಲ್ಲಿ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿಗೂ ಅವಕಾಶ ನೀಡಿರಲಿಲ್ಲ. ಈ ಬಗ್ಗೆ ದೂರು ಕೇಳಿ ಬಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇವು ಸಮಾಜದಲ್ಲಿ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆ ಕ್ರೌರ್ಯ ಚಾಲ್ತಿಯಲ್ಲಿದೆ ಎಂಬುದನ್ನು ತೋರಿಸುತ್ತದೆ.

ರಾಷ್ಟ್ರಪತಿಯಾಗಿದ್ದರೂ ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಆದ್ದರಿಂದಲೇ ಭಾರತಕ್ಕೆ ವೈಚಾರಿಕತೆ ಮತ್ತು ಸಮಾನತೆಯ ದ್ರಾವಿಡ ಸಿದ್ಧಾಂತದ ಅಗತ್ಯವಿದೆ ಎಂದು ಹೇಳುತ್ತಿದ್ದೇವೆ. ಸಾಮಾಜಿಕ ನ್ಯಾಯದ ಆಂದೋಲನವನ್ನು ಭಾರತದಾದ್ಯಂತ ತೆಗೆದುಕೊಳ್ಳಬೇಕಾಗಿದೆ” ಎಂದು ಹೇಳಿದ್ದಾರೆ.

ಜಗನ್ನಾಥ ದೇವಾಲಯದ ಆಡಳಿತ ಮಂಡಳಿ ನೀಡಿರುವ ವಿವರಣೆ ತುಂಬಾ ವಿಚಿತ್ರವಾಗಿದೆ. ಇವರಂತೆಯೇ ಬಿಜೆಪಿಯ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿಯವರು ಇದ್ದಕ್ಕಿದ್ದಂತೆ ಪೂಜೆಗೆಂದು ಹೋದರೆ, ಅವರನ್ನು ಗರ್ಭಗುಡಿಯೊಳಗೆ ಬಿಡದೆ ಕಳುಹಿಸುತ್ತಿದ್ದರೇ? ಈ ದೇಶದ ಪ್ರಥಮ ಮಹಿಳಾ ಪ್ರಜೆ ಬಂದಾಗ, ನಿಯಮಗಳನ್ನು ಮುರಿದು ಗೌರವವನ್ನು ತೋರಿಸುವುದು ಸಂಪ್ರದಾಯವಾಗಿದೆ. ಆದರೆ, ದೇವಸ್ಥಾನದ ಆಡಳಿತ ಮಂಡಳಿ ಹಾಗೆ ಮಾಡಲಿಲ್ಲ.

ಬುಡಕಟ್ಟು ಜನರೂ ಹಿಂದೂಗಳೇ ಎಂದು ಆರ್‌ಎಸ್‌ಎಸ್ ಪ್ರಚಾರ ಮಾಡಿದರೂ, ಅವರನ್ನು ಸನಾತನ ಧರ್ಮಕ್ಕೆ ತರಲು ಸಾಧ್ಯವಿಲ್ಲ ಎಂಬುದೇ ವಾಸ್ತವ. ಏಕೆಂದರೆ ಬುಡಕಟ್ಟು ಜನರು ತಮ್ಮದೇ ಆದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹೊಂದಿದ್ದಾರೆ ಎಂಬುದು ಸತ್ಯ.

ಕ್ರೈಂ ರಿಪೋರ್ಟ್ಸ್

ಬೆಂಗಳೂರು ನಗರದ ಪಶ್ಚಿಮ ವಿಭಾಗದ ಕಾಟನ್‌ಪೇಟೆ ಪೊಲೀಸ್ ಠಾಣೆಯ ಪೊಲೀಸರು ಆಂಧ್ರಪ್ರದೇಶ ರಾಜ್ಯದಿಂದ ರೈಲಿನಲ್ಲಿ ತಂದು ಗಾಂಜಾ ಮಾರಾಟ ಮಾದುತ್ತಿದ್ದ ಆರೋಪಿಯನ್ನು ಬಂಧಿಸಿ, ಸುಮಾರು 10 ಲಕ್ಷ ರೂ. ಬೆಲೆಬಾಳುವ 20 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿರುತ್ತಾರೆ.

ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎನ್‌ಡಿಪಿಎಸ್ ಕಾಯ್ದೆ ಪ್ರಕರಣದಲ್ಲಿ ದಸ್ತಗಿರಿ ಮಾಡಿಸಿದ ಆರೋಪಿಯು, ಆಂಧ್ರ ಪ್ರದೇಶ ಮೂಲದ ಅಪರಿಚಿತ ವ್ಯಕ್ತಿಯೊಬ್ಬ ಆಂಧ್ರಪ್ರದೇಶದಿಂದ ರೈಲಿನಲ್ಲಿ ಆಗ್ಗಾಗ್ಗೆ ಗಾಂಜಾ ತಂದು ಮಾರಾಟ ಮಾಡುತ್ತಿರುವ ಬಗ್ಗೆ ಮಹಿತಿ ನೀಡಿರುತ್ತಾನೆ.

ಸದರಿ ಮಾಹಿತಿಯನ್ನು ಆಧರಿಸಿ, ಗುಮಾನಿ ಆಸಾಮಿಗಳ ಚಲನವಲನಗಳ ಮೇಲೆ ನಿಗಾವಹಿಸಿ, ಆತನು ಗಾಂಜಾವನ್ನು ಮಾರಾಟ ಮಾಡುವ ಸಲುವಾಗಿ ಜೂನ್ 24 ರಂದು ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ಗಾಂಜಾವನ್ನು ರೈಲಿನಲ್ಲಿ ತೆಗೆದುಕೊಂಡು ಬರುತ್ತಿರುವ ಮಾಹಿತಿ ಸಂಗ್ರಹಿಸಿ, ರೈಲ್ವೇ ನಿಲ್ದಾಣದ ಸುತ್ತಮುತ್ತ ನಿಗಾವಹಿಸಿದ್ದು, ನಂತರ ಖಚಿತ ಮಾಹಿತಿ ಮೇರೆಗೆ, ಸದರಿ ಆಸಾಮಿಯು ಮಾರಾಟ ಮಾಡುವ ಸಲುವಾಗಿ ಗಾಂಜಾವನ್ನು ಬೇರೆಡೆಗೆ ಸಾಗಿಸಲು ರೈಲ್ವೇ ಬ್ಯಾಕ್ ಗೇಟ್ ರಸ್ತೆಯಲ್ಲಿ ನಿಂತಿರುವಾಗ ಆಸಾಮಿಯನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿ ಆಸಾಮಿಯನ್ನು ವಿಚಾರಣೆ ಮಾಡಲಾಗಿ ತಾನು, ಅರಕು ವ್ಯಾಲಿ ತಾಲ್ಲೂಕು, ವಿಶಾಖ ಪಟ್ಟಣಂ, ಆಂಧ್ರಪ್ರದೇಶ ರಾಜ್ಯ ಎಂದು ತಿಳಿಸಿದ್ದು, ತನ್ನೊಂದಿಗೆ ಗಾಂಜಾವನ್ನು ಮಾರಾಟ ಮಾಡಲು ತಂದಿರುವುದಾಗಿ ಒಪ್ಪಿಕೊಂಡ ಮೇರೆಗೆ, ಆರೋಪಿಯ ವಶದಲ್ಲಿದ್ದ ಸುಮಾರು 10 ಲಕ್ಷ ರೂ ಮೌಲ್ಯದ 20 ಕೆಜಿ ಮಾದಕ ವಸ್ತು ಗಾಂಜಾವನ್ನು ಅಮಾನತ್ತು ಪಡಿಸಿಕೊಂಡು, ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣದ ಆರೋಪಿ ಮತ್ತು ಮಾಲು ಪತ್ತೆ ಕಾರ್ಯಚರಣೆಗೆ ಲಕ್ಷ್ಮಣ ಬಿ ನಿಂಬರಗಿ ಐಪಿಎಸ್, ಉಪ ಪೊಲೀಸ್ ಆಯುಕ್ತರು ಪಶ್ಚಿಮ ವಿಭಾಗ ರವರ ನೇತೃತ್ವದಲ್ಲಿ, ಕೆ.ಸಿ.ಗಿರಿ, ಸಹಾಯಕ ಪೊಲೀಸ್ ಆಯುಕ್ತರು ಚಿಕ್ಕಪೇಟೆ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಬಾಲರಾಜ್ ಜಿ, ಪೊಲೀಸ್ ಇನ್ಸ್​ಪೆಕ್ಟರ್, ಕಾಟನ್‌ಪೇಟೆ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡ ರಚಿಸಿದ್ದು, ಸದರಿ ತಂಡವು ಉತ್ತಮ ಕಾರ್ಯನಿರ್ವಹಿಸಿ ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.   

ದೇಶ

ತಿರುವನಂತಪುರಂ: ತಮ್ಮ ಧಾರ್ಮಿಕ ಗುರುತಿಗೆ ಅನುಗುಣವಾಗಿ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ‘ಹಿಜಾಬ್’ ಎಂಬ ತಲೆ ಮತ್ತು ಮುಖದ ಹೊದಿಕೆಯನ್ನು ಬಳಸಲು, ಕೇರಳದ ಕೆಲವು ವೈದ್ಯಕೀಯ ವಿದ್ಯಾರ್ಥಿಗಳು, ಅನುಮತಿಗಾಗಿ ಮಾಡಿದ ಮನವಿಗೆ ಕೆಲವು ವೈದ್ಯರ ಸಂಘಗಳು ವಿರೋಧ ವ್ಯಕ್ತಪಡಿಸಿವೆ.

ಕೇರಳದಲ್ಲಿ ಮಾರ್ಕ್ಸ್‌ವಾದಿ ಕಮ್ಯೂನಿಷ್ಟ್ ಪಕ್ಷಕ್ಕೆ ಸೇರಿದ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ ಆಡಳಿತ ನಡೆಸುತ್ತಿದೆ. ಇಲ್ಲಿ, ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿರುವ ಕೆಲವು ಮುಸ್ಲಿಂ ವಿದ್ಯಾರ್ಥಿಗಳು, ಕಾಲೇಜಿನ ಪ್ರಾಂಶುಪಾಲರಿಗೆ ಪತ್ರವೊಂದನ್ನು ಬರೆದಿದ್ದಾರೆ.

ಪತ್ರದಲ್ಲಿ, “ನಮ್ಮ ಧಾರ್ಮಿಕ ಪದ್ಧತಿಯ ಪ್ರಕಾರ ಹಿಜಾಬ್ ಧರಿಸುವುದು ಕಡ್ಡಾಯವಾಗಿದೆ. ಹೀಗಾಗಿ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ತಲೆ ಮತ್ತು ಮುಖವನ್ನು ಮುಚ್ಚುವಂತಹ ವೈದ್ಯಕೀಯ ಗೌನ್ ಬಳಸಲು ಅನುಮತಿ ನೀಡಬೇಕು” ಎಂದು ಮನವಿ ಮಾಡಿದ್ದಾರೆ.

ಇದಕ್ಕೆ ಭಾರತೀಯ ವೈದ್ಯಕೀಯ ಸಂಘ, ಕೇರಳ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮತ್ತಿತರರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ಆಸ್ಪತ್ರೆಗಳು ಮತ್ತು ಆಪರೇಷನ್ ಥಿಯೇಟರ್‌ಗಳಲ್ಲಿ, ರೋಗಿಗಳ ಹಿತಾಸಕ್ತಿಯೇ ಮುಖ್ಯವಾಗಿರುತ್ತದೆ. ಇದು ಜಾಗತಿಕವಾಗಿ ಅಂಗೀಕರಿಸಲ್ಪಟ್ಟಿದೆ.

ರೋಗಿಯ ಸುರಕ್ಷತೆ ಮತ್ತು ಅವರಿಗೆ ಸೂಕ್ತ ಚಿಕಿತ್ಸೆ ನೀಡುವುದಕ್ಕೆ ಒತ್ತು ನೀಡಬೇಕು. ಅದರಲ್ಲಿ ಧರ್ಮವನ್ನು ಅಳವಡಿಸಲು ಪ್ರಯತ್ನಿಸುವುದು ಸರಿಯಲ್ಲ. ಅಂತಾರಾಷ್ಟ್ರೀಯ ವೈದ್ಯಕೀಯ ಪದ್ಧತಿಯನ್ನೇ ಅನುಸರಿಸಬೇಕು. ಆದ್ದರಿಂದ ಈ ವಿದ್ಯಾರ್ಥಿಗಳ ಬೇಡಿಕೆ ಸ್ವೀಕಾರಾರ್ಹವಲ್ಲ” ಎಂದು ಸಂಘಟನೆಗಳು ಹೇಳಿವೆ.

Kerala medical students demand alternative to hijab inside operation theatres
Muslim students of the government medical college in Thiruvananthapuram have sought permission to wear long sleeve scrub jackets and surgical hoods inside the operation theatre. At least seven medical students have tabled their demands before the college authorities. The college principal said that he would call a meeting of surgeons and the infection control team to discuss the matter.

ದೇಶ ರಾಜಕೀಯ

ಬಿಜೆಪಿಯ ಪ್ರಮುಖ ನಾಯಕರ ಜೊತೆ ನಿನ್ನೆ ಮಧ್ಯರಾತ್ರಿಯವರೆಗೂ ಸಮಾಲೋಚನೆ ನಡೆಸಿದ ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಆಗಿರುವ ತಪ್ಪುಗಳು ಮತ್ತೆ ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೆ ಕೇವಲ ಎಂಟು ತಿಂಗಳೇ ಬಾಕಿ ಉಳಿದಿರುವ ಹಿನ್ನಲೆಯಲ್ಲಿ, ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಕಾರ್ಯವನ್ನು ಬಿರುಸಿನಿಂದ ಆರಂಭಿಸಿವೆ. ಈ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಲು, ಕಳೆದ 23 ರಂದು ಬಿಹಾರದ ಪಾಟ್ನಾದಲ್ಲಿ ವಿಪಕ್ಷ ನಾಯಕರು ಸಭೆ ನಡೆಸಿದ್ದಾರೆ.

ಈ ಹಿನ್ನಲೆಯಲ್ಲಿ ನವದೆಹಲಿಯಲ್ಲಿರುವ ಪ್ರಧಾನಿ ಮೋದಿ ನಿವಾಸದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಜಂಟಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಬನ್ಸಾಲ್, ಅರುಣ್ ಸಿಂಗ್ ಮತ್ತಿತರರೊಂದಿಗೆ ಮೋದಿ ಸಮಾಲೋಚನೆ ನಡೆಸಿದ್ದಾರೆ. ಸಭೆ ರಾತ್ರಿ 10 ಗಂಟೆಯ ಸುಮಾರಿಗೆ ಪ್ರಾರಂಭವಾಗಿ, ಮುಂಜಾನೆ 3.30 ರವರೆಗೆ ಮುಂದುವರೆದಿದೆ.

ಸಭೆಯ ಪ್ರಾರಂಭದಲ್ಲೇ, ಪಾಟ್ನಾದಲ್ಲಿ ಪ್ರತಿಪಕ್ಷ ನಾಯಕರ ಸಭೆಯ ಬಗ್ಗೆ ಮೋದಿ ವಿಚಾರಿಸಿದ್ದಾರೆ. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಮೋದಿ, ‘ವಿರೋಧ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಕ್ಕೂಟ ರಚನೆ ಮಾಡಲು ಸಾಧ್ಯವಿಲ್ಲ. ಇದೇ ವೇಳೆ ವಿರೋಧ ಪಕ್ಷಗಳ ತಂತ್ರಗಾರಿಕೆಯನ್ನು ಸೋಲಿಸಲು ಪ್ರತಿ ರಾಜ್ಯದಲ್ಲೂ ಬಲಿಷ್ಠವಾದ ಮೈತ್ರಿಕೂಟ ರಚನೆಯಾಗಬೇಕು. ಪ್ರತಿಯೊಂದು ಕ್ಷೇತ್ರವೂ ಮುಖ್ಯ ಎಂಬ ಕಲ್ಪನೆಯೊಂದಿಗೆ ಯೋಜನೆ ಮಾಡಬೇಕು.

10 ವರ್ಷಗಳಿಂದ ಅಧಿಕಾರ ಇಲ್ಲದ ಕಾರಣ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಮಾತ್ರವಲ್ಲದೆ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಮಾಧ್ಯಮಗಳು ಮತ್ತು ಉದ್ಯಮಿಗಳು ಸೇರಿದಂತೆ ರಾಜಕೀಯ ಹೊರತಾಗಿಯೂ ನಾವು ದೊಡ್ಡ ಸವಾಲುಗಳನ್ನು ಎದುರಿಸಬೇಕಾಗಿರುತ್ತದೆ.

ಇವೆಲ್ಲಕ್ಕೂ ಸಿದ್ಧರಾಗಿರಬೇಕು. ಕಾಂಗ್ರೆಸ್ ಮತ್ತು ರಾಜ್ಯ ಪಕ್ಷಗಳ ಭ್ರಷ್ಟಾಚಾರ ಹಾಗೂ ಉತ್ತರಾಧಿಕಾರ ರಾಜಕಾರಣದ ಬಗ್ಗೆ ಜನರಲ್ಲಿ ಪ್ರಚಾರ ಮಾಡಬೇಕು. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸರ್ಕಾರ ರಚನೆಯಾಗದಿದ್ದರೂ ಕನಿಷ್ಠ 90 ಸ್ಥಾನ ಗೆಲ್ಲುತ್ತೇವೆ ಎಂದು ನೀವೆಲ್ಲರೂ ಹೇಳಿದ್ದೀರಿ. ಇದಕ್ಕಾಗಿ ನೀವು ತೀವ್ರ ವಿರೋಧದ ನಡುವೆಯೂ ಅನೇಕ ನಿರ್ಧಾರಗಳನ್ನು ತೆಗೆದುಕೊಂಡಿದ್ದೀರಿ.

ಆದರೆ ಗೆದ್ದಿದ್ದು ಬರೀ 66 ಕ್ಷೇತ್ರಗಳಲ್ಲಿ ಮಾತ್ರ. ಕರ್ನಾಟಕದಲ್ಲಿ ಆದ ತಪ್ಪುಗಳು, ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಗಳಲ್ಲಿ ಮರುಕಳಿಸಬಾರದು’ ಎಂದು ಮೋದಿ ಕಟ್ಟುನಿಟ್ಟಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಮುಂದೆ, ಪಕ್ಷದ ಕೆಲಸಕ್ಕಾಗಿ ಕೆಲವು ಕೇಂದ್ರ ಮಂತ್ರಿಗಳನ್ನು ವಿಶೇಷವಾಗಿ ರಾಜ್ಯಗಳಲ್ಲಿ ಚುನಾವಣಾ ಉಸ್ತುವಾರಿಗಳಾಗಿ ನೇಮಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ರಾಜ್ಯಪಾಲರಾಗಿರುವ ಕೆಲವರು ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ತೋರಿದ್ದಾರೆ. ಮತ್ತೆ ಅವರನ್ನು ಪಕ್ಷದ ಕೆಲಸಕ್ಕೆ ಕರೆತರಬಹುದೇ; ಕೆಲವು ಹಿರಿಯ ನಾಯಕರನ್ನು ರಾಜ್ಯಪಾಲರನ್ನಾಗಿ ನೇಮಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.

ಏಕರೂಪ ನಾಗರಿಕ ನೀತಿಸಂಹಿತೆ ತರುವುದರಿಂದ ರಾಜಕೀಯ ಪರಿಣಾಮ ಏನಾಗಬಹುದು; ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದಂತೆ ಪ್ರತಿಭಟನೆಗಳು ನಡೆಯುವ ಸಾಧ್ಯತೆಗಳ ಬಗ್ಗೆಯೂ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು ಎಂದು ಹೇಳಲಾಗುತ್ತಿದೆ. Plan For 2024 Polls, Reshuffle Discussed At Late-Night BJP Meet

ದೇಶ ರಾಜಕೀಯ

ಗಲಭೆಗಳು ಭುಗಿಲೆದ್ದಿರುವ ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡದಿರಲು ಚೀನಾವೇ ಕಾರಣ ಎಂದು ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ತಮ್ಮ ಟ್ವಿಟರ್ ಪುಟದಲ್ಲಿ ಹೇಳಿದ್ದಾರೆ.

ಪ್ರಸ್ತುತ ಭಾರತದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ವಾಸಿಸುವ 2 ಬುಡಕಟ್ಟುಗಳ ನಡುವೆ ಸಂಘರ್ಷವಿದೆ. ಕಳೆದ ವರ್ಷ ಇಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬುಡಕಟ್ಟು ಸಮುದಾಯಕ್ಕೆ ಸೇರಿದ ಬಿರೇನ್ ಸಿಂಗ್ ಮುಖ್ಯಮಂತ್ರಿಯಾಗಿದ್ದಾರೆ. ಅಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಾಗಿನಿಂದ ಸಮಸ್ಯೆಗಳು ಹೆಚ್ಚುತ್ತಲೇ ಇವೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಮೈತೇಯಿ ಸಮುದಾಯದ ಜನರು ತಮ್ಮನ್ನು ಬುಡಕಟ್ಟು ಪಟ್ಟಿಗೆ ಸೇರಿಸಬೇಕು ಎಂದು ಕಳೆದ ಕೆಲವು ತಿಂಗಳಿನಿಂದ ಒತ್ತಾಯಿಸುತ್ತಿದ್ದಾರೆ. ಆದರೆ ಪರಿಶಿಷ್ಟ ಪಂಗಡಕ್ಕೆ ಸೇರಿದ ‘ಕುಕಿ’ ಸಮುದಾಯ ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದೆ.

ಇದರಿಂದಾಗಿ ಎರಡು ಸಮುದಾಯಗಳ ನಡುವೆ ಸಮಸ್ಯೆಗಳು ಉದ್ಭವಿಸಿ ಗಲಭೆಯಾಗಿ ಮಾರ್ಪಟ್ಟಿವೆ. ಈ ಗಲಭೆಯಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ ಅಲ್ಲಿರುವ ಕೇಂದ್ರ ಸಚಿವರು ಹಾಗೂ ರಾಜ್ಯ ಸಚಿವರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಇದಲ್ಲದೇ ಈ ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರ ಈ ಗಲಭೆಯನ್ನು ನಿಯಂತ್ರಣಕ್ಕೆ ತರದೆ ತಮಾಷೆ ನೋಡುತ್ತಿದೆ ಎಂದು ದೇಶಾದ್ಯಂತ ವಿರೋಧ ಪಕ್ಷಗಳು ಟೀಕಿಸುತ್ತಿರುವ ಬೆನ್ನಲ್ಲೇ, ರಾಜ್ಯದ ಬಿಜೆಪಿ ಸಚಿವರುಗಳು, ಬಿಜೆಪಿ ಮುಖ್ಯಮಂತ್ರಿ ವಿರುದ್ಧ ಕೇಂದ್ರ ಸರ್ಕಾರಕ್ಕೆ ದೂರು ಪತ್ರ ರವಾನಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಅಲ್ಲದೇ 50 ದಿನಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಈ ಅಹಿತಕರ ಘಟನೆಯನ್ನು ಸರಿಪಡಿಸಲು ಮುಂದಾಗದ ಪ್ರಧಾನಿ ಮೋದಿ, ಮಣಿಪುರದ ಬದಲು ಅಮೆರಿಕ-ಈಜಿಪ್ಟ್ ಪ್ರವಾಸಕ್ಕೆ ತೆರಳಿದ್ದರು. ಈ ಘಟನೆಯಿಂದ ದೇಶದೆಲ್ಲೆಡೆ ಮೋದಿಯವರ ವಿರುದ್ದ ವ್ಯಾಪಕವಾದ ಖಂಡನೆಗಳು ವ್ಯಕ್ತವಾದವು. ಆದರೂ, ಇಲ್ಲಿಯವರೆಗೆ ಮೋದಿಯವರು ಮಣಿಪುರದ ಕಡೆ ನೋಡಲೇ ಇಲ್ಲ.

ಈ ಹಿನ್ನಲೆಯಲ್ಲಿ ಮೋದಿ ಮಣಿಪುರಕ್ಕೆ ಹೋಗದಿರಲು ಚೀನಾವೇ ಕಾರಣ ಎಂದು, ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ತಮ್ಮ ಟ್ವಿಟರ್ ಪುಟದಲ್ಲಿ ಹೇಳಿದ್ದಾರೆ. ಇದರ ಬಗ್ಗೆ ಅವರು ಮಾಡಿರುವ ಟ್ವೀಟ್ ನಲ್ಲಿ, “ಪ್ರಧಾನಿ ಮೋದಿ ಮಣಿಪುರಕ್ಕೆ ಹೋಗಿ ಅಲ್ಲಿನ ಜನರಿಗೆ ಏಕೆ ಸಾಂತ್ವನ ಹೇಳಲಿಲ್ಲ.

ಬರ್ಮಾ (ಮ್ಯಾನ್ಮಾರ್) ಮೂಲಕ ಚೀನಾ ಸರಬರಾಜು ಮಾಡುವ ಶಸ್ತ್ರಾಸ್ತ್ರಗಳಿಂದ ಮೈತೇಯಿ ವಿರೋಧಿ (ಹಿಂದೂ) ಜನರನ್ನು ಗುರಿಯಾಗಿಸಲಾಗುತ್ತಿದೆ. ಈ ಹಿಂದೆ ಲಡಾಖ್‌ನಲ್ಲಿ ಚೀನಾ ನಮ್ಮ ಭೂಮಿಯನ್ನು ಕಬಳಿಸಲು ಯತ್ನಿಸಿದಾಗ ಮೋದಿ ಹೆದರಿದ್ದರು.

ಅಂದರೆ, ಮ್ಯಾನ್ಮಾರ್ ಮೂಲಕ ಮೈತೇಯಿ ಸಮುದಾಯದ ಮೇಲೆ ದಾಳಿ ಮಾಡಲು ಚೀನಾ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದ್ದು, ಚೀನಾದ ಭಯದಿಂದ ಪ್ರಧಾನಿ ಮೋದಿ ಈ ವಿಷಯದಲ್ಲಿ ಮೌನವಾಗಿದ್ದಾರೆ” ಎಂದು ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ.

ಗಲಭೆಯಿಂದ ಸಂತ್ರಸ್ತರಾದ ಜನರನ್ನು ಮೋದಿ ಭೇಟಿ ಮಾಡದಿರುವ ಹಿನ್ನಲೆಯಲ್ಲಿ, ಅಲ್ಲಿನ ಜನರನ್ನು ಭೇಟಿ ಯಾಗಲು ಇಂದು ರಾಹುಲ್ ಗಾಂಧಿ ಮಣಿಪುರಕ್ಕೆ ತೆರಳಿದ್ದಾರೆ. ಆದರೆ ಇಂಫಾಲ ವಿಮಾನ ನಿಲ್ದಾಣದಿಂದ ಸುರಚಂದಪುರಕ್ಕೆ ತೆರಳುತ್ತಿದ್ದ ರಾಹುಲ್ ಗಾಂಧಿ ಅವರನ್ನು ಬಿಷ್ಣುಪುರ ಪ್ರದೇಶದಲ್ಲಿ ಪೊಲೀಸರು ತಡೆದರು. ಇದರಿಂದಾಗಿ ಕಾಂಗ್ರೆಸ್ ಪಕ್ಷವು ಅಲ್ಲಿ ಪ್ರತಿಭಟನೆಯಲ್ಲಿ ತೊಡಗಿತು.

ದೇಶ ರಾಜಕೀಯ

ಮುಂಬೈ: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆಯ ಬೇಕಿದ್ದ ವಿಪಕ್ಷ ನಾಯಕರ ಸಭೆಯನ್ನು, ಜುಲೈ 13 ಮತ್ತು 14 ರಂದು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ. ಶಿಮ್ಲಾದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ, ಸಭೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಆಡಳಿತಾರೂಢ ಬಿಜೆಪಿ ವಿರುದ್ಧ ಎಲ್ಲಾ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸಿ, ಆಡಳಿತ ಪಕ್ಷದ ವಿರುದ್ಧ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ಜೂನ್ 23 ರಂದು ಪಾಟ್ನಾದಲ್ಲಿ ಪ್ರತಿಪಕ್ಷ ನಾಯಕರ ಸಭೆ ಕರೆಯಲಾಗಿತ್ತು.

ಆ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಎಂ.ಕೆ.ಸ್ಟಾಲಿನ್, ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್, ಅರವಿಂದ್ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಸೇರಿದಂತೆ 16 ವಿರೋಧ ಪಕ್ಷಗಳ ಮುಖಂಡರುಗಳು ಭಾಗವಹಿಸಿದ್ದರು. ಈ ಸಭೆಯ ಕೊನೆಯಲ್ಲಿ, ಮುಂದಿನ ಸಭೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆಯಲಿದೆ ಎಂದು ಘೋಷಿಸಲಾಗಿತ್ತು.

ಈ ಹಿನ್ನಲೆಯಲ್ಲಿ, ರಾಷ್ಟ್ರೀಯವಾದಿ ಕಾಂಗ್ರೆಸ್ ಅಧ್ಯಕ್ಷ ಶರದ್ ಪವಾರ್, “ಪಾಟ್ನಾದಲ್ಲಿ ನಡೆದ ಪ್ರತಿಪಕ್ಷ ನಾಯಕರ ಸಭೆಯಿಂದ ಪ್ರಧಾನಿ ಮೋದಿ ಅಸ್ತವ್ಯಸ್ತರಾಗಿ ಕಾಣುತ್ತಿದ್ದಾರೆ. ವಿರೋಧ ಪಕ್ಷದ ನಾಯಕರ ಮುಂದಿನ ಸಭೆ ಜುಲೈ 13 ಮತ್ತು 14 ರಂದು ಕರ್ನಾಟಕದ ಬೆಂಗಳೂರಿನಲ್ಲಿ ನಡೆಯಲಿದೆ” ಎಂದು ಹೇಳಿದ್ದಾರೆ.

ಹಿಮಾಚಲ ಪ್ರದೇಶ ಶಿಮ್ಲಾದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ, ಸಭೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಬಡತನ ರೇಖೆಗಿಂತ ಕೆಳಗಿರುವ ಪ್ರತಿ ವ್ಯಕ್ತಿಗೆ, ತಲಾ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ, ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿತ್ತು. ಪ್ರತಿಷ್ಠಿತ ಅನ್ನಭಾಗ್ಯ ಯೋಜನೆಯನ್ನು ಜುಲೈ 1 ರಿಂದ ಜಾರಿಗೆ ತರಲು ಯೋಜನೆ ಹಾಕಿಕೊಂಡು, ಕೇಂದ್ರ ಸರ್ಕಾರದ ಬಳಿ ಹೆಚ್ಚುವರಿಯಾಗಿ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಹಣಕೊಟ್ಟು ಖರೀದಿ ಮಾಡಲು ಬೇಡಿಕೆ ಇಟ್ಟಿತ್ತು. ಆದರೆ, ಕೇಂದ್ರ ಸರ್ಕಾರ ಈ ಬೇಡಿಕೆಯನ್ನು ಒಪ್ಪಿಕೊಳ್ಳದೇ ರಾಜ್ಯಗಳಿಗೆ ಅಕ್ಕಿ ಮಾರಾಟವನ್ನು ಏಕಾಏಕಿ ನಿಲ್ಲಿಸಿತು.

ಕೆಲವು ದಿನಗಳ ಹಿಂದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದ ಸಂದರ್ಭದಲ್ಲೂ ಇದರ ಬಗ್ಗೆ ಪ್ರಸ್ತಾಪ ಮಾಡಿದ್ದರು. ಅಮಿತ್ ಶಾ ಅವರು ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡುವುದಾಗಿ ಹೇಳಿದ್ದರು ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಆದರೆ, ರಾಜ್ಯ ಸರ್ಕಾರದ ಬೇಡಿಕೆಗಳಿಗೆ ಕೇಂದ್ರವು ಸೊಪ್ಪುಹಾಕಲಿಲ್ಲ. ಅದೇ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಬೇರೆ ಮೂಲಗಳಿಂದಲೂ ಅಕ್ಕಿ ಖರೀದಿಗೆ ಪ್ರಯತ್ನ ಮಾಡುತಿತ್ತು.

ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್ ಮುಂತಾದ ರಾಜ್ಯಗಳೂ ತಮ್ಮ ಬಳಿ ಅಷ್ಟೊಂದು ಅಕ್ಕಿ ಸಂಗ್ರವಿಲ್ಲ ಎಂದು ಹೇಳಿ ಕೈ ತೊಳೆದುಕೊಂಡಿತು. ರಾಜಕೀಯವಾಗಿ ಸೇಡು ತೀರಿಸಿಕೊಂಡ ಬಿಜೆಪಿ, ಅಕ್ಕಿ ಕೊಡುವ ವಿಚಾರವನ್ನು ಮುಂದಿಟ್ಟು, ಕಾಂಗ್ರೆಸ್ ಸರಕಾರವನ್ನು ಜನರ ಮುಂದೆ ಬೆತ್ತಲೆಗೊಳೀಸುವ ಪ್ರಯತ್ನವನ್ನು ಮಾಡಿತು. ಕೆಳದ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸಿದ 90% ಮತದಾರರು, ರಾಜ್ಯ ಸರ್ಕಾರದ ಪ್ರತಿಷ್ಠಿತ ಅನ್ನಭಾಗ್ಯ ಯೋಜನೆಯ ಫಲಾನುಭವಿಳು ಎಂಬುದನ್ನು ಬಿಜೆಪಿ ಈ ಸಂದರ್ಭದಲ್ಲಿ ಮರೆಯಬಾರದು.

“10 ಕೆಜಿ ಅಕ್ಕಿಯನ್ನು ಕೊಡಲಾಗದ ಸರ್ಕಾರ”, “ಕೇಂದ್ರ ಕೊಡುವ ಅಕ್ಕಿಗೆ ಸಿದ್ದರಾಮಯ್ಯ ಫೋಟೋ ಅಳವಡಿಸಿಕೊಳ್ಳೂವ ಪ್ರಯತ್ನ”, “ಅಕ್ಕಿ ಕೊಡುವ ಘೋಷಣೆಗೆ ಮುಂಚೆ ಕೇಂದ್ರದ ಅನುಮತಿಯನ್ನು ಪಡೆಯಲಾಗಿತ್ತೆ”, ಮೋದಿ ಕೊಡುವ 5 ಕೆಜಿ ಅಕ್ಕಿಯೊಂದಿಗೆ ಸರ್ಕಾರ ಕೊಡುವ 10 ಕೆಜಿ ಅಕ್ಕಿಯನ್ನೂ ಸೇರಿಸಿ 15 ಕೆಜಿ ಅಕ್ಕಿ ಕೊಡಿ” ಎಂಬಿತ್ಯಾದಿ ತಲೆಹರಟೆ ರಾಜಕೀಯವನ್ನು, ಕಳೆದ ಒಂದು ತಿಂಗಳಿನಿಂದ ಬಿಜೆಪಿಯ ಕೆಲವು ನಾಯಕರು ಮಾಡುತ್ತಿರುವುದು ನಾಚಿಕೆಗೇಡು.

ಕೇಂದ್ರ ಸರ್ಕಾರದ ಗೋದಾಮುಗಳಲ್ಲಿ ಹೆಚ್ಚುವರಿಯಾಗಿ ಸಂಗ್ರಹ ಮಾಡಿಟ್ಟಿರುವ ಅಕ್ಕಿಯನ್ನು ಕೊಡದೇ ತಡೆಮಾಡಿ, ಜನರಿಗೆ ಅಕ್ಕಿ ಕೊಡುವಂತೆ ಸರ್ಕಾರವನ್ನು ಪೀಡಿಸುತ್ತಿರುವ ರಾಜ್ಯ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಇಬ್ಬಗೆಯ ನೀತಿಯನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ ಎಂಬುದನ್ನು, ಬಿಜೆಪಿ ಏಕೆ ಗಮನಿಸುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ಜನರ ಮೂಲಭೂತ ಸೌಲಭ್ಯಗಳ ಮೇಲೆ ಬಿಜೆಪಿ ಚೆಲ್ಲಾಟ ಆಡುತ್ತಿರುವುದನ್ನು ನಿಲ್ಲಿಸದಿದ್ದರೆ, ಹಿಂದಿನ ಫಲಿತಾಂಷವೇ ಮುಂದಿನ ಚುನಾವಣೆಯಲ್ಲೂ ಮರುಕಳಿಸುತ್ತದೆ ಎಂಬುದನ್ನು ಬಿಜೆಪಿಗರು ಅರ್ಥ ಮಾಡಿಕೊಳ್ಳಬೇಕು.    

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013ರ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ನಗರ ಮತ್ತು ಗ್ರಾಮೀಣ ಪ್ರದೇಶದ ಅರ್ಹ ಬಡಜರಿಗೆ 5 ಕೆಜಿ ಅಕ್ಕಿಯನ್ನು ಕೊಡುವ ಕಾಯ್ದೆಯನ್ನು ತಂದಿದ್ದು, ಅಂದಿನ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ (ಯುಪಿಎ) ಸರ್ಕಾರ. ಅದನ್ನು ಮರೆಮಾಚುತ್ತಿರುವ ಬಿಜೆಪಿ ನಾಯಕರು, “ಮೋದಿ 5 ಕೆಜಿ ಅಕ್ಕಿ ಕೊಡುತ್ತಿದ್ದಾರೆ; ಮೋದಿ ಅಕ್ಕಿ- ಮೋದಿ ಅಕ್ಕಿ” ಎಂದು ಹೇಳಿಕೊಂಡು ಓಡಾಡುವುದು ಅಮಾಯಕರನ್ನು ನಂಬಿಸಿ, ವಂಚಿಸುವ ಕೃತ್ಯವಲ್ಲದೇ ಮತ್ತೇನು ಇಲ್ಲ.

ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯ್ ಅವರು, “170 ರೂಪಾಯಿಗೆ ಎರಡು ಕೆಜಿ ಅಕ್ಕಿಯೂ ಬರಲ್ಲ” ಎಂದಿದ್ದಾರೆ. ಇವರ ಕಾಲದಲ್ಲಿ ಬಡವರಿಗೆ ಪಡಿತರದಲ್ಲಿ ಜೀರಾ, ಕೇಸರ್ ಕಲಿ, ಬುಲೆಟ್ ರೈಸ್ ಮುಂತಾದ ಸ್ಥಿತಿವಂತರು ತಿನ್ನುವ ಅಕ್ಕಿ ನೀಡಲಾಗುತಿತ್ತೇ ಎಂಬುದನ್ನು ಅವರು ಈ ರಾಜ್ಯದ ಜನತೆಗೆ ಹೇಳಬೇಕು. 10 ಕೆಜಿ, 15 ಕೆಜಿ ಅಕ್ಕಿಗೂ ಪರದಾಡುವಂತ ಬಡಜನರು ಇನ್ನೂ ಈ ದೇಶದಲ್ಲಿ ಇದ್ದಾರೆ ಎಂಬುದಕ್ಕೆ ನೀವುಗಳೇ ಸಾಕ್ಷಿ. ಭಾರತ ಇನ್ನು ಆರ್ಥಿಕ ಪ್ರಗತಿಯನ್ನು ಹೊಂದಿಲ್ಲ; ಇನ್ನು ಬಡತನದಲ್ಲಿಯೇ ಇದೆ ಎಂಬುದನ್ನು ಮೋದಿ ಅವರ 9 ವರ್ಷಗಳ ಆಡಳಿತ ಈ ಜಗತ್ತಿಗೆ ತೋರಿಸಿಕೊಟ್ಟಿದೆ.

ಈ ಹಿನ್ನಲೆಯಲ್ಲಿ, ಕರ್ನಾಟಕ ಸರ್ಕಾರವು ತನ್ನ ಚುನಾವಣಾ ಗ್ಯಾರಂಟಿಯನ್ನು ಪೂರೈಸಲು ಅಗತ್ಯವಾದ ದೊಡ್ಡ ಪ್ರಮಾಣದ ಅಕ್ಕಿಯನ್ನು ಸಂಗ್ರಹಿಸಲು ತೊಂದರೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಪ್ರತಿ ಕೆಜಿಗೆ 34 ರೂ.ನಂತೆ ಹಣ ಪಾವತಿಸಲು ನಿರ್ಧರಿಸಿದೆ. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕೇಂದ್ರವು ಉಚಿತವಾಗಿ ನೀಡುವ ಐದು ಕೆಜಿ ಅಕ್ಕಿ ಜೊತೆಗೆ ತಿಂಗಳಿಗೆ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಅಕ್ಕಿ ಸಂಗ್ರಹಿಸಲು ಸಾಧ್ಯವಾಗದ ಕಾರಣ ಜುಲೈನಿಂದಲೇ ಹಣ ಪಾವತಿ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.

ಭಾರತೀಯ ಆಹಾರ ನಿಗಮ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳ ಪ್ರಮಾಣಿತ ದರವನ್ನು ನಿಗದಿಪಡಿಸಿರುವುದರಿಂದ ಪ್ರತಿಯೊಬ್ಬ ಫಲಾನುಭವಿಗೆ 34 ರೂಗಳನ್ನು ನೀಡಲು ಸಂಪುಟ ಸಭೆ ತೀರ್ಮಾನಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ, “ನಾವು ಅಕ್ಕಿ ಖರೀದಿಸಲು ಎಲ್ಲಾ ಪ್ರಯತ್ನ ಮಾಡಿದೆವು. ಆದರೆ ನಮಗೆ ಅಗತ್ಯವಿರುವಷ್ಟು ಅಕ್ಕಿಯನ್ನು ಪೂರೈಸಲು ಯಾವುದೇ ಸಂಸ್ಥೆ ಮುಂದೆ ಬಂದಿಲ್ಲ. ಹೀಗಾಗಿ ಅಕ್ಕಿ ಖರೀದಿ ತಡವಾಗುತ್ತಿದೆ. ಹೀಗಾಗಿ ಅಕ್ಕಿ ಬದಲಿಗೆ ಹಣ ನೀಡಲು ಸಂಪುಟ ಸಭೆ ತೀರ್ಮಾನಿಸಿದೆ.

ಒಂದು ಕಾರ್ಡ್‌ನಲ್ಲಿ ಒಬ್ಬ ವ್ಯಕ್ತಿ ಇದ್ದರೆ, ಆ ವ್ಯಕ್ತಿಗೆ ಅನ್ನ ಭಾಗ್ಯ ಯೋಜನೆಯಡಿ ಐದು ಕೆಜಿ ಹೆಚ್ಚುವರಿ ಅಕ್ಕಿಗೆ ತಿಂಗಳಿಗೆ 170 ರೂ. ಸಿಗುತ್ತದೆ ಎಂದು ಸಚಿವರು ವಿವರಿಸಿದರು. ಪಡಿತರ ಚೀಟಿಯಲ್ಲಿ ಇಬ್ಬರಿದ್ದರೆ ಅವರು 340 ರೂ.ಗೆ ಅರ್ಹರಾಗಿರುತ್ತಾರೆ. ಐವರು ಸದಸ್ಯರಿದ್ದರೆ ಅವರಿಗೆ ತಿಂಗಳಿಗೆ 850 ರೂಪಾಯಿಯನ್ನು ನೀಡಲಾಗುತ್ತದೆ. ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡಲು ಸರ್ಕಾರ ವ್ಯವಸ್ಥೆ ಮಾಡಿದೆ. ಇದು ಜುಲೈ 1ರಿಂದಲೇ ಜಾರಿಗೆ ಬರಲಿದೆ” ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.

ಅಕ್ಕಿ ಸಿಕ್ಕ ನಂತರ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿಯನ್ನೇ ನೀಡುತ್ತೇವೆ ಎಂದು ಮುನಿಯಪ್ಪ ತಿಳಿಸಿದ್ದಾರೆ. ಉಚಿತ ಅಕ್ಕಿ ನೀಡುವ ಯೋಜನೆ ಜಾರಿಗಾಗಿ ಅಕ್ಕಿ ಖರೀದಿಸಲು, ಕರ್ನಾಟಕ ಸರ್ಕಾರ ಕೇಂದ್ರ ಆಹಾರ ನಿಗಮದ ಮೊರೆ ಹೋಗಿತ್ತು. ಆದರೆ, ಅಲ್ಲಿಂದ ಹೆಚ್ಚುವರಿ ಅಕ್ಕಿ ಪೂರೈಕೆಗೆ ಒಪ್ಪಿಗೆ ಸಿಕ್ಕಿರಲಿಲ್ಲ. ನಂತರ ಸಚಿವ ಮುನಿಯಪ್ಪ ಅವರು ಕೇಂದ್ರ ಸಚಿವ ಪೀಯೂಷ್ ಗೋಯಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೂ ಹೆಚ್ಚುವರಿ ಅಕ್ಕಿ ಕೊಡಲು ಕೇಂದ್ರ ಸರ್ಕಾರ ನಿರಾಕರಿಸಿತ್ತು.

ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲು ರಾಜ್ಯಕ್ಕೆ ಹೆಚ್ಚುವರಿಯಾಗಿ ಬೇಕಾಗಿರುವ ಅಕ್ಕಿಯನ್ನು ಖರೀದಿಸಲು ಕಾಲವಿಳಂಬ ಆಗುತ್ತಿದ್ದರೂ ಅದಕ್ಕೆ ಬದಲಾಗಿ ಫಲಾನುಭವಿಗಳಿಗೆ ಹಣ ಕೊಡುವ ಮೂಲಕ ಯೋಜನೆಯನ್ನು ಜುಲೈ 1 ರಿಂದಲೇ ಜಾರಿಗೊಳಿಸಬೇಕು ಎಂಬ ರಾಜ್ಯ ಸರ್ಕಾರದ ನಿರ್ಧಾರ ಶ್ಲಾಘನೀಯವಾದದ್ದು. ಏನೇ ಇರಲಿ, ರಾಜಕೀಯವಾಗಿ ಇದು ಬಿಜೆಪಿಗೆ ಮತ್ತೊಂದು ಮುಖಭಂಗವೇ.

ವಿದೇಶ ಶಿಕ್ಷಣ

ಚೀನಾದ ವುಹಾನ್ ಪ್ರಾಂತ್ಯದಲ್ಲಿ ಹುಟ್ಟಿಕೊಂಡಿದ್ದ ಕೋವಿಡ್-19 ವೈರಸ್, ಅಲ್ಲಿನ ಪ್ರಯೋಗಾಲಯದಿಂದ ಜನರಿಗೆ ಸೋಂಕು ತಗುಲಿಸುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ರಚಿಸಲಾಗಿದ್ದು, ಇದು ಜೈವಿಕ ಅಸ್ತ್ರ ಎಂದು ವುಹಾನ್ ಸಂಶೋಧಕರು ಆಘಾತಕಾರಿ ಮಾಹಿತಿ ನೀಡಿದ್ದಾರೆ.

2019ರ ಕೊನೆಯಲ್ಲಿ ಚೀನಾದ ವುಹಾನ್‌ನಲ್ಲಿ; ಮಾನವರಲ್ಲಿ ‘ಕೋವಿಡ್ -19’ ಎಂಬ ಕೊರೊನಾ ವೈರಸ್ ಪತ್ತೆಯಾಗಿತ್ತು. ಅದರ ನಂತರ, ವೈರಸ್ ಕ್ರಮೇಣ ಚೀನಾದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಹರಡಿತು. ಈ ಕಾರಣದಿಂದಾಗಿ, ಕೋವಿಡ್ ವೈರಸ್‌ನಿಂದ ಕೋಟ್ಯಂತರ ಜನರು ಬಾಧಿತರಾದರು. ಅವರಲ್ಲಿ ಅನೇಕರು ಗುಂಪು ಗುಂಪಾಗಿ ಸಾವನ್ನಪ್ಪಿದರು.

ಈ ಕೋವಿಡ್ ಸೋಂಕು ಮನುಕುಲಕ್ಕೆ ದೊಡ್ಡ ವಿನಾಶವನ್ನು ಉಂಟುಮಾಡಿತು. ಏತನ್ಮಧ್ಯೆ, ಅಮೆರಿಕ ಸೇರಿದಂತೆ ವಿವಿಧ ದೇಶಗಳು ಇದು ವುಹಾನ್‌ನಲ್ಲಿರುವ ವೈರಸ್ ಪ್ರಯೋಗಾಲಯದಿಂದ ಹೊರಬಂದಿದೆ ಎಂದು ಆರೋಪಿಸಿತು. ಚೀನಾ ಈ ವೈರಸ್ ಅನ್ನು ಜೈವಿಕ ಅಸ್ತ್ರವಾಗಿ ಬಳಸಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿತ್ತು.

ಈ ಹಿನ್ನಲೆಯಲ್ಲಿ ಚೀನಾ ಮತ್ತು ಚೀನೀ ಕಮ್ಯುನಿಸ್ಟ್ ಪಕ್ಷದ ಬಗ್ಗೆ ಅನನ್ಯ ಮಾಹಿತಿ ಮತ್ತು ಒಳನೋಟಗಳನ್ನು ಒದಗಿಸುವ ಅಂತರರಾಷ್ಟ್ರೀಯ ಪತ್ರಿಕಾ ಸಂಘದ ಸದಸ್ಯರೂ ಆದ, ಚೀನಾ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತೆ ಮತ್ತು ಬರಹಗಾರ ಜೆನ್ನಿಫರ್ ಝೆಂಗ್ ಅವರು, ವುಹಾನ್ ಮೂಲದ ಸಂಶೋಧಕ ಚಾವೊ ಶಾವೊ ಅವರೊಂದಿಗೆ ವಿಶೇಷ ಸಂದರ್ಶನ ನಡೆಸಿದ್ದಾರೆ. ಈ ಸಂದರ್ಶನದ ವೇಳೆ ಚಾವೊ ಶಾವೊ ಅವರು ಹಲವು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

“ಕೊರೊನಾ ವೈರಸ್ ಒಂದು ‘ಜೈವಿಕ ಶಸ್ತ್ರಾಸ್ತ್ರ’ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಇನ್ನೊಬ್ಬ ಸಂಶೋಧಕ ಮತ್ತು ನನ್ನ ಮೇಲಧಿಕಾರಿ ಶಾನ್ ಚಾವೊ, ನನ್ನ ಬಳಿ ನಾಲ್ಕು ಕೊರೊನಾ ವೈರಸ್ ಮಾದರಿಗಳನ್ನು ನೀಡಿ, ಇದರಲ್ಲಿ ಹೆಚ್ಚು ಪರಿಣಾಮಕಾರಿ ಮತ್ತು ಮನುಷ್ಯರಲ್ಲಿ ಹಾಗೂ ಪ್ರಾಣಿಗಳಲ್ಲಿ ಸುಲಭವಾಗಿ ಹರಡುವ ವೈರಸ್ ಯಾವುದು ಎಂಬುದನ್ನು ಕಂಡು ಹಿಡಿಯುವಂತೆ ಹೇಳಿದರು.

2019ರಲ್ಲಿ ವುಹಾನ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಮಿಲಿಟರಿ ಕ್ರೀಡಾಕೂಟದಲ್ಲಿ ನನ್ನ ಸಹೋದ್ಯೋಗಿಗಳು, (ವೈರಸ್ ಸಂಶೋಧಕರು) ಕ್ರೀಡಾಪಟುಗಳು ತಂಗಿದ್ದ ಹೊಟೇಲ್‌ಗೆ ಹೋಗಿದ್ದರು. ಏಕೆ ಎಂದು ಕೇಳಿದಾಗ, ಆಟಗಾರರ ಆರೋಗ್ಯ ತಪಾಸಣೆಗೆ ಹೋಗಿದ್ದೆವು ಎಂದು ಹೇಳಿದರು. ಆಟಗಾರರ ಆರೋಗ್ಯ ಸ್ಥಿತಿಯನ್ನು ತಿಳಿಯಲು ವೈರಾಲಜಿ ಸಂಶೋಧಕರು ಅಗತ್ಯವಿಲ್ಲ. ಸೈನಿಕರಿಗೆ ವೈರಸ್ ಹರಡಲು ಅವರನ್ನು ಅಲ್ಲಿಗೆ ಕಳುಹಿಸಲಾಗಿದೆ ಎಂದು ಶಾನ್ ಚಾವೊ ಹೇಳಿದರು.

ಅದರ ನಂತರ ಏಪ್ರಿಲ್ 2020ರಲ್ಲಿ, ಶಾನ್ ಚಾವೊ, ಶಿಬಿರಗಳಲ್ಲಿ ಬಂಧಿಯಾಗಿರುವ ಉಯಿಘರ್ ಮುಸ್ಲಿಮರ ಆರೋಗ್ಯವನ್ನು ಪರೀಕ್ಷಿಸಲು ಅವರನ್ನು ಕ್ಸಿನ್‌ಜಿಯಾಂಗ್‌ಗೆ ಕಳುಹಿಸಲಾಯಿತು. ವೈರಸ್ ಅನ್ನು ಮನುಷ್ಯರಿಗೆ ಹರಡಿಸಿ, ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಗಮನಿಸಲು ಅವರನ್ನು ಅಲ್ಲಿಗೆ ಕಳುಹಿಸಲಾಯಿತು ಎಂದು ಅವರೇ ಹೇಳಿದ್ದಾರೆ” ಎಂದು ಅವರು ಹೇಳಿದ್ದಾರೆ.

ವುಹಾನ್ ಸಂಶೋಧಕ ಚಾವೋ ಶಾವೊ ನೀಡಿದ ಈ ಮಾಹಿತಿಯ ಪ್ರಕಾರ, ‘ಕೋವಿಡ್-19’ ವೈರಸ್ ಅನ್ನು ‘ಜೈವಿಕ ಶಸ್ತ್ರಾಸ್ತ್ರ’ವನ್ನಾಗಿ ರಚಿಸಿ, ಪ್ರಪಂಚದಾದ್ಯಂತ ಜೈವಿಕ ಭಯೋತ್ಪಾದನೆಗೆ ಬಳಸಲು, ಚೀನಾ ಪ್ರಯತ್ನಿಸಿದೆ ಎಂದು ಹಲವರ ಅಭಿಪ್ರಾಯವಾಗಿದೆ.

ಸಿನಿಮಾ

ಆದಿ ಪುರುಷ ಚಿತ್ರದ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಕೇಂದ್ರ ಸೆನ್ಸಾರ್ ಮಂಡಳಿ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್‌ ನ್ಯಾಯಮೂರ್ತಿಗಳು ಆದೇಶ ನೀಡಿದ್ದಾರೆ.

ರಾಮಾಯಣವನ್ನು ಆಧರಿಸಿದ ‘ಆದಿ ಪುರುಷ’ ಚಿತ್ರ ಜೂನ್ 16 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ. ಓಂರಾವತ್ ನಿರ್ದೇಶನದಲ್ಲಿ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೃತಿ ಸನೋನ್, ಸೈಪ್ ಅಲಿ ಖಾನ್, ಸನ್ನಿ ಸಿಂಗ್ ಮತ್ತು ಇತರರು ನಟಿಸಿದ್ದಾರೆ. ಬಿಡುಗಡೆಗೂ ಮುನ್ನ ಚಿತ್ರ ಸಾಕಷ್ಟು ಟೀಕೆ ಮತ್ತು ವಿವಾದಗಳನ್ನು ಎದುರಿಸಿತ್ತು. ಅದರಲ್ಲೂ ಚಿತ್ರದ ಗ್ರಾಫಿಕ್ಸ್ ತುಂಬಾ ಕಳಪೆಯಾಗಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ಆದರೂ ಚಿತ್ರ ಬಿಡುಗಡೆಯಾದ ನಂತರ ಬಾಕ್ಸ್ ಆಫೀಸ್ ಹಿಟ್ ಆಗಿತ್ತು.

ಈ ಹಿನ್ನಲೆಯಲ್ಲಿ ‘ಆದಿ ಪುರುಷ’ ಚಿತ್ರದಲ್ಲಿನ ಸಂಭಾಷಣೆ ಮತ್ತು ದೃಶ್ಯಗಳ ವಿರುದ್ಧ ಅಲಹಾಬಾದ್ ಹೈಕೋರ್ಟ್‌ನಲ್ಲಿ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿಗಳು ನ್ಯಾಯಮೂರ್ತಿಗಳಾದ ರಾಜೇಶ್ ಸಿಂಗ್ ಚೌಹಾಣ್ ಮತ್ತು ಶ್ರೀಪ್ರಕಾಶ್ ಸಿಂಗ್ ಅವರನ್ನೊಳಗೊಂಡ ಪೀಠದ ಮುಂದೆ ವಿಚಾರಣೆಗೆ ಬಂದವು. ಆಗ ಚಿತ್ರದ ದೃಶ್ಯಗಳ ಕುರಿತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಕೇಂದ್ರ ಸೆನ್ಸಾರ್ ಮಂಡಳಿ ವಿವರಣೆ ನೀಡಬೇಕು ಎಂದು ನ್ಯಾಯಮೂರ್ತಿಗಳು ಆದೇಶಿಸಿದರು. ಮುಂದುವರೆದು, ಚಿತ್ರದ ನಿರ್ಮಾಪಕರ ಮನಸ್ಥಿತಿಯನ್ನು ಪ್ರಶ್ನಿಸಿದ ನ್ಯಾಯಮೂರ್ತಿಗಳು, “ಅವರು ಕುರಾನ್, ಬೈಬಲ್ ಇತ್ಯಾದಿಗಳ ವಾಕ್ಯಗಳನ್ನು ಮುಟ್ಟಬಾರದು ಎಂಬ ಗಾಬರಿಯಲ್ಲಿ ಇರುತ್ತಾರೆ” ಎಂದರು.

ಅಲಹಾಬಾದ್ ಹೈಕೋರ್ಟ್‌

“ಇತ್ತೀಚೆಗೆ ಬಿಡುಗಡೆಯಾಗುವ ಕೆಲವು ಚಲನಚಿತ್ರಗಳಲ್ಲಿ ಹಿಂದೂ ದೇವರುಗಳು ಮತ್ತು ಸ್ವಾಮೀಜಿಗಳನ್ನು ಅಪಹಾಸ್ಯ ಮಾಡುವುದು ಸಾಮಾನ್ಯವಾಗಿದೆ. ಆದಿ ಪುರುಷ ಚಿತ್ರಕ್ಕೆ ಕೇಂದ್ರ ಸೆನ್ಸಾರ್ ಮಂಡಳಿ ಅನುಮತಿ ನೀಡಿದ್ದು ದೊಡ್ಡ ತಪ್ಪು; ಚಿತ್ರದಲ್ಲಿ ರಾಮಾಯಣದ ಧಾರ್ಮಿಕ ಪಾತ್ರಗಳನ್ನು ಚಿತ್ರಿಸಿರುವ ರೀತಿ ಹಲವರ ಭಾವನೆಗಳಿಗೆ ಧಕ್ಕೆ ತಂದಿದೆ. ಹಲವು ವಿವಾದಗಳಿರುವ ಚಿತ್ರದಲ್ಲಿ ‘ನಾವು ಹಕ್ಕು ನಿರಾಕರಣೆ ಪೋಸ್ಟ್ ಮಾಡಿದ್ದೇವೆ’ ಎಂದು ಚಿತ್ರತಂಡ ವಾದಿಸುತ್ತಿರುವುದು ವಿಚಿತ್ರವಾಗಿದೆ.

ಕುರಾನ್, ಬೈಬಲ್ ಬಗ್ಗೆ ಸಾಕ್ಷ್ಯಚಿತ್ರವನ್ನು ನಿರ್ಮಿಸಿ ನೋಡಿ; ಏನಾಗುತ್ತೆ ಎಂದು ನಂತರ ತಿಳಿಯುತ್ತೆ” ಎಂದು ತಿಳಿಸಿದ ನ್ಯಾಯಾಧೀಶರು, ವಿಚಾರಣೆ ವೇಳೆ ಗೈರಾಗಿದ್ದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ನೋಟಿಸ್‌ ಕಳುಹಿಸುವಂತೆ ಆದೇಶಿಸಿ ಮುಂದಿನ ವಿಚಾರಣೆಯನ್ನು ಮುಂದಿನ ಬುಧವಾರಕ್ಕೆ ಮುಂದೂಡಿದರು.