ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಆಮ್ ಆದ್ಮಿ ಪಾರ್ಟಿ Archives » Dynamic Leader
January 22, 2025
Home Posts tagged ಆಮ್ ಆದ್ಮಿ ಪಾರ್ಟಿ
ರಾಜಕೀಯ

ದೆಹಲಿಯ ದೇವಸ್ಥಾನಗಳು ಮತ್ತು ಗುರುದ್ವಾರಗಳಲ್ಲಿ ಕೆಲಸ ಮಾಡುವ ಅರ್ಚಕರಿಗೆ ಮಾಸಿಕ 18 ಸಾವಿರ ರೂಗಳನ್ನು ಸ್ಟೈಫಂಡ್ ನೀಡಲಿಕ್ಕಾಗಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಆಮ್ ಆದ್ಮಿ ಪಕ್ಷದ ಪರವಾಗಿ ಅರ್ಚಕರ ವಿವರಗಳನ್ನು ನೋಂದಾಯಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ದೆಹಲಿಯ ISBT ಪ್ರದೇಶದಲ್ಲಿರುವ ಹನುಮಾನ್ ದೇವಸ್ಥಾನಕ್ಕೆ ತೆರಳಿದ ಕೇಜ್ರಿವಾಲ್, ಅಲ್ಲಿನ ಅರ್ಚಕರ ವಿವರ ಪಡೆದು ದಾಖಲಿಸುವ ಪ್ರಕ್ರಿಯೆ ಆರಂಭಿಸಿದರು.

ಅರ್ಚಕರಿಗೆ ಮಾಸಿಕ ಸ್ಟೈಫಂಡ್ ನೀಡುವುದಾಗಿ ಅವರು ಸೋಮವಾರ ಘೋಷಿಸಿದ ಬೆನ್ನಲ್ಲೆ, ಆಮ್ ಆದ್ಮಿ ಪಕ್ಷವು ಅರ್ಚಕರ ವಿವರಗಳನ್ನು ನೋಂದಾಯಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಆಮ್ ಆದ್ಮಿ ಪಕ್ಷದ ಪರವಾಗಿ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈಗಾಗಲೇ ಮಹಿಳೆಯರಿಗೆ ಸಹಾಯಧನವನ್ನು ಘೋಷಿಸಿ ಸಹಾಯಧನ ಪಡೆಯಲು ಅರ್ಹರಾದ ಮಹಿಳೆಯರ ಹೆಸರನ್ನು ನೋಂದಾಯಿಸುವ ಕೆಲಸವನ್ನೂ ನಡೆಸುತ್ತಿದ್ದಾರೆ.

ಫೆಬ್ರವರಿಯಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆಯುವ ನಿರೀಕ್ಷೆಯಿರುವುದರಿಂದ ಆಮ್ ಆದ್ಮಿ ಪಕ್ಷದ ಪರವಾಗಿ ವಿವಿಧ ಚುನಾವಣಾ ಭರವಸೆಗಳನ್ನು ನೀಡಲಾಗುತ್ತಿದೆ. ಮಹಿಳಾ ಸ್ಟೈಫಂಡ್ ಬಗ್ಗೆ ಮೊದಲು ಭರವಸೆ ನೀಡಿದ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಗೆದ್ದು ಮತ್ತೆ ಸರ್ಕಾರ ರಚಿಸಿದರೆ ದೇವಾಲಯಗಳು ಮತ್ತು ಸಿಖ್ ಧಾರ್ಮಿಕ ಸ್ಥಳಗಳಲ್ಲಿ ಕೆಲಸ ಮಾಡುವ ಅರ್ಚಕರಿಗೆ ಸ್ಟೈಫಂಡ್ ನೀಡುವುದಾಗಿ ಮತ್ತೊಂದು ಭರವಸೆ ನೀಡಿದ್ದಾರೆ. ಆಮ್ ಆದ್ಮಿ ಪಕ್ಷದ ಈ ನಡೆ ವಿವಾದ ಸೃಷ್ಟಿಸುವ ನಿರೀಕ್ಷೆ ಇದೆ.

ಈಗಾಗಲೇ ಮಹಿಳಾ ಸಹಾಯಧನಕ್ಕೆ ಸಂಬಂಧಿಸಿದಂತೆ ಮಹಿಳೆಯರ ಹೆಸರು ಮತ್ತು ಇತರ ವಿವರಗಳ ನೋಂದಣಿ ಮಾಡುತ್ತಿರುವುದರ ವಿರುದ್ಧ ಕಾಂಗ್ರೆಸ್ ಪಕ್ಷ ದೂರು ದಾಖಲಿಸಿದೆ. ರಾಜ್ಯ ಸರ್ಕಾರ ಮಾತ್ರ ಫಲಾನುಭವಿಗಳನ್ನು ನೋಂದಾಯಿಸಲು ಸಾಧ್ಯ, ರಾಜಕೀಯ ಪಕ್ಷವು ಫಲಾನುಭವಿಗಳ ವಿವರಗಳನ್ನು ಹೇಗೆ ಪಡೆಯುತ್ತದೆ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಸಂಸದ ಸಂದೀಪ್ ದೀಕ್ಷಿತ್ ದೂರಿದ್ದಾರೆ. ಆಮ್ ಆದ್ಮಿ ಪಕ್ಷವು ವಂಚನೆಯಲ್ಲಿ ತೊಡಗಿದೆ ಎಂದು ಭಾರತೀಯ ಜನತಾ ಪಕ್ಷವು ಈ ಕ್ರಮವನ್ನು ಟೀಕಿಸಿದೆ.

ಸಂದೀಪ್ ದೀಕ್ಷಿತ್ ಮತ್ತು ಅವರಂತೆಯೇ ಈ ನಡೆಯನ್ನು ಟೀಕಿಸುತ್ತಿರುವ ಕಾಂಗ್ರೆಸ್‌ನ ಅಜಯ್ ಮಕೆನ್ ಅವರು ಭಾರತೀಯ ಜನತಾ ಪಕ್ಷದ ಕೈಗೊಂಬೆಗಳಾಗಿ ವರ್ತಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಈ ಇಬ್ಬರ ವಿರುದ್ಧ ಕಾಂಗ್ರೆಸ್ ನಾಯಕತ್ವ ಕ್ರಮ ಕೈಗೊಳ್ಳದಿದ್ದಲ್ಲಿ ಕಾಂಗ್ರೆಸ್ ಪಕ್ಷವನ್ನು “ಇಂಡಿಯಾ” ಮೈತ್ರಿಕೂಟದಿಂದ ತೆಗೆದುಹಾಕುವಂತೆ ಆಮ್ ಆದ್ಮಿ ಪಕ್ಷ ಒತ್ತಾಯಿಸಲಿದೆ ಎಂದು ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್ ಮತ್ತು ದೆಹಲಿ ಮುಖ್ಯಮಂತ್ರಿ ಅತಿಶಿ ಎಚ್ಚರಿಕೆ ನೀಡಿದ್ದಾರೆ.

ಆಮ್ ಆದ್ಮಿ ಪಕ್ಷವು ಸಹಾಯ ಯೋಜನೆಗಳಿಗೆ ನೋಂದಾಯಿಸಲು ಫಲಾನುಭವಿಗಳ ವಿವರಗಳನ್ನು ಪಡೆಯುತ್ತಿದೆ ಮತ್ತು ಅವರನ್ನು ಮತದಾರರ ಪಟ್ಟಿಗೆ ಸೇರಿಸಲು ಅರ್ಜಿ ಸಲ್ಲಿಸುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಮತದಾರರಲ್ಲಿ ಆಮ್ ಆದ್ಮಿ ಪಕ್ಷದ ಬೆಂಬಲಿಗರನ್ನು ಗುರುತಿಸಿ ಅವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಪ್ರತ್ಯಾರೋಪ ಮಾಡಿದೆ.

ಇಂತಹ ವಿವಾದಾತ್ಮಕ ವಾತಾವರಣದಲ್ಲಿ ದೇವಾಲಯಗಳು ಮತ್ತು ಸಿಖ್ ಗುರುದ್ವಾರಗಳಲ್ಲಿ ಕೆಲಸ ಮಾಡುವ ಅರ್ಚಕರಿಗೆ ಸ್ಟೈಫಂಡ್ ನೀಡುವುದಾಗಿ ಆಮ್ ಆದ್ಮಿ ಪಕ್ಷ ಚುನಾವಣಾ ಭರವಸೆ ನೀಡಿದೆ. ಗುರುದ್ವಾರಗಳಲ್ಲಿ ಪೂಜಾ ಕಾರ್ಯಗಳನ್ನು ಮಾಡುವವರನ್ನು ಗ್ರಂಥಿ ಎಂದು ಕರೆಯಲಾಗುತ್ತದೆ. ಹಾಗಾಗಿ ಆಮ್ ಆದ್ಮಿ ಪಕ್ಷ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬಂದರೆ “ಪೂಜಾರಿ-ಗ್ರಂಥಿ ಸಮ್ಮಾನ್ ಯೋಜನೆ” ಜಾರಿಗೊಳಿಸಲಾಗುವುದು ಎಂದು ಆಮ್ ಆದ್ಮಿ ಪಕ್ಷ ಚುನಾವಣಾ ಭರವಸೆ ನೀಡಿದೆ.

10 ವರ್ಷಗಳಿಂದ ಮಸೀದಿಗಳಲ್ಲಿ ಕೆಲಸ ಮಾಡುತ್ತಿರುವ ಮೌಲಾನಾಗಳಿಗೆ ಇದೇ ರೀತಿಯ ಸಹಾಯ ಯೋಜನೆ ನೀಡಲಾಗುತ್ತಿದೆ. ಆದರೆ ಅರವಿಂದ್ ಕೇಜ್ರಿವಾಲ್ ಅವರು ದೇವಾಲಯಗಳು ಮತ್ತು ಸಿಖ್ ಗುರುದ್ವಾರಗಳಲ್ಲಿ ಕೆಲಸ ಮಾಡುವವರನ್ನು ಮರೆತಿದ್ದಾರೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಆರೋಪಿಸಿದೆ. ಇಂತಹ ವಾಗ್ಯುದ್ಧಗಳಿಂದ ಆಮ್ ಆದ್ಮಿ ಪಕ್ಷದ ಚುನಾವಣಾ ಭರವಸೆಗಳು ವಿವಾದಕ್ಕೀಡಾಗುತ್ತಿವೆ.

ರಾಜಕೀಯ

ನವದೆಹಲಿ,
ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರ ಆದೇಶದ ಮೇರೆಗೆ ಮುಖ್ಯಮಂತ್ರಿ ಅತಿಶಿ ಅವರ ಅಧಿಕೃತ ನಿವಾಸ 6, ಫ್ಲಾಗ್‌ಸ್ಟಾಫ್ ರಸ್ತೆಯಿಂದ ಲಗೇಜ್ ಮತ್ತು ಇತರ ವಸ್ತುಗಳನ್ನು ಹೊರಹಾಕಲಾಗಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು, “ಈ ಕ್ರಮವು ಮುಖ್ಯಮಂತ್ರಿಯವರ ಅಧಿಕೃತ ನಿವಾಸವನ್ನು ವಶಪಡಿಸಿಕೊಳ್ಳುವ ಬಿಜೆಪಿಯ ಯೋಜನೆಯ ಒಂದು ಭಾಗವಾಗಿದೆ” ಎಂದು ಹೇಳಿಕೊಂಡಿದೆ.

ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಕೇಸರಿ ಪಕ್ಷದ ನಾಯಕನಿಗೆ ಹಂಚಲು ಬಯಸಿದ್ದರಿಂದ ದೆಹಲಿಯ ಸಿವಿಲ್ ಲೈನ್ಸ್ 6, ಫ್ಲಾಗ್‌ಸ್ಟಾಫ್ ರಸ್ತೆಯಲ್ಲಿರುವ ದೆಹಲಿ ಮುಖ್ಯಮಂತ್ರಿ ನಿವಾಸವನ್ನು ಬಿಜೆಪಿಯ ಆಜ್ಞೆಯ ಮೇರೆಗೆ ಬಲವಂತವಾಗಿ ಖಾಲಿ ಮಾಡಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿಯ ಕಛೇರಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

“ಬಿಜೆಪಿ ದೆಹಲಿಯಲ್ಲಿ 27 ವರ್ಷಗಳಿಂದ ಅಧಿಕಾರದಿಂದ ಹೊರಗುಳಿದಿದೆ. ಸಾರ್ವಜನಿಕರಿಂದ ಚುನಾವಣಾ ಬೆಂಬಲವನ್ನು ಪಡೆಯಲು ಸಾಧ್ಯವಾಗದ ಕಾರಣ ಅವರು ಸಿಎಂ ನಿವಾಸದ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಎಎಪಿ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.

ಕೆಲವು ಪ್ರಮುಖ ಬಿಜೆಪಿ ನಾಯಕರಿಗೆ ಬಂಗಲೆ ಮಂಜೂರು ಮಾಡುವ ಯೋಜನೆ ಇತ್ತು ಎಂದು ಎಎಪಿ ಹೇಳಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸದರಿ ಮನೆಯನ್ನು ಖಾಲಿ ಮಾಡಿದ ಕೆಲವು ದಿನಗಳ ನಂತರ ಆ ಮನೆಗೆ ಮುಖ್ಯಮಂತ್ರಿ ಅತಿಶಿ ಸ್ಥಳಾಂತರಗೊಂಡಿದ್ದರು ಎಂಬುದು ಗಮನಾರ್ಹ.

ದೇಶ

ನವದೆಹಲಿ: ಮದ್ಯ ನೀತಿ ಪ್ರಕರಣದಲ್ಲಿ ಒಂದೂವರೆ ವರ್ಷದ ಬಳಿಕ ಮನೀಶ್ ಸಿಸೋಡಿಯಾಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ದೆಹಲಿ ಆಮ್ ಆದ್ಮಿ ಸರ್ಕಾರದ ಹೊಸ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಆಮ್ ಆದ್ಮಿ ಪಕ್ಷದ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿತ್ತು. ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಅವರನ್ನು ಫೆಬ್ರವರಿ 2023ರಲ್ಲಿ ಜಾರಿ ಇಲಾಖೆ ಬಂಧಿಸಿ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು.

ಅವರ ವಿರುದ್ಧ ದೆಹಲಿ ರೋಸ್ ಅವೆನ್ಯೂ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದೆ. ಅಲ್ಲಿ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ ನಂತರ, ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಮೇಲ್ಮನವಿಯನ್ನು ಕೂಡ ಮೇ 21 ರಂದು ವಜಾಗೊಳಿಸಲಾಯಿತು. ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಧೀಶರಾದ ಗವಾಯಿ ಮತ್ತು ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯ ಪೀಠವು ದಿನಾಂಕವನ್ನು ಸೂಚಿಸದೆ ಕಳೆದ 6 ರಂದು ಮುಂದೂಡಿದ್ದರು.

ಈ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾಗೆ ಇಂದು (ಆಗಸ್ಟ್ 09) ಜಾಮೀನು ಮಂಜೂರಾಗಿದೆ. ರೂ.10 ಲಕ್ಷ ಪಾವತಿಸುವುದರೊಂದಿಗೆ, ಪಾಸ್‌ಪೋರ್ಟ್ ಒಪ್ಪಿಸುವಂತೆಯೂ ಆದೇಶಿಸಲಾಗಿದೆ.

ದೇಶ

ನವದೆಹಲಿ: “ಆಮ್ ಆದ್ಮಿ ಪಕ್ಷ ನಮಗೆ ಮುಖ್ಯವಲ್ಲ; ರಾಷ್ಟ್ರ ಮುಖ್ಯ” ಎಂದು ತಿಹಾರ್ ಜೈಲಿನಲ್ಲಿ ಶರಣಾದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಮಾತನಾಡುತ್ತಾ ಇದನ್ನು ಹೇಳಿದರು. ಇದಾದ ಬಳಿಕ ತಿಹಾರ್ ಜೈಲಿಗೆ ಹೋಗಿ ಶರಣಾದರು.

ದೆಹಲಿ ಮದ್ಯ ನೀತಿ ಉಲ್ಲಂಘನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಮುಖ್ಯಮಂತ್ರಿ ಅರವಿಂದ್  ಕೇಜ್ರಿವಾಲ್ ಅವರಿಗೆ ನೀಡಲಾಗಿದ್ದ 21 ದಿನಗಳ ಮಧ್ಯಂತರ ಜಾಮೀನು ಇಂದು (ಜೂನ್ 02) ಮುಕ್ತಾಯಗೊಂಡಿದೆ. ಪರಿಣಾಮವಾಗಿ ಕೇಜ್ರಿವಾಲ್ ಅವರು ತಿಹಾರ್ ಜೈಲಿನಲ್ಲಿ ಶರಣಾಗಲು ಹೊರಟರು. ಗಾಂಧಿ ಸ್ಮಾರಕಕ್ಕೆ ತೆರಳಿ ನಮನ ಸಲ್ಲಿಸಿದ ಬಳಿಕ ಪತ್ನಿ ಸಮೇತ ಕನ್ನಾಟ್ ಹನುಮಾನ್ ದೇವಸ್ಥಾನದಲ್ಲಿ ಸ್ವಾಮಿ ದರ್ಶನ ಪಡೆದರು. ನಂತರ ಅವರು ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಪಕ್ಷದ ಪದಾಧಿಕಾರಿಗಳನ್ನು ಭೇಟಿಯಾದರು.

ತ್ಯಾಗ
ಆಗ ಮಾತನಾಡಿದ ಕೇಜ್ರಿವಾಲ್,  “ನನ್ನ ವಿರುದ್ಧ ಯಾವುದೇ ಅಪರಾಧದ ಸಾಕ್ಷ್ಯಗಳಿಲ್ಲ. ಚುನಾವಣಾ ಪ್ರಚಾರಕ್ಕೆ ಅನುಕೂಲವಾಗುವಂತೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್‌ಗೆ ನಾನು ಕೃತಜ್ಞನಾಗಿದ್ದೇನೆ. ಆಮ್ ಆದ್ಮಿ ಪಕ್ಷ ನಮಗೆ ಮುಖ್ಯವಲ್ಲ. ರಾಷ್ಟ್ರ ಮುಖ್ಯ. 21 ದಿನಗಳಲ್ಲಿ ಒಂದು ನಿಮಿಷವನ್ನೂ ವ್ಯರ್ಥಮಾಡಲಿಲ್ಲ. ಸರ್ವಾಧಿಕಾರದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಮತ್ತೆ ಜೈಲಿಗೆ ಹೋಗುತ್ತಿದ್ದೇನೆ. ಸರ್ವಾಧಿಕಾರದ ವಿರುದ್ಧ ಹೋರಾಡುತ್ತೇನೆ. ನನ್ನ ಪ್ರತಿ ಹನಿ ರಕ್ತವನ್ನೂ ದೇಶಕ್ಕಾಗಿ ತ್ಯಾಗ ಮಾಡುತ್ತೇನೆ. ಪ್ರಧಾನಿ ಮೋದಿ ನನ್ನನ್ನು (ಕೇಜ್ರಿವಾಲ್) ನುರಿತ ಕಳ್ಳ ಎಂದು ಕರೆಯುತ್ತಾರೆ.

ಸಮೀಕ್ಷೆಗಳು
ಎಲ್ಲಾ ಸಮೀಕ್ಷೆಗಳನ್ನು ಸುಳ್ಳಾಗಿಸಿ ಇಂಡಿಯಾ ಮೈತ್ರಿ ಪಕ್ಷಗಳು ಗೆಲ್ಲುತ್ತವೆ. ಎಲ್ಲಾ ಸಮೀಕ್ಷೆಗಳು ತಪ್ಪಾಗಿವೆ. ನನ್ನ ವಿರುದ್ಧದ ಆರೋಪಗಳಿಗೆ ಜಾರಿ ಇಲಾಖೆ ಕನಿಷ್ಠ ಒಂದೇ ಒಂದು ಸಾಕ್ಷ್ಯವನ್ನಾದರೂ ನೀಡಲು ಸಾದ್ಯವೇ? ನನ್ನ ಮನೆಯಲ್ಲಿ ಶೋಧ ನಡೆಸಿದಾಗ ಜಾರಿ ಇಲಾಖೆ ಏನನ್ನೂ ವಶಪಡಿಸಿಕೊಂಡಿಲ್ಲ. ದಬ್ಬಾಳಿಕೆಯ ಸರ್ಕಾರದ ವಿರುದ್ಧ ನೀವು ಧ್ವನಿ ಎತ್ತಬೇಕು. ಮತ ಎಣಿಕೆ ಸಂದರ್ಭದಲ್ಲಿ ಕೊನೆಯವರೆಗೂ ಇದ್ದು ನಿಗಾ ಇಡಬೇಕು.” ಎಂದು ಹೇಳಿದರು.

ಇದಾದ ಬಳಿಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 4.50ರ ಹೊತ್ತಿಗೆ ತಿಹಾರ್ ಜೈಲಿಗೆ ಹೋಗಿ ಶರಣಾದರು.

ರಾಜಕೀಯ

ಮೋದಿ 3ನೇ ಬಾರಿ ಪ್ರಧಾನಿಯಾಗುವುದಿಲ್ಲ, ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಿ ಎಂದು ಎಎಪಿ ಶಾಸಕ ಸೋಮನಾಥ್ ಭಾರ್ತಿ ಹೇಳಿದ್ದಾರೆ.

ನವದೆಹಲಿ: ಲೋಕಸಭೆ ಚುನಾವಣೆಯನ್ನು ದೇಶಾದ್ಯಂತ 7 ಹಂತಗಳಲ್ಲಿ ನಡೆಸಲಾಗಿದೆ. 4 ರಂದು ಮತ ಎಣಿಕೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಲೋಕಸಭೆ ಚುನಾವಣೆಯಲ್ಲಿ ಬಿ.ಜೆ.ಪಿ. ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಗೆಲ್ಲುತ್ತದೆ ಎಂದು ಚುನಾವಣೋತ್ತರ ಬಿಡುಗಡೆಯಾದ ಸಮೀಕ್ಷೆಯ ಫಲಿತಾಂಶಗಳು ಸೂಚಿಸುತ್ತದೆ.

ಎನ್ ಡಿಎ ಮೈತ್ರಿಕೂಟ 350ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದೂ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ, ಎಎಪಿ ಶಾಸಕ ಸೋಮನಾಥ್ ಭಾರ್ತಿ ಹೇಳುವಂತೆ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಜೂನ್ 4ರ ಮತ ಎಣಿಕೆ ನಂತರ ತಪ್ಪು ಎಂದು ಸಾಬೀತಾಗಲಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ 3ನೇ ಬಾರಿಗೆ ಪ್ರಧಾನಿಯಾದರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಭಾವುಕರಾಗಿ ಹೇಳಿದ್ದಾರೆ. ಸೋಮನಾಥ್ ಭಾರ್ತಿ ಅವರು ನವದೆಹಲಿ ಲೋಕಸಭಾ ಕ್ಷೇತ್ರಕ್ಕೆ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರ ವಿರುದ್ಧ ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಸ್ಪರ್ಧಿಸಿದ್ದಾರೆ. ಬಾನ್ಸುರಿಗೆ ಇದು ಮೊದಲ ಚುನಾವಣೆ.

2019ರಲ್ಲಿ ಬಿಜೆಪಿ ಎಲ್ಲಾ 7 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಈ ಬಾರೀ ಕನಿಷ್ಠ 6 ಕ್ಷೇತ್ರಗಳನ್ನಾದರೂ ಗೆಲ್ಲಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳುತ್ತಿವೆ. ಆದರೆ, ಸೋಮನಾಥ್ ಭಾರ್ತಿ ಅವರು ಪ್ರಕಟಿಸಿರುವ ಎಕ್ಸ್ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ, ಆಮ್ ಆದ್ಮಿ ಪಕ್ಷವು 4 ಕ್ಷೇತ್ರಗಳಲ್ಲಿ ಮತ್ತು ಕಾಂಗ್ರೆಸ್ ಪಕ್ಷವು 3 ಕ್ಷೇತ್ರಗಳಲ್ಲಿ ಈ ಬಾರಿ ಗೆಲ್ಲುತ್ತದೆ ಎಂದು ಹೇಳಿದ್ದಾರೆ.

ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಿ. ಮೋದಿ 3ನೇ ಅವಧಿಗೆ ಪ್ರಧಾನಿಯಾಗುವುದಿಲ್ಲ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ವಿರುದ್ಧ ಮತ ಹಾಕಿದ್ದಾರೆ ಎಂದು ಹೇಳಿದ್ದಾರೆ.

ರಾಜಕೀಯ

ನವದೆಹಲಿ: “ಬಿಜೆಪಿ ಗೆದ್ದರೆ ಮಮತಾ ಬ್ಯಾನರ್ಜಿ, ಸ್ಟಾಲಿನ್, ಉದ್ಧವ್ ಠಾಕ್ರೆ, ಪಿಣರಾಯಿ ವಿಜಯನ್ ಸೇರಿದಂತೆ ಎಲ್ಲ ವಿಪಕ್ಷ ನಾಯಕರೂ ಜೈಲು ಪಾಲಾಗಲಿದ್ದಾರೆ” ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಆರೋಪಿಸಿದ್ದಾರೆ. ಮದ್ಯ ನೀತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ, ಜೈಲಿನಿಂದ ಬಿಡುಗಡೆಗೊಂಡ ಕೇಜ್ರಿವಾಲ್ ಇಂದು (ಮೇ 11) ದೆಹಲಿಯ ಕನ್ನಾಟ್ ಪ್ರದೇಶದ ಹನುಮಾನ್ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದರು.

ಇದಾದ ಬಳಿಕ ಸುದ್ದಿಗಾರರನ್ನು ಭೇಟಿ ಮಾಡಿದ ಕೇಜ್ರಿವಾಲ್, “ನಾನು ನೇರವಾಗಿ ಸೆರೆಮನೆಯಿಂದ ನಿಮ್ಮ ಬಳಿಗೆ ಬಂದಿದ್ದೇನೆ. 50 ದಿನಗಳ ನಂತರ ನಿಮ್ಮೊಂದಿಗೆ ಇರುವುದು ಸಂತೋಷವಾಗಿದೆ. ಸ್ವಲ್ಪ ಸಮಯದ ಹಿಂದೆ ನಾನು, ನನ್ನ ಪತ್ನಿ ಮತ್ತು ಪಂಜಾಬ್ ಮುಖ್ಯಮಂತ್ರಿಯೊಂದಿಗೆ ಹನುಮಾನ್ ದೇವಸ್ಥಾನಕ್ಕೆ ಹೋಗಿದ್ದೆ. ಪಕ್ಷಕ್ಕೆ ಮತ್ತು ನಮಗೆ ಹನುಮಂತನ ಆಶೀರ್ವಾದವಿದೆ. ಅವರ ಕೃಪೆಯಿಂದ ನಾನು ನಿಮ್ಮ ಮುಂದೆ ಇದ್ದೇನೆ.

ಆಮ್ ಆದ್ಮಿ ಪಕ್ಷ ಎರಡು ರಾಜ್ಯಗಳಲ್ಲಿ ಆಡಳಿತ ನಡೆಸಬಲ್ಲ ಚಿಕ್ಕ ಪಕ್ಷವಾಗಿದೆ. ಆದರೆ ಪ್ರಧಾನಿಯವರು ನಮ್ಮ ಪಕ್ಷವನ್ನು ನಾಶಮಾಡುವ ಯಾವ ಅವಕಾಶವನ್ನೂ ಕಳೆದುಕೊಂಡಿಲ್ಲ. ನಮ್ಮ ನಾಲ್ವರು ನಾಯಕರನ್ನು ಸತತವಾಗಿ ಜೈಲಿಗೆ ಕಳುಹಿಸಿದ್ದಾರೆ. ದೊಡ್ಡ ಪಕ್ಷದ ನಾಲ್ವರು ಹಿರಿಯ ನಾಯಕರು ಜೈಲಿಗೆ ಹೋದರೆ ಆ ಪಕ್ಷವು ನಾಶವಾಗಿಬಿಡುತ್ತದೆ. ಪ್ರಧಾನಿ ನಮ್ಮನ್ನು ನಾಶಮಾಡಲು ಬಯಸುತ್ತಿದ್ದಾರೆ. ಆಮ್ ಆದ್ಮಿ ಪಕ್ಷ ದೇಶಕ್ಕೆ ಉತ್ತಮ ಭವಿಷ್ಯ ನೀಡಲಿದೆ ಎಂದು ಅವರು ನಂಬಿದ್ದಾರೆ.

ಕಳೆದ 75 ವರ್ಷಗಳಲ್ಲಿ ಯಾವ ಪಕ್ಷವೂ ನಮ್ಮಂತಹ ಶೋಷಣೆಯನ್ನು ಎದುರಿಸಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾಗಿ ಪ್ರಧಾನಿ ಹೇಳುತ್ತಿದ್ದಾರೆ. ಆದರೆ ಕಳ್ಳರೆಲ್ಲರೂ ಅವರ ಪಕ್ಷದಲ್ಲೇ ಇದ್ದಾರೆ. ಬಿಜೆಪಿ ಗೆದ್ದರೆ ಮಮತಾ ಬ್ಯಾನರ್ಜಿ, ಸ್ಟಾಲಿನ್, ಉದ್ಧವ್ ಠಾಕ್ರೆ, ಪಿಣರಾಯಿ ವಿಜಯನ್ ಸೇರಿದಂತೆ ಎಲ್ಲ ಪ್ರತಿಪಕ್ಷ ನಾಯಕರೂ ಜೈಲು ಪಾಲಾಗಲಿದ್ದಾರೆ.

ಪ್ರಧಾನಿಯವರು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಬಯಸಿದರೆ, ಅವರು ನನ್ನಿಂದ ಪಾಠ ತೆಗೆದುಕೊಳ್ಳಬೇಕು. ದೆಹಲಿಯಲ್ಲಿ ಸರ್ಕಾರವನ್ನು ಸ್ಥಾಪಿಸಿದ ನಂತರ, ನಾನು ನನ್ನ ಮಂತ್ರಿಗಳಲ್ಲಿ ಒಬ್ಬರನ್ನು ಜೈಲಿಗೆ ಕಳುಹಿಸಿದೆ. ಪಂಜಾಬ್‌ನಲ್ಲಿ ಒಬ್ಬ ಸಚಿವರನ್ನು ಜೈಲಿಗೆ ಕಳುಹಿಸಿಕೊಡಲಾಯಿತು.

ಇದು ಭ್ರಷ್ಟಾಚಾರದ ವಿರುದ್ಧದ ಹೋರಾಟವಲ್ಲ; ನನ್ನನ್ನು ಬಂಧಿಸುವ ಮೂಲಕ ಒಂದು ಸಂದೇಶವನ್ನು ರವಾಣಿಸುತ್ತಿದ್ದಾರೆ. ನನ್ನನ್ನು ಬಂಧಿಸುವ ಮೂಲಕ ಯಾವುದೇ ನಾಯಕನನ್ನು ಬಂಧಿಸಬಹುದು ಎನ್ನುತ್ತಾರೆ. ಅವರ ಈ ಹೋರಾಟಕ್ಕೆ ‘ಒಂದು ದೇಶ, ಒಂದು ನಾಯಕ’ ಎಂದು ಹೆಸರಿಸಿದ್ದಾರೆ” ಎಂದು ಅವರು ಹೇಳಿದರು.

ದೇಶ

ಸಂಸತ್ತಿನ ಚುನಾವಣೆಗೆ ಮುನ್ನ ಕೇಜ್ರಿವಾಲ್ ಅವರನ್ನು ಏಕೆ ಬಂಧಿಸಲಾಯಿತು ಮತ್ತು ತನಿಖೆಯ ಪ್ರಾರಂಭ ಮತ್ತು ಬಂಧನದ ನಡುವೆ ಏಕೆ ದೊಡ್ಡ ಅಂತರವಿದೆ ಎಂಬುದನ್ನು ವಿವರಿಸಿ- ಸುಪ್ರೀಂ ಕೋರ್ಟ್

ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಸಮನ್ಸ್ ಅನ್ನು ಪದೇ ಪದೇ ನಿರ್ಲಕ್ಷಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಂಸತ್ ಚುನಾವಣೆ ಘೋಷಣೆಯಾದ ಐದನೇ ದಿನದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತು. ಆಮ್ ಆದ್ಮಿ ಪಕ್ಷವನ್ನು ಚುನಾವಣೆಯಲ್ಲಿ ಸೋಲಿಸಲು ಚುನಾವಣೆಗೆ ಮುನ್ನವೇ ಕೇಜ್ರಿವಾಲ್ ಅವರನ್ನು ಬಂಧಿಸಲಾಯಿತು ಎಂದು ಆಮ್ ಆದ್ಮಿ ಪಕ್ಷದ ಸಚಿವರು ಮತ್ತು ವಿರೋಧ ಪಕ್ಷಗಳು ಹೇಳುತ್ತಿವೆ.

ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ಕೇಜ್ರಿವಾಲ್ ಅವರ ನ್ಯಾಯಾಲಯದ ಕಸ್ಟಡಿಯನ್ನು ಮೇ 7 ರವರೆಗೆ ವಿಸ್ತರಿಸಲಾಗಿದೆ. ಮತ್ತೊಂದೆಡೆ, ಮಧುಮೇಹಿಯಾಗಿರುವ ಕೇಜ್ರಿವಾಲ್‌ಗೆ ಜೈಲಿನಲ್ಲಿ ಹೆಚ್ಚು ಸಕ್ಕರೆ ಅಂಶವಿರುವ ಆಹಾರವನ್ನು ನೀಡಲಾಗುತ್ತಿದ್ದು, ಅವರ ಭೇಟಿಗೆ ಪತ್ನಿಗೂ ಅನುಮತಿ ನಿರಾಕರಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಈ ಹಿನ್ನಲೆಯಲ್ಲಿ, ಸಂಸತ್ ಚುನಾವಣೆಗೂ ಮುನ್ನವೇ ಕೇಜ್ರಿವಾಲ್ ಅವರನ್ನು ಬಂಧಿಸಿದ್ದು ಏಕೆ ಎಂದು ಜಾರಿ ಇಲಾಖೆಯನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಜಾರಿ ಇಲಾಖೆಯ ಬಂಧನದ ವಿರುದ್ಧ ಕೇಜ್ರಿವಾಲ್ ಅವರು ಸಲ್ಲಿಸಿರುವ ಮನವಿ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿ ದೀಪಂಕರ್ ದತ್ತಾ ನೇತೃತ್ವದ ಪೀಠದಲ್ಲಿ ವಿಚಾರಣೆಗೆ ಬಂದಿತು.

ಆಗ ಜಾರಿ ಇಲಾಖೆ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರನ್ನು ಪ್ರಶ್ನಿಸಿದ ಪೀಠ, “ಜೀವನ ಮತ್ತು ಸ್ವಾತಂತ್ರ್ಯ ಅತಿಮುಖ್ಯ. ನೀವು ಅದನ್ನು ಅಲ್ಲಗಳೆಯುವಂತಿಲ್ಲ. ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಸಂಬಂಧಿಸಿದ ಪ್ರಕರಣದಲ್ಲಿ, ತನಿಖಾಧಿಕಾರಿಗಳು ತಮಗೆ ಕೆಲವು ಮಾಹಿತಿಗಳು ಸಿಕ್ಕಿರುವುದಾಗಿ ಹೇಳಿದ್ದರು.

ಆದರೆ ಕೇಜ್ರಿವಾಲ್ ಪ್ರಕರಣದಲ್ಲಿ ಅಂಥದ್ದೇನೂ ತರಲಾಗಿಲ್ಲ. ಈ ಪ್ರಕರಣದಲ್ಲಿ ಇದುವರೆಗೆ ಯಾವುದೇ ಸಂಪರ್ಕ ಕ್ರಮ ಕೈಗೊಂಡಿಲ್ಲ. ಬಹುಶಃ ಅಂತಹ ಕ್ರಮ ಕೈಗೊಂಡಿದ್ದರೆ, ಕೇಜ್ರಿವಾಲ್ ಈ ವಿಷಯದಲ್ಲಿ ಹೇಗೆ ಭಾಗಿಯಾಗಿದ್ದಾರೆ ಎಂಬುದನ್ನು ತಿಳಿಸಿ.

ಅಲ್ಲದೆ, ಸಂಸತ್ತಿನ ಚುನಾವಣೆಗೆ ಮುನ್ನ ಕೇಜ್ರಿವಾಲ್ ಅವರನ್ನು ಏಕೆ ಬಂಧಿಸಲಾಯಿತು ಮತ್ತು ತನಿಖೆಯ ಪ್ರಾರಂಭ ಮತ್ತು ಬಂಧನದ ನಡುವೆ ಏಕೆ ದೊಡ್ಡ ಅಂತರವಿದೆ ಎಂಬುದನ್ನು ವಿವರಿಸಿ” ಎಂದು ಹೇಳಿ ಶುಕ್ರವಾರ ಪ್ರತಿಕ್ರಿಯೆ ನೀಡುವಂತೆ ಜಾರಿ ಇಲಾಖೆಗೆ ಸೂಚಿಸಿದೆ.

ರಾಜಕೀಯ

ನವದೆಹಲಿ: ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಯು 45 ಸಂಶಯಾಸ್ಪದ ಕಂಪನಿಗಳಿಂದ 1,068 ಕೋಟಿ ರೂಪಾಯಿ ದೇಣಿಗೆಯನ್ನು ಪಡೆದಿದ್ದು, ಈ ಬಗ್ಗೆ ಕೇಂದ್ರ ಗುಪ್ತಚರ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.

ನಿನ್ನೆ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತಮಾಡಿದ ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮತ್ತು ಜಾಸ್ಮಿನ್ ಶಾ ಅವರು, “ಬಿಜೆಪಿಗೆ 45 ಸಂಶಯಾಸ್ಪದ ಕಂಪನಿಗಳು ರೂ.1,068 ಕೋಟಿಯವರೆಗೆ ದೇಣಿಗೆ ನೀಡಿದೆ. ಅವು ನಷ್ಟದ ಕಂಪನಿಗಳಾಗಿವೆ. ಅಥವಾ ಅವರು ತೆರಿಗೆಗಳನ್ನು ಪಾವತಿಸದವರು ಅಥವಾ ಲಾಭಕ್ಕಿಂತ ಹೆಚ್ಚಾಗಿ ದೇಣಿಗೆ ನೀಡಿದವರಾಗಿದ್ದಾರೆ.

ಏಳು ವರ್ಷಗಳಲ್ಲಿ 33 ಕಂಪನಿಗಳು ಒಟ್ಟು ಒಂದು ಲಕ್ಷ ಕೋಟಿ ರೂಪಾಯಿಯವರೆಗೆ ನಷ್ಟ ಅನುಭವಿಸಿದ ಕಂಪನಿಗಳಾಗಿರುತ್ತವೆ. ಈ ಕಂಪನಿಗಳು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ 450 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡಿರುತ್ತವೆ. ಈ ಪೈಕಿ 17 ಕಂಪನಿಗಳು ಶೂನ್ಯ ತೆರಿಗೆ ಅಥವಾ ಋಣಾತ್ಮಕ ತೆರಿಗೆ ಪಾವತಿಸಿದ ಕಂಪನಿಗಳಾಗಿವೆ.

ಇದಲ್ಲದೆ, ಈ ಕಂಪನಿಗಳು ತೆರಿಗೆ ವಿನಾಯಿತಿಗಳನ್ನು ಸಹ ಪಡೆದಿರುತ್ತವೆ. ಅಲ್ಲದೆ, ಆರು ಕಂಪನಿಗಳು ಬಿಜೆಪಿಗೆ 600 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡಿವೆ. ಆ ಮೊತ್ತವು ಆ ಕಂಪನಿಗಳ ಲಾಭಕ್ಕಿಂತ ಹೆಚ್ಚಿನ ಮೊತ್ತವಾಗಿರುತ್ತದೆ. ಇನ್ನೊಂದು ಕಂಪನಿ ಅವರ ಲಾಭಕ್ಕಿಂತ 93 ಪಟ್ಟು ಹೆಚ್ಚು ನೀಡಿದೆ. ಮೂರು ಕಂಪನಿಗಳು 28 ಕೋಟಿ ದೇಣಿಗೆ ನೀಡಿ ಶೂನ್ಯ ತೆರಿಗೆ ಪಾವತಿಸಿವೆ. ಉದಾಹರಣೆಗೆ, ನಷ್ಟದ ನಡುವೆಯೂ ಅನೇಕ ಕಂಪನಿಗಳು ಉದಾರವಾಗಿ ಬಿಜೆಪಿಗೆ ದೇಣಿಗೆ ನೀಡಿದವು. ಅದರಲ್ಲಿ ಪ್ರಮುಖವಾದದ್ದು ಭಾರ್ತಿ ಏರ್‌ಟೆಲ್ ಕಂಪೆನಿ.

77,000 ಕೋಟಿ ನಷ್ಟ ಅನುಭವಿಸಿದರೂ ಕಂಪನಿ 200 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಇದಕ್ಕೆ ಪ್ರತಿಯಾಗಿ ರೂ.8,200 ಕೋಟಿ ತೆರಿಗೆ ರಿಯಾಯಿತಿ ಪಡೆದುಕೊಂಡಿದೆ. ಇನ್ನೊಂದು ಕಂಪನಿ DLF. 7 ವರ್ಷಗಳಲ್ಲಿ 130 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಆದರೂ 25 ಕೋಟಿ ರೂಪಾಯಿ ದೇಣಿಗೆ ನೀಡಿ, 20 ಕೋಟಿ ರೂಪಾಯಿ ತೆರಿಗೆ ಲಾಭವನ್ನು ಪಡೆದುಕೊಂಡಿದೆ. ಧರಿವಾಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ 115 ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿ, ಬಿಜೆಪಿಗೆ ಸುಮಾರು 24.96 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದೆ. ಈ ಕಂಪನಿಯ ನಷ್ಟ ರೂ.299 ಕೋಟಿಯಾಗಿದೆ. ಹೀಗಾಗಿ ಅವರು ಶೂನ್ಯ ತೆರಿಗೆ ಪಾವತಿಸಿದ್ದಾರೆ.

ಅದೇ ರೀತಿ ಪಿಆರ್‌ಎಲ್ ಡೆವಲಪರ್ಸ್ 20 ಕೋಟಿ ರೂಪಾಯಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಿ, 10 ಕೋಟಿ ರೂಪಾಯಿ ದೇಣಿಗೆ ನೀಡಿ 4.7 ಕೋಟಿ ರೂಪಾಯಿ ತೆರಿಗೆ ವಿನಾಯಿತಿ ಪಡೆದುಕೊಂಡಿದೆ. ಈ ಕಂಪನಿ 1550 ಕೋಟಿ ನಷ್ಟವನ್ನು ಅನುಭವಿಸಿದ ಕಂಪನಿಯಾಗಿದೆ. ಯುಜಿಯಾ ಫಾರ್ಮಾ ಲಿಮಿಟೆಡ್ ಶರತ್ ಚಂದ್ರ ರೆಡ್ಡಿ ಅವರ ಕಂಪನಿಯಾಗಿದೆ. 7 ವರ್ಷದಲ್ಲಿ 28 ಕೋಟಿ ನಷ್ಟ ಅನುಭವಿಸಿದ್ದರೂ ಚುನಾವಣಾ ಬಾಂಡ್ ನಿಧಿಯಾಗಿ 15 ಕೋಟಿ ನೀಡಿ, ರೂ.7.20 ಕೋಟಿ ತೆರಿಗೆ ವಿನಾಯಿತಿ ಪಡೆದುಕೊಂಡಿದೆ.

7 ವರ್ಷದಲ್ಲಿ ರೂ.86 ಕೋಟಿ ನಷ್ಟವನ್ನು ಉಂಟುಮಾಡಿಕೊಂಡಿದ್ದ ಮೈತ್ರಾ ಎನರ್ಜಿ ಪ್ರೈವೇಟ್ ಲಿಮಿಟೆಡ್ ಕಂಪನಿ, 19 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಖರೀದಿಸಿ, 9.99 ಕೋಟಿ ಪಾವತಿಸುವ ಮೂಲಕ ರೂ.126 ಕೋಟಿ ತೆರಿಗೆ ವಿನಾಯಿತಿ ಪಡೆದುಕೊಂಡಿದೆ.

ಪಿರಮಲ್ ಕ್ಯಾಪಿಟಲ್ ಮತ್ತು ಹೌಸಿಂಗ್ ಫೈನಾನ್ಸ್ ಲಿಮಿಟೆಡ್ 10 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸುವ ಮೂಲಕ 16,376 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದರೂ 10 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ. ಇದಕ್ಕೆ ರೂ.5178.50 ಕೋಟಿ ರೂ. ತೆರಿಗೆ ವಿನಾಯಿತಿ ಸಿಕ್ಕಿದೆ.

ಓರಿಯಂಟಲ್ ಸೌತ್ ದೆಹಲಿ ಹೊಟೇಲ್ ಪ್ರೈವೇಟ್ ಲಿಮಿಟೆಡ್ 5 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ್ದು, 5 ಕೋಟಿ ದೇಣಿಗೆಯನ್ನೂ ನೀಡಿದೆ. ಕಂಪನಿ 49 ಕೋಟಿ ನಷ್ಟವನ್ನು ಅನುಭವಿಸಿದ್ದು, ಶೂನ್ಯ ತೆರಿಗೆ ಪಾವತಿಸಿದೆ. ವಿಲೇಜ್ ಡಿ ನಂದಿ ಪ್ರೈವೇಟ್ ಲಿಮಿಟೆಡ್ ಚುನಾವಣಾ ಬಾಂಡ್‌ಗಳನ್ನು ರೂ.5 ಕೋಟಿಗೆ ಖರೀದಿಸಿದೆ. ಮತ್ತು ರೂ.48 ಕೋಟಿ ನಷ್ಟದ ಹೊರತಾಗಿಯೂ, ಸಂಪೂರ್ಣ ಮೊತ್ತವನ್ನು ದೇಣಿಗೆಯಾಗಿ ನೀಡಿದೆ.

ರೂ.167 ಕೋಟಿ ನಷ್ಟವನ್ನು ಅನುಭವಿಸಿದ ಟಕಿಡೋ ಲೀಸಿಂಗ್ ಆಪರೇಟರ್ಸ್ ಪ್ರೈವೇಟ್ ಲಿಮಿಟೆಡ್ 4 ಕೋಟಿ ಮೌಲ್ಯದ ಬಾಂಡ್ ಖರೀದಿಸಿ ಸಂಪೂರ್ಣ ಹಣವನ್ನು ನೀಡಿದೆ. ಇದಲ್ಲದೇ ಇನ್ನೂ ಹಲವು ಕಂಪನಿಗಳು ತಮ್ಮ ಲಾಭದ ಆರು ಪಟ್ಟು ಹಣವನ್ನು ಉದಾರವಾಗಿ ನೀಡಿದೆ. ಇದೆಲ್ಲವೂ ಅತ್ಯಂತ ಅನುಮಾನಾಸ್ಪದವಾಗಿದೆ. ಈ ಕಂಪನಿಗಳು ಮತ್ತು ಸಂಬಂಧಪಟ್ಟ ಬಿಜೆಪಿ ಮುಖಂಡರ ವಿರುದ್ಧ ಕೂಡಲೇ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದ್ದಾರೆ.

ದೇಶ

ನವದೆಹಲಿ: ಜಾರಿ ಇಲಾಖೆ ಬಂಧನದ ವಿರುದ್ಧ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಪ್ರಕರಣದ ತೀರ್ಪನ್ನು ದೆಹಲಿ ಹೈಕೋರ್ಟ್ ದಿನಾಂಕವನ್ನು ನಿರ್ದಿಷ್ಟಪಡಿಸದೆ ಮುಂದೂಡಿದೆ.

ಮದ್ಯ ನೀತಿ ಉಲ್ಲಂಘನೆ ಪ್ರಕರಣದಲ್ಲಿ ಕೇಜ್ರಿವಾಲ್ ಬಂಧನದ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ್ದಾರೆ. ಈ ಪ್ರಕರಣದ ವಿಚಾರಣೆ ಇಂದು ನಡೆಯಿತು.

ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, ತಪ್ಪಿತಸ್ಥರನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ವಾದಿಸಿದರು. ನಾವು ಅಪರಾಧ ಮಾಡುತ್ತೇವೆ. ಆದರೆ ಚುನಾವಣಾ ಕಾಲವಾದ್ದರಿಂದ ನಮ್ಮನ್ನು ಬಂಧಿಸಬಾರದು ಎಂದು ಹೇಳುವ ಹಕ್ಕು ವಿಚಾರಣಾಧೀನ ಕೈದಿಗಳಿಗೆ ಇಲ್ಲ.

ಇದು ಮೂರ್ಖತನ. ಚುನಾವಣೆಗೂ ಮುನ್ನ ರಾಜಕೀಯ ವ್ಯಕ್ತಿ ಕೊಲೆ ಮಾಡಿದರೆ ಬಂಧಿಸಬಾರದೇ? ಬಂಧನ ಕ್ರಮ ಕಿರುಕುಳ ಆಗುತ್ತದೆಯೇ? ಕೊಲೆ ಮಾಡಿದ ನಂತರ ಬಂಧಿಸುವುದು ಅಪರಾಧ ಎಂದು ಹೇಳಬಹುದೇ?  ಎಂದು ವಾದಿಸಿದರು.

ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಕೇಜ್ರಿವಾಲ್ ಅವರನ್ನು ಬಂಧಿಸುವ ಏಕೈಕ ಉದ್ದೇಶ ಅವರಿಗೆ ಕಿರುಕುಳ ನೀಡುವುದು ಮತ್ತು ದೆಹಲಿಯಲ್ಲಿ ಬಿಜೆಪಿಗೆ ನಿಜವಾದ ಸವಾಲಾಗಿರುವ ಆಮ್ ಆದ್ಮಿ ಪಕ್ಷವನ್ನು ಮೌನಗೊಳಿಸುವುದು. ಆಮ್ ಆದ್ಮಿ ಪಕ್ಷವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ.

ಜಾರಿ ಇಲಾಖೆ ಬಳಿ ಯಾವುದೇ ಸಾಕ್ಷ್ಯಗಳಿಲ್ಲ. ಚುನಾವಣೆಗೂ ಮುನ್ನ ಮುಖ್ಯಮಂತ್ರಿಯನ್ನು ಬಂಧಿಸುವುದು ಅನಗತ್ಯ ಎಂದು ವಾಗ್ದಾಳಿ ನಡೆಸಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯವು ತೀರ್ಪನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತು.

ದೇಶ

ಜಾರಿ ಇಲಾಖೆಯಿಂದ ಬಂಧಿಸಲಾದ ದೆಹಲಿ ಸಂಸದ ಸಂಜಯ್ ಸಿಂಗ್‌ಗೆ 6 ತಿಂಗಳ ನಂತರ ಜಾಮೀನು ನೀಡಲಾಗಿದೆ.

ನವದೆಹಲಿ: ಮದ್ಯ ನೀತಿಯ ದುರ್ಬಳಕೆ ಪ್ರಕರಣವು ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಸರ್ಕಾರಕ್ಕೆ ದೊಡ್ಡ ಬಿಕ್ಕಟ್ಟನ್ನು ಉಂಟುಮಾಡಿದೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಪ್ರಕರಣವನ್ನು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ದೆಹಲಿಯ ಉಪ ಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ, ಸಂಸದ ಸಂಜಯ್ ಸಿಂಗ್, ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಮುಂತಾದ ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕರನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

ಈ ಹಿನ್ನೆಲೆಯಲ್ಲಿ ದೆಹಲಿ ಸಂಸದ ಸಂಜಯ್ ಸಿಂಗ್ ಜಾಮೀನು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಇಂದು ವಿಚಾರಣೆಗೆ ಬಂದಿತ್ತು. ಆಗ ಸಂಜಯ್ ಸಿಂಗ್‌ಗೆ ಜಾಮೀನು ನೀಡಲು ಜಾರಿ ನಿರ್ದೇಶನಾಲಯ ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ನಂತರ ಸುಪ್ರೀಂ ಕೋರ್ಟ್ ಸಂಜಯ್ ಸಿಂಗ್‌ಗೆ ಜಾಮೀನು ನೀಡಿತು. ಈ ಆದೇಶವನ್ನು ಇತರ ಪ್ರಕರಣಗಳಿಗೆ ಮುನ್ನ ನಿದರ್ಶನವಾಗಿ ತೆಗೆದುಕೊಳ್ಳಬಾರದು ಎಂದೂ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ದೆಹಲಿ ಸಂಸದ ಸಂಜಯ್ ಸಿಂಗ್ ಅವರನ್ನು ಕಳೆದ ವರ್ಷ ಅಕ್ಟೋಬರ್ 4 ರಂದು ಜಾರಿ ಇಲಾಖೆ ಬಂಧಿಸಿತ್ತು. ದೆಹಲಿಯ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಸಂಜಯ್ ಸಿಂಗ್ ಅವರಿಗೆ 6 ತಿಂಗಳ ಬಳಿಕ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸಂಸತ್ ಚುನಾವಣೆಯ ಹೊಸ್ತಿಲಲ್ಲಿ ಸಂಜಯ್ ಸಿಂಗ್ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವುದು ರಾಜಕೀಯವಾಗಿಯೂ ಮಹತ್ವ ಪಡೆದುಕೊಂಡಿದೆ.