ತಮಿಳುನಾಡು: ಮರ್ಯಾದಾ ಹತ್ಯೆ ತಡೆಯಲು ಪ್ರತ್ಯೇಕ ಕಾನೂನಿಗೆ ಆಗ್ರಹ! - ಮುಖ್ಯಮಂತ್ರಿ ಸ್ಟಾಲಿನ್ ಮೌನ » Dynamic Leader
October 22, 2024
ದೇಶ

ತಮಿಳುನಾಡು: ಮರ್ಯಾದಾ ಹತ್ಯೆ ತಡೆಯಲು ಪ್ರತ್ಯೇಕ ಕಾನೂನಿಗೆ ಆಗ್ರಹ! – ಮುಖ್ಯಮಂತ್ರಿ ಸ್ಟಾಲಿನ್ ಮೌನ

 ಡಿ.ಸಿ.ಪ್ರಕಾಶ್

ತಮಿಳುನಾಡಿನಲ್ಲಿ ಹೆಚ್ಚುತ್ತಿರುವ ಮರ್ಯಾದಾ ಹತ್ಯೆಗಳನ್ನು ತಡೆಯಲು ಪ್ರತ್ಯೇಕ ಕಾನೂನು ರೂಪಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ!

ಭಾರತದಲ್ಲಿ ಮರ್ಯಾದಾ ಹತ್ಯೆಗಳು ನಿರಂತರವಾಗಿ ನಡೆಯುತ್ತಿರುವ ರಾಜ್ಯಗಳಲ್ಲಿ ತಮಿಳುನಾಡು ಕೂಡ ಒಂದು. ಅದರಲ್ಲೂ ಕಳೆದ ದಶಕದಲ್ಲಿ ತಮಿಳುನಾಡಿನಲ್ಲಿ 150ಕ್ಕೂ ಹೆಚ್ಚು ಜಾತಿ ಸಂಬಂಧಿತ ಹತ್ಯಗಳು ನಡೆದಿವೆ ಎಂದು ಅಂಕಿಅಂಶಗಳು ಹೇಳುತ್ತವೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಮರ್ಯಾದಾ ಹತ್ಯೆಗಳನ್ನು ತಡೆಯಲು ಪ್ರತ್ಯೇಕ ಕಾನೂನು ಜಾರಿಯಾಗಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಕಾನೂನು ನೀಡಿದೆ. ಆದರೆ ಜಾತಿಯ ಹೆಸರಿನಲ್ಲಿ ಆ ಹಕ್ಕನ್ನು ಕಸಿದುಕೊಳ್ಳುವ ಕ್ರೌರ್ಯ ನಮ್ಮ ಸಮಾಜದಲ್ಲಿ ನಡೆಯುತ್ತಿದೆ. ತಮ್ಮ ಸ್ವಂತ ಇಚ್ಚೆಯ ಆಧಾರದ ಮೇಲೆ ಕೂಡಿ ಬಾಳುವ ಆಯ್ಕೆಯನ್ನು ಕೈಗೆತ್ತಿಕೊಳ್ಳುವ ಯುವ ಜೋಡಿಗಳನ್ನು ಕೊಲ್ಲಲಾಗುತ್ತದೆ.

ಮರ್ಯಾದಾ ಹತ್ಯೆಯಲ್ಲಿ ಜೀವ ಕಳೆದುಕೊಂಡ ಗೋಕುಲ್ ರಾಜ್

ಜಾತಿ ಸಂಘಟನೆಗಳು ಮತ್ತು ಜಾತಿ ಆಧಾರಿತ ರಾಜಕೀಯ ಪಕ್ಷಗಳು ಇದರ ಹಿಂದೆ ಇವೆ. ಜಾತಿಗೆ ವಿರುದ್ಧವಾಗಿ ಮದುವೆಯಾಗುವ ಯುವ ಜೋಡಿಗಳನ್ನು ಗೌರವ ಮತ್ತು ಜಾತಿ ಶುದ್ಧತೆಯ ಹೆಸರಿನಲ್ಲಿ ಹತ್ಯೆ ಮಾಡಲಾಗುತ್ತದೆ. ಅಂತಹ ಕೊಲೆಗಳು ಮತ್ತು ಸಂಬಂಧಿತ ಅಪರಾಧಗಳನ್ನು ಶಿಕ್ಷಿಸುವ ಕಾನೂನು ಭಾರತದಲ್ಲಿಲ್ಲ. ಹಾಗಾಗಿ ಮರ್ಯಾದಾ ಹತ್ಯೆಗಳು ಸೇರಿದಂತೆ ಅಪರಾಧಗಳಿಗೆ ಪ್ರತ್ಯೇಕ ಕಾನೂನು ಜಾರಿಗೆ ತರಬೇಕು ಎಂದು ಕಮ್ಯುನಿಸ್ಟ್ ಪಕ್ಷಗಳು ಸೇರಿದಂತೆ ಸಂಘಟನೆಗಳು ಒತ್ತಾಯಿಸುತ್ತಿವೆ.

ಮರ್ಯಾದಾ ಹತ್ಯೆಗಳನ್ನು ತಡೆಯಲು ಪ್ರತ್ಯೇಕ ಕಾನೂನು ತರುವಂತೆ ಸಿಪಿಎಂ, ಸಿಪಿಐ, ಕಾಂಗ್ರೆಸ್ ಸೇರಿದಂತೆ ಪಕ್ಷಗಳ ಶಾಸಕರು ತಮಿಳುನಾಡು ವಿಧಾನಸಭೆಯಲ್ಲಿ ಹಲವು ಬಾರಿ ಧ್ವನಿ ಎತ್ತಿದ್ದಾರೆ. ಓ.ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿದ್ದಾಗಲೂ ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿತ್ತು.

ಸ್ಟಾಲಿನ್ ಮುಖ್ಯಮಂತ್ರಿಯಾದ ನಂತರವೂ ಪ್ರತ್ಯೇಕ ಕಾನೂನು ಬೇಡಿಕೆ ಮುಂದಿಟ್ಟು ವಿಧಾನಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಇತ್ತೀಚೆಗಷ್ಟೇ ತಿರುನಲ್ವೇಲಿಯಲ್ಲಿ ಅಂತರ್ಜಾತಿ ದಂಪತಿಗಳಿಗೆ ಆಶ್ರಯ ನೀಡಿದ್ದಕ್ಕಾಗಿ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಕಚೇರಿಯನ್ನು ಧ್ವಂಸ ಮಾಡಿದ್ದು ತಮಿಳುನಾಡಿನ ರಾಜಕೀಯ ವಲಯದಲ್ಲಿ ಭಾರೀ ಆಘಾತವನ್ನು ಉಂಟು ಮಾಡಿತ್ತು.

ಸಿಪಿಎಂ ಕಚೇರಿ ಮೇಲಿನ ದಾಳಿ

ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಸಿಪಿಎಂ ಕಚೇರಿ ಮೇಲಿನ ದಾಳಿ ಕುರಿತು ಗಮನ ಸೆಳೆಯುವ ನಿರ್ಣಯ ಮಂಡಿಸಲಾಯಿತು. ಆ ವೇಳೆ ಕಾಂಗ್ರೆಸ್, ಸಿಪಿಎಂ, ಸಿಪಿಐ, ಎಂಡಿಎಂಕೆ, ವಿಡುದಲೈ ಚಿರುತ್ತೈಗಳ್, ಟಿವಿಕೆ, ಎಂಡಿಎಂಕೆ, ಬಿಜೆಪಿ ಶಾಸಕರು ಸಿಪಿಎಂ ಕಚೇರಿ ಮೇಲಿನ ದಾಳಿಯನ್ನು ಖಂಡಿಸಿದರು. ಇದರಲ್ಲಿ ಪಿಎಂಕೆ (ಪಾಟಾಳಿ ಮಕ್ಕಳ್ ಕಚ್ಚಿ) ಮತ್ತು ಕೊಂಗು ಮಕ್ಕಳ್ ದೇಸಿಯ ಕಚ್ಚಿ ಭಾಗವಹಿಸಲಿಲ್ಲ.

ಗಮನ ಸೆಳೆಯುವ ನಿರ್ಣಯಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸ್ಟಾಲಿನ್, ‘ಅಂತರ್ಜಾತಿ ವಿವಾಹಗಳಿಗೆ ಸಂಬಂಧಿಸಿದ ಎಲ್ಲಾ ರೀತಿಯ ಅಪರಾಧಗಳ ವಿಚಾರಣೆಗೆ ಸರ್ಕಾರದಿಂದ ಪ್ರತ್ಯೇಕವಾಗಿ ವಿಶೇಷ ಕ್ರಿಮಿನಲ್ ಪ್ರಾಸಿಕ್ಯೂಟರನ್ನು ನೇಮಿಸಲಾಗುವುದು. ಇಂತಹ ಪ್ರಕರಣಗಳಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಗಳ ಬದಲಿಗೆ ಉಪ ಪೊಲೀಸ್ ವರಿಷ್ಠಾಧಿಕಾರಿಯನ್ನು ತನಿಖಾ ಅಧಿಕಾರಿಯನ್ನಾಗಿ ನೇಮಿಸಲು ಕ್ರಮಕೈಗೊಳ್ಳಲಾಗುವುದು’ ಎಂದರು.

ಮರ್ಯಾದಾ ಹತ್ಯೆಗಳು ಸೇರಿದಂತೆ ಅಪರಾಧಗಳನ್ನು ತಡೆಯಲು ಪ್ರತ್ಯೇಕ ಕಾನೂನು ರೂಪಿಸಬೇಕು ಎಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸ್ಟಾಲಿನ್, ‘ಪ್ರತ್ಯೇಕ ಕಾನೂನನ್ನು ತರುವ ಬದಲು, ಅಸ್ತಿತ್ವದಲ್ಲಿರುವ ಕಾನೂನುಗಳು, ವಿಶೇಷವಾಗಿ ದೌರ್ಜನ್ಯ ತಡೆ ಕಾಯಿದೆ, ಭಾರತೀಯ ದಂಡ ಸಂಹಿತೆ ಮತ್ತು ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆಯ ಆಧಾರದ ಮೇಲೆ ಗಂಭೀರ ಮತ್ತು ತ್ವರಿತ ಕ್ರಮಗಳನ್ನು ತೆಗೆದುಕೊಂಡು ಅಪರಾಧಿಗಳನ್ನು ಕಾನೂನಿನ ಮುಂದೆ ತರುವುದು ಸರಿಯಾಗಿರುತ್ತದೆ ಎಂದು ಈ ಸರ್ಕಾರ ನಂಬುತ್ತದೆ’ ಎಂದು ಹೇಳಿದರು.

ಮರ್ಯಾದಾ ಹತ್ಯೆಯಲ್ಲಿ ಜೀವ ಕಳೆದುಕೊಂಡ ಧರ್ಮಪುರಿ ಇಳವರಸು

ಅಂದರೆ ಮರ್ಯಾದಾ ಹತ್ಯೆಗಳನ್ನು ತಡೆಯಲು ಪ್ರತ್ಯೇಕ ಕಾನೂನು ಅಗತ್ಯವಿಲ್ಲ ಎಂಬ ನಿಲುವನ್ನು ಡಿಎಂಕೆ ಸರ್ಕಾರ ತೆಗೆದುಕೊಂಡಿದೆ ಎಂಬುದು ಇದರ ಮೂಲಕ ಸ್ಪಷ್ಟವಾಗಿ ಕಾಣುತ್ತದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ತಮ್ಮ ನಿಲುವನ್ನು ಮರುಪರಿಶೀಲಿಸಬೇಕು ಎಂದು ತಮಿಳುನಾಡು ಅಸ್ಪೃಶ್ಯತೆ ನಿರ್ಮೂಲನಾ ಸಮಿತಿ ಒತ್ತಾಯಿಸಿದೆ.

ಈ ಕುರಿತು ತಮಿಳುನಾಡು ಅಸ್ಪೃಶ್ಯತೆ ನಿರ್ಮೂಲನಾ ಸಮಿತಿಯ ಅಧ್ಯಕ್ಷ ಚೆಲ್ಲಕಣ್ಣು, ಪ್ರಧಾನ ಕಾರ್ಯದರ್ಶಿ ಸ್ಯಾಮ್ಯುಯೆಲ್ ರಾಜ ಹೇಳಿಕೆ ನೀಡಿದ್ದಾರೆ. ಅದರಲ್ಲಿ, ‘ಮರ್ಯಾದಾ ಹತ್ಯೆಗಳ ವಿರುದ್ಧ ಪ್ರತ್ಯೇಕ ಕಾನೂನು ಅಗತ್ಯವಿಲ್ಲ ಎಂಬ ಮುಖ್ಯಮಂತ್ರಿಯವರ ಹೇಳಿಕೆ ಸ್ವೀಕಾರಾರ್ಹವಲ್ಲ. ಮರ್ಯಾದಾ ಹತ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಕಾನೂನಿನ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ.

ಅಂತರ್ಜಾತಿ ಪ್ರೇಮಿಗಳನ್ನು ಬರ್ಬರವಾಗಿ ಕೊಲ್ಲಲಾಗುತ್ತದೆ. ದಂಪತಿ ಅಥವಾ ಅವರ ಸಂಬಂಧಿಕರನ್ನು ಗ್ರಾಮದಿಂದ ಬಹಿಷ್ಕರಿಸುವುದು, ಶಿಕ್ಷೆ, ಸಾಮಾಜಿಕ ಬಹಿಷ್ಕಾರ, ಆರ್ಥಿಕ ದಿಗ್ಬಂಧನ, ಆಸ್ತಿಯ ಹಕ್ಕುಗಳ ನಿರಾಕರಣೆ ಮುಂತಾದ ದೌರ್ಜನ್ಯಗಳು ಸಹ ಪ್ರದರ್ಶಿಸಲಾಗುತ್ತದೆ.

ಮರ್ಯಾದಾ ಹತ್ಯೆಯಲ್ಲಿ ಜೀವ ಕಳೆದುಕೊಂಡ ಉಡುಮಲೈ ಶಂಕರ್

ಉಡುಮಲೈ ಶಂಕರ್ ಅವರಿಂದ ಆರಂಭಗೊಂಡು, ಪೊಲೀಸ್ ಠಾಣೆಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದ ಕಾರಣ ವಿವಿಧ ಮರ್ಯಾದಾ ಹತ್ಯೆಗಳ ಪ್ರಕರಣಗಳು ಹಾಗೆಯೇ ಸ್ಥಗಿತಗೊಂಡಿವೆ. ಆದ್ದರಿಂದ, ವಿಶೇಷ ಕಾನೂನು ಅಗತ್ಯವಿದೆ. ಮೌಖಿಕವಾಗಿ ಅಥವಾ ಲಿಖಿತವಾಗಿ, ಪೊಲೀಸ್ ಠಾಣೆಯಲ್ಲಿ ಅಥವಾ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಮಾಣೀಕರಿಸಿ ಅಂತರ್ಜಾತಿ ವಿವಾಹಕ್ಕೆ ಮುಂದಾಗುವ ದಂಪತಿಗಳನ್ನು ಪ್ರತ್ಯೇಕಿಸುವ ಪ್ರಕ್ರಿಯೆಯಲ್ಲಿ ಪೊಲೀಸರು ತೊಡಗಬಾರದು. ಉಲ್ಲಂಘಿಸಿದರೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಬೇಕು. ಮರ್ಯಾದಾ ಹತ್ಯೆಗಳು ಸೇರಿದಂತೆ ಅಪರಾಧಗಳಿಗೆ ಪ್ರತ್ಯೇಕ ಕಾನೂನು ಜಾರಿ ಮಾಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಡಿಎಂಕೆಯ ಮಿತ್ರಪಕ್ಷವಾದ ವಿಡುದಲೈ ಚಿರುತ್ತೈಗಳ್ ಪಕ್ಷದ ನಾಯಕ ತೊಲ್ ತಿರುಮಾವಳವನ್ ಕೂಡ ಪ್ರತ್ಯೇಕ ಕಾನೂನಿಗೆ ಒತ್ತಾಯಿಸಿದ್ದಾರೆ. ಅವರು, ‘ತಮಿಳುನಾಡಿನಲ್ಲಿ ಮರ್ಯಾದಾ ಹತ್ಯೆಗಳನ್ನು ನಿಯಂತ್ರಿಸಲು ಭಾರತೀಯ ಕಾನೂನು ಆಯೋಗ ಮತ್ತು ಸುಪ್ರೀಂ ಕೋರ್ಟ್‌ನ ಸೂಚನೆಗಳನ್ನು ಆಧರಿಸಿ ತಮಿಳುನಾಡು ಸರ್ಕಾರವು ವಿಶೇಷ ಕಾನೂನನ್ನು ಜಾರಿಗೊಳಿಸಬೇಕು; ಅಲ್ಲಿಯವರೆಗೆ, 2018ರಲ್ಲಿ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ನಿರ್ದಿಷ್ಟಪಡಿಸಿದ ಕಾರ್ಯವಿಧಾನಗಳನ್ನು ಅನುಸರಿಸಬೇಕು ಎಂದು ವಿಡುದಲೈ ಚಿರುತ್ತೈಗಳ್ ಪಕ್ಷದ ಪರವಾಗಿ ಒತ್ತಾಯಿಸುತ್ತೇವೆ’ ಎಂದು ಅವರು ಸುದೀರ್ಘ ಹೇಳಿಕೆಯನ್ನು ಪ್ರಕಟಿಸಿದ್ದಾರೆ.

ಆದರೂ ಡಿಎಂಕೆ ಈ ವಿಚಾರದಲ್ಲಿ ಪ್ರತ್ಯೇಕ ಕಾನೂನು ಬೇಕಿಲ್ಲ ಎಂಬ ಮನೋಭಾವನೆಯಲ್ಲಿ ಮುಂದುವರಿದಂತೆ ಕಾಣುತ್ತಿದೆ. ಸಮ್ಮಿಶ್ರ ಪಕ್ಷಗಳ ಬೇಡಿಕೆಗಳನ್ನು ಡಿಎಂಕೆ ಸರ್ಕಾರ ಒಪ್ಪಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Related Posts